ಬೆಡಗಿನ ತಾಣ ಜಯಪುರ 2017

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಕಲ್ಪನಾ ನಕ್ಷೆ

ಪಾಠದ ಉದ್ದೇಶಗಳು

ಪಠ್ಯ ವಿಷಯದ ಉದ್ದೇಶಗಳು

  1. ಕನ್ನಡದ ಶ್ರೇಷ್ಠ ಲೇಖಕರ ವ್ಯಕ್ತಿತ್ವವನ್ನು ವಿವರಿಸುವುದು.
  2. ಪ್ರವಾಸ ಸಾಹಿತ್ಯದ ಮೂಲಕ ಜಯಪುರವನ್ನು ಅರ್ಥೈಸುವುದು ಅನುಭವಿಸುವುದು
  3. ಭಾರತದ ವಿಭಿನ್ನ ಪ್ರದೇಶ ಸಂಸ್ಕೃತಿಯ ಪ್ರತ್ಯೇಕಿಸುವುದು
  4. ಪ್ರಾದೇಶಿಕ ವಿಭಿನ್ನತೆಗಳನ್ನು ಹೋಲಿಕೆ ಮಾಡುವುದು

ಭಾಷಾ ಉದ್ದೇಶಗಳು

  1. ಕಥೆಯನ್ನು ಹೇಳಲು ಮತ್ತು ಸಂವಹನ ಮಾಡಲು ಚಿತ್ರ ಸಂಪನ್ಮೂಲದ ಬಳಸಿಕೊಳ್ಳುವುದು.
  2. ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಇಂಡಿಕ್‌ ಅನಾಗ್ರಾಮ್ ಅನ್ವಯಕದ ಜೊತೆ ಡಿಜಿಟಲ್‌ ಟೂಲ್ಸ್ ಬಳಸಿ ಕಾರ್ಯ ನಿರ್ವಹಿಸುವುದು
  3. ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ಸಂಪನ್ಮೂಲದ ಜೊತೆ ಕಾರ್ಯನಿರವಹಿಸುವುದು.
  4. ಇತರ ಸಾಹಿತ್ಯ ಪ್ರಕಾರಗಳೊಂದಿಗೆ ಹೋಲಿಸಲು ವಿಕಿಪೀಡಿಯಾದಂತಹ ಮುಶೈಸಂ ಬಳಕೆ.
  5. ಮಾದರಿ ಸಾಹಿತ್ಯವನ್ನು ಸೃಷ್ಟಿಮಾಡುವುದು.

ಪಾಠದ ಜ್ಞಾನ

ಜಯಪುರದಲ್ಲಿ ಕಾರಂತ

ಚಿತ್ರ:ಜಯಪುರದಲ್ಲಿ ಕಾರಂತರು.mmಪ್ರಯಾಣದ ಅನುಭವ

ಜಯಪುರ ಕಾರಂತರ ಪಾಲಿಗೆ ಹೊಸತಾಗಿರಲಿಲ್ಲ. ಅವರು ಹದಿನೈದು ವರ್ಷಗಳ ಹಿಂದೊಮ್ಮೆ ಹೋಗಿದ್ದರು. ಈ ಬಾರಿ ಕಾರಂತರು ಮತ್ತು ಶ್ರೀಪತಿರವರು ರೈಲಿನಿಂದ ಇಳಿದಾಗ ಬೆಳಗಿನ ಹನ್ನೊಂದು ಗಂಟೆಯ ಬಿಸಿಲು ಬಡಿಯುತ್ತಿತ್ತು. ಅವರ ಮಿತ್ರರಾದ ರೈ ಗಳು ನಿಲ್ದಾಣಕ್ಕೆ ಬಂದು ಇವರುಗಳಿಗಾಗಿ ಕಾದಿದ್ದರು. ಅವರನ್ನು ಊರ ಹೊರಗಿನ ಅವರ ಮನೆಗೆ ಕರೆದುಕೊಂಡು ಹೋದರು. ಹೊರಗಡೆ ನಾಲ್ಕು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯಲ್ಲಿ ಅವರ ಮನೆಯಿತ್ತು. ಅಲ್ಲಿ ಮಧ್ಯಾಹ್ನದ ವೇಳೆ ಸ್ನಾನಕ್ಕೆ ನೀರುಕಾಯಿಸುವ ಅಗತ್ಯವಿರಲಿಲ್ಲ, ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರಿತ್ತಿತ್ತು. ಕಾರಂತರೇನೋ ಬಿಸಿನೀರು ಸ್ನಾನ ಮಾಡುವವರು. ಆದರೆ ಅವರಿಗೆ ಆದದ್ದು ಶ್ರೀಪತಿಗೆ ಆಗದು. ಶ್ರೀಪತಿ ತಣ್ಣೀರು ಮೀಯುತ್ತಿದ್ದರು. ನೀರನ್ನು ಆರಿಸಿ ತಣ್ಣೀರಿನ ಸ್ನಾನ ಮಾಡಿದರು. ಅನಂತರ ಊಟ ಮಾಡಿ ಒಂದೆರಡು ತಾಸು ವಿಶ್ರಾಂತಿ ಪಡೆದರು.

ಜಯಪುರದ ಜನರ ಪರಿಚಯ

ಅವರ ಮೊದಲ ಕಾರ್ಯಕ್ರಮವೆಂದರೆ ಅಂಬೇರಕ್ಕೆ ಹೋಗುವುದು, ಊರ ಹೊರಗಿರುವ ಅವರ ಮಿತ್ರ 'ರೈ' ಗಳಿಗೆ, ಅಂಬೇರಕ್ಕೂ, ಜಯಪುರಕ್ಕೂ ನಡುವೆ ಸಿಟಿ ಬಸ್ ನಡೆಯುತ್ತಿತ್ತೆಂದು ಸಹ ಗೊತ್ತಿರಲಿಲ್ಲ. ಹೀಗಾಗಿ ಟಾಂಗಾವನ್ನು ಗೊತ್ತುಮಾಡಿಕೊಂಡು ನಗರದ ಮಧ್ಯಭಾಗದಿಂದ ಹಾದು ಹೋದರು. ಜಯಪುರದ ಮುಖ್ಯಬೀದಿಗಳು ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನು ಬೀರಿದವು. ಒಂದು ಶತಮಾನದ ಹಿಂದೆ ಆ ನಗರದ ಬೀದಿಗಳು ನಿರ್ಮಾಣವಾಗಿದ್ದರೂ ಬಹಳ ಅಗಲವಾದ ಬೀದಿಗಳವು; ನೇರವಾದವುಗಳು.ಬಹು ದೂರದಿಂದ ಕಾಣಿಸುವ ಅಂಗಡಿ - ಮನೆಗಳ ದೇಶೀ ವಾಸ್ತುರಚನೆ ಚೆನ್ನಾಗಿ ಶೋಭಿಸುತ್ತಿತ್ತು.ಇಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ, ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ. ಆದುದರಿಂದಲೇ ಕಾರಂತರಿಗೆ ಅವುಗಳ ಮೇಲೆ ಮೋಹ. ಇಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ. ಕೆಲವೊಂದು ಕಡೆಯಲ್ಲಿ ಭವ್ಯವಾದ ಮಹಾದ್ವಾರಗಳಿವೆ. ಅಲ್ಲದೆ ಜಯಪುರ ಬಣ್ಣಗಾರರ ತವರೂರು.ಬಣ್ಣ ಹಾಕುವ ಕುಶಲಿಗರು ಬಹಳಮಂದಿ ಇದ್ದಾರೆ. ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ. ಗಿಡಮರಗಳಿಲ್ಲದ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಕಣ್ಣಿನ ತಣಿವು ಹೇಗೆ ಬರಬೇಕು? ಹಾಗೆಂದೋ ಏನೋ, ಇಲ್ಲಿನ ಜನರು ಅದರಲ್ಲೂ ಹೆಂಗಸರು ರಂಗು ರಂಗಿನ ಲಂಗ, ಪಾಯಿಜಾಮಾ,ಸೀರೆ,ರವಿಕೆ,ಮೇಲುದೆ ತೊಡುವ ಅಭ್ಯಾಸದವರು. ಅದರಲ್ಲೂ ಕೆಂಪು,ಕಿತ್ತಳೆ, ಹಳದಿ ಎಂದರೆ ಪ್ರಾಣ. ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂತೆ ಬಣ್ಣದ ಚೆಲ್ಲಾಟ ಅವರ ಬಟ್ಟೆಗಳಲ್ಲಿ. ಗಂಡಸರೂ ರಂಗುಗಾರರೇ. ಅವರ ಪಂಚೆ, ಅಂಗಿಗಳಲ್ಲಿ ರಂಗು ಕಾಣಿಸದೇ ಇದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಸುವುದುಂಟು. ಸುತ್ತು ಸುತ್ತಿನ ಅವರ ದೇಶೀ ಮುಂಡಾಸನ್ನು ಚನ್ನಾಗಿ ಬಿಗಿದು ಕೊಂಡಾಗ ಬಲು ಗಂಭೀರವಾಗಿಯೇ ಕಾಣಿಸುತ್ತದೆ.

ಅರಮನೆಯ ಸುತ್ತ ಒಂದು ಸುತ್ತು

ಚಿತ್ರ:3.ಅರಮನೆಯ ಸುತ್ತ ಒಂದು ಸುತ್ತು.mmಜಯಪುರದ ಅರಮನೆ ಏಳು ಮಹಡಿಗಳ ಮಹಾಸೌಧ. ಒಮ್ಮೆ ಕಾರಂತರು ಅವರ ಗೆಳೆಯನ ಜೊತೆ ಸೇರಿ ಜಯಪುರದ ಭೇಟಿಗೆ ಹೊರೆಟರು. ಈ ಮೊದಲೇ ಒಮ್ಮೆ ಅವರು ಭೇಡಿಯಾಗಿದ್ದರು ಸಹ. ಈ ಭಾರಿ ಅಲ್ಲಿನ ಕೋಟೆ, ದೇವಾಲಯ , ಜಂತರ್‌ ಮಂತರ್‌ ಮೊದಲಾದ ಸ್ಥಳಗಳನ್ನು ವೀಕ್ಷಿಸಿದರು.

ಅರಮನೆಯ ವೈಭವ

ಅಲ್ಬರ್ಟ್ ಹಾಲ್ ವಸ್ತುಸಂಗ್ರಹಾಲಯ

ಇದು ಜಯಪುರದ ರಾಮನಿವಾಸ್ ಭಾಗದಲ್ಲಿ ನಿರ್ಮಾಣವಾಗಿದೆ. ಇದು 19ನೇ ಶತಮಾನದ ಶ್ರೇಷ್ಟವಾದ ವಸ್ತುಸಂಗ್ರಹಾಲಯ. ಇಲ್ಲಿ ಸುಮಾರು 19 ಸಾವಿರ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಮಣ್ಣಿನ, ಮರದ ಕೆತ್ತನೆಯ, ಲೋಹದಿಂದ ತಯಾರಿಸಿದ ವಸ್ತುಗಳಲ್ಲದೆ ಶಿಲ್ಪ ಕಲಾಕೃತಿಗಳು, ರತ್ನಗಂಬಳಿಗಳು, ವಿವಿಧ ಬಗೆಯ ಬೆಲೆಬಾಳುವ ವಸ್ತ್ರಗಳು, ಮಣ್ಣಿನ ಆಕೃತಿಗಳು, ವರ್ಣ ಚಿತ್ರಕಲೆ, ಸಂಗೀತ ಸಾಮಗ್ರಿಗಳು, ಆಭರಣಗಳು, ಈಜಿಪ್ಟ್ ನ ಮಮ್ಮಿಗಳು, ಪಿಂಗಾಣಿಯ ವಸ್ತುಗಳು ಈ ಸಂಗ್ರಹಾಲಯವನ್ನು ವಿಶ್ವದರ್ಜೆಗೇರಿಸಿವೆ. ಜಯಪುರದ ಪ್ರವಾಸದಲ್ಲಿ ಈ ಸಂಗ್ರಹಾಲಯದ ಸಂದರ್ಶನ ಅವಿಸ್ಮರಣೀಯ.

ಜಲಮಹಲ್

ಇದು ಸರೋವರದ ಅರಮನೆಯಾಗಿದೆ. ಇದನ್ನು ಮಾನ್ ಸಾಗರ್ ಸರೋವರದ ನಡುವೆ ಮತ್ತು ಅಮೇರ್ ನ ಸಮೀಪ ನಿರ್ಮಿಸಲಾಗಿದೆ. ಇದು ಇಲ್ಲಿನ ಐದು ಪ್ರಮುಖ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿದೆ. ಇದನ್ನು ಕೆಂಪು ಮರಳುಶಿಲೆಯಲ್ಲಿ ಕಟ್ಟಲಾಗಿದೆ. ಇಲ್ಲಿನ ವಿಶೇಷವೆಂದರೆ ಈ ಮಹಲ್ನ ಮೇಲ್ಭಾಗದಲ್ಲಿ ಉದ್ಯಾನವನವಿದೆ. ಇದು ಸುಂದರವಾದ ಮರಗಿಡಗಳಿಂದ ಕೂಡಿದ್ದು ನೋಡಲು ಬಹಳ ಮನೋಹರವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಈ ಅರಮನೆಯಲ್ಲಿ ಅವಿಸ್ಮರಣೀಯ ಸಂಜೆಯ ಸವಿನೋಟವನ್ನು ಆನಂದಿಸುತ್ತಾರೆ.

ಸಿಟಿ ಪ್ಯಾಲೇಸ್

ಇದು ಜಯಪುರದ ಹೃದಯಭಾಗದಲ್ಲಿದೆ. ಇದನ್ನು ಮಹಾರಾಜರ ವೈಭವದ ಕುಟುಂಬಗಳಿಗಾಗಿ ನಿರ್ಮಿಸಲಾಯಿತು. ಇದನ್ನು ಮಹಾರಾಜ ಎರಡನೇ ಸವಾಯ್ ಜೈಸಿಂಗ್ ಕಟ್ಟಿಸಿದನು. ಇದು ಭಾರತದ ಸುಂದರ ವಾಸ್ತುಶಿಲ್ಪಕಲೆಗೆ ಉತ್ತಮ ಉದಾಹರಣೆಯಾಗಿದೆ. ಇಲ್ಲಿನ ಪ್ರಮುಖ ವೈಶಿಷ್ಟ್ಯವೆಂದರೆ ಪ್ರಪಂಚದಲ್ಲೆ ಬಹುದೊಡ್ಡ ಬೆಳ್ಳಿಯ ಗಂಗಾಜಲ ಪಾತ್ರೆ. ಇದನ್ನು ಪವಿತ್ರವಾದ ಗಂಗಾಜಲವನ್ನು ಸಂಗ್ರಹಿಸಿಡಲು ಬಳಸುತ್ತಿದ್ದರು. ಇದು ಪ್ರಪಂಚದಲ್ಲೆ ಅತಿದೊಡ್ಡ ಗಂಗಾಜಲ ಪಾತ್ರೆ ಎಂದು ಹೆಸರಾಗಿದ್ದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಜಯಪುರವು ತನ್ನಲ್ಲಿರುವ ಅಭೂತಪೂರ್ವವಾದ ಶಿಲ್ಪಕಲಾಕೃತಿಗಳಿಂದ, ಪ್ರಾಕೃತಿಕ ಸೌಂದರ್ಯದಿಂದ ಅಲ್ಲದೆ ಕಲಾಪೂರ್ಣವಾದ ವಿನ್ಯಾಸ, ರಾಜರ ಘನತೆಗೆ ತಕ್ಕಂತಹ ಯೋಜನಾ ಪೂರ್ವಕವಾದ ಕಟ್ಟಡ ನಿರ್ಮಾಣ ಪ್ರವಾಸಿಗರನ್ನು ಮನಸೂರೆಗೊಳ್ಳುವುದರ ಮೂಲಕ ಬೆಡಗಿನ ತಾಣವೆನಿಸಿದೆ.

ಹವಾಮಹಲ್

ಹವಾಮಹಲ್ ಇದು ಜಯಪುರದ ಸುವರ್ಣ ಮಕುಟದಂತಿದೆ. ಇದನ್ನು ಆಂಗ್ಲ ಭಾಷೆಯಲ್ಲಿ Palace Of Winds ಎಂದು ಕರೆಯಲಾಗುತ್ತದೆ. ಇದನ್ನು ಮಹಾರಾಜ ಸವಾಯಿ ಪ್ರತಾಪ್ ಸಿಂಗ್ 1799ರಲ್ಲಿ ಕಟ್ಟಿಸಿದನು. ಸವಾಯಿ ಪ್ರತಾಪ್ ಸಿಂಗ್ ಭಗವಾನ್ ಕೃಷ್ಣನ ಭಕ್ತನಾಗಿದ್ದನು. ಆದ್ದರಿಂದ ಈ ಅರಮನೆಯನ್ನು ಅವನು ತನ್ನ ಭಕ್ತಿಗಾಗಿ ಸಮರ್ಪಿಸಿದನು. ಇದರ ಆಕಾರವು ಮಹಾರಾಜನ ಶಿರದಲ್ಲಿ ಶೋಭಿಸುವ ಕಿರೀಟದಂತಿದೆ. ಇದರ ರಚನೆಯಲ್ಲಿ ಪಿರಮಿಡ್ ಆಕಾರದ ಸಣ್ಣ ಸಣ್ಣ ರಚನೆಗಳನ್ನು ಒಂದರಮೇಲೊಂದು ಪೇರಿಸಿದಂತೆ ನಿರ್ಮಿಸಲಾಗಿದೆ. ಕಮಾನಿನಾಕಾರದ ರಚನೆಗಳು, ಕೂಡಿದ್ದು ಬಹಳ ವಿಶಾಲವಾಗಿದೆ. ಈ ಅರಮನೆಯ ಪ್ರತಿ ಕೋಣೆಯೂ ಮನೋಹರವಾಗಿದೆ. 7 ಅಡಿ ಎತ್ತರದ ತಳಹದಿಯ ಮೇಲೆ ನಿರ್ಮಿತವಾಗಿರುವ ಇದು ಸುಮಾರು 900 ಕಮಾನು ದ್ವಾರಗಳನ್ನು ಒಳಗೊಂಡಿದೆ. ವೃತ್ತಾಕಾರದ, ಕಮಾನಿನಂತೆ ಬಾಗಿದ ರಚನೆಗಳು ಮತ್ತು ಗೋಪುರಗಳು, ಬೆಣಚುಕಲ್ಲಿನ ಜಾಲಾಂದ್ರಗಳು (ಗ್ರಿಲ್‌ಗಳು) ಈ ಅರಮನೆಗೆ ಒಂದು ಅಭೂತಪೂರ್ವವಾದ ರೂಪ ನೀಡಿವೆ.

ಕೋಟೆಗಳು

ಅಂಬೇರಾಕೋಟೆ

ಇದು ಕೋಟೆ ಮತ್ತು ಅರಮನೆಗಳ ಸಂಕೀರ್ಣವಾಗಿದೆ. ಇಲ್ಲಿ ಮುಖ್ಯವಾಗಿ ಜಲೇವ್ ಚಾವ್, ಸಿಂಗ್ ಪೌಲ್, ದಿವಾನೆ ಆನೆ ಆಮ್, ದಿವಾನೆ ಖಾಸ್, ಶೀಷ್ ಮಹಲ್, ಗಣೇಶ್ ಪೌಲ್, ಯಶ್ ಮಂದಿರ್, ಸುಖ್ ಮಂದಿರ್, ಸುಹಾಗ್ ಮಂದಿರ್, ಶಿಲಾದೇವಿ ದೇವಾಲಯ, ಬಾರಾದರಿ, ಬೂಲ್ ಬುಲಾಯ, ಜವಾನ್ ಡ್ಯೂಡಿ ಹಾಗು ಮಹಿಳೆಯರಿಗಾಗಿ ಅಂತಃಪುರಗಳನ್ನು ಒಳಗೊಂಡಿದೆ. ಅಂಬರ್ ಕೋಟೆಯು ಒಂದು ಬೆಟ್ಟದ ಮೇಲೆ ನಿರ್ಮಾಣವಾಗಿದೆ. ಕೋಟೆಯನ್ನು ಏರಲು ಎರಡು ಮಾರ್ಗಗಳಿವೆ. ಒಂದು ಆನೆಯ ಮೇಲೆ ಕುಳಿತು ಹೋಗುವುದು, ಮತ್ತೊಂದು ಕಾಲುನಡಿಗೆಯ ಮಾರ್ಗ. ಇದು ಸಿಮೆಂಟಿನಿಂದ ಕಟ್ಟಲಾದ ಮೆಟ್ಟಿಲುಗಳಂತೆ ಕಾಣುತ್ತದೆ. ಇತ್ತೀಚೆಗೆ ಒಂದು ರಸ್ತೆಯನ್ನು ನಿರ್ಮಿಸಲಾಗಿದ್ದು ಬೆಟ್ಟದ ತಳದಿಂದ ಕೋಟೆ ತಲುಪಲು ಅನುಕೂಲಕರವಾಗಿದೆ. ಈ ಅಂಬೇರಾ ಕೋಟೆಯ ಪ್ರವಾಸದ ಆನಂದವನ್ನು ಅನುಭವಿಸಬೇಕಾದರೆ ಕಾಲುನಡಿಗೆ ಅಥವಾ ಆನೆಸವಾರಿ ಉಚಿತವಾದುದು.

ನಾಹರ್ಗಡ ಕೋಟೆ

ಇದು ಬೆಟ್ಟದ ಮೇಲೆ ಸುಮಾರು 700 ಅಡಿ ಎತ್ತರದಲ್ಲಿ ನಿರ್ಮಾಣವಾಗಿದೆ. ಇದನ್ನು ಮಹಾರಾಜ ಸವಾಯ್ ಜೈಸಿಂಗ್ 1734ರಲ್ಲಿ ಕಟ್ಟಿಸಿದನು. ಮಹಾರಾಜ ಸವಾಯ್ ರಾಮಸಿಂಗ್ ಮತ್ತು ಮಹಾರಾಜ ಎರಡನೇ ಸವಾಯ್ ಮಾಧವ ಸಿಂಗ್ ಇಬ್ಬರೂ ತಮ್ಮ ಆಡಳಿತಾವಧಿಯಲ್ಲಿ ಬಹಳ ಸುಂದರವಾದ ವೈಯಕ್ತಿಕ ವಾಸದ ಅರಮನೆಗಳನ್ನು ಕಟ್ಟಿಸಿದರು. ರಾಜನ ಮುಖ್ಯ ವಾಸದ ಅರಮನೆಯನ್ನು 'ಮಾಧವೇಂದ್ರ ಭವನ' ಎಂದು ಕರೆಯಲಾಗುವುದು. ನಾಹರ್ ಗಡ್ ಕೋಟೆಯಲ್ಲಿರುವ ಈ ಅರಮನೆಯು ಒಂದೇ ರೀತಿಯ 9 ವಿಭಾಗಗಳನ್ನು ಒಳಗೊಂಡಿದೆ. ಇವುಗಳಿಗೆ ಸೂರಜ್ ಪ್ರಕಾಶ್, ಚಂದ್ರ ಪ್ರಕಾಶ್, ಕುಶಲ್ ಪ್ರಕಾಶ್, ಆನಂದ್ ಪ್ರಕಾಶ್, ಜವಾಹರ್ ಪ್ರಕಾಶ್, ಲಕ್ಷ್ಮೀ ಪ್ರಕಾಶ್, ರತ್ನ ಪ್ರಕಾಶ್, ಲಲಿತ ಪ್ರಕಾಶ್, ಮತ್ತು ಬಸಂತ್ ಪ್ರಕಾಶ್ ಎಂದು ಹೆಸರಿಸಲಾಗಿದೆ. ಈ ಪ್ರತಿಯೊಂದು ವಿಭಾಗಗಳು ಸಭಾಭವನ, ಮಲಗುವ ಕೋಣೆ, ಶೌಚಾಲಯ, ಉಗ್ರಾಣ, ಅಡುಗೆ ಮನೆ ಮುಂತಾ ಸೌಲಭ್ಯಗಳನ್ನು ಹೊಂದಿದ್ದು ಒಂದು ವೈಭೋಗದ ಕುಟುಂಬಕ್ಕೆ ಹೇಳಿಮಾಡಿಸಿದಂತೆ ವಿನ್ಯಾಸಗೊಳಿಸಲಾಗಿದೆ. ಈ ಅರಮನೆಯು ಇಂಡೋ ಯೂರೋಪಿಯನ್ ವಾಸ್ತುಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿದೆ.

ಜೈಗಡ್‌ ಕೋಟೆ

ಇದು 1726 ರಲ್ಲಿ ಸವಾಯ್ ಮಿರ್ಜಾ ಜೈಸಿಂಗ್ ನಿಂದ ಮತ್ತು 2ನೇ ಸವಾಯ್ ಜೈಸಿಂಗ್ ನಿಂದ ನಿರ್ಮಾಣವಾಯಿತು. ಇದು 500 ಅಡಿ ಎತ್ತರದಲ್ಲಿ ಬೆಟ್ಟದಮೇಲೆ ನಿರ್ಮಾಣವಾಗಿದೆ. ರಕ್ಷಣೆ ಮತ್ತು ಸೈನ್ಯಾಡಳಿತ ಇದರ ಮುಖ್ಯ ಉದ್ದೇಶ. ಮಧ್ಯಭಾರತದಲ್ಲಿ ನಿರ್ಮಾಣವಾದ ಶ್ರೇಷ್ಟ ರಚನೆ ಇದಾಗಿದೆ. ಈ ಕೋಟೆಯು ಪ್ರಸಿದ್ಧವಾಗಿರುವುದು ಅಲ್ಲಿರುವ 'ಜಯಬಾಣ' ಹೆಸರಿನ ಫಿರಂಗಿಗಾಗಿ. ಇದು ಪ್ರಪಂಚದಲ್ಲೆ ಬಹಳ ಸುಂದರವಾದದ್ದು. ಮತ್ತೊಂದು ವಾಸ್ತುಶಿಲ್ಪ ಲಕ್ಷ್ಮೀವಿಲಾಸ್ ಇದು ಅಂದಿನಕಾಲದ ಸುಂದರ ವಾಸ್ತುಶಿಲ್ಪ ಕಲೆಯನ್ನು ಪ್ರತಿಬಿಂಬಿಸುತ್ತದೆ.

ಕೆರೆಯ ಸೌಂದರ್ಯ

ನೂರಾರು ಸಿಂಧೀ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿವೆ. ಅಂಬೇರದ ಬುಡದಲಿ ಒಂದು ಪುಟ್ಟ ಕೆರೆ. ಕೆರೆಯ ನೋಟ  ̧ಸುಂದರವಾದ ನೋಟ. ಸುತ್ತಲಿನ ಮರಗಳಲಿ ಎಳೆ ಹಸಿರು ತಳಿರು ಚಿಗುರಿದ್ದು , ಮರಗಳುಹೆಚ್ಚಿಗೆ ಕಾಣುತ್ತಿದ್ದವು. ಕೆರೆಯ ಮಗ್ಗುಲಿನಿಂದ ಮುಂದುವರಿದರೆ ಸುಂದರ ಉದ್ಯಾನವೂಂದು ಕಾಣಸಿಗುತ್ತದೆ. ಅದು ಮರಳುಗಾಡಾದರು ಅಲ್ಲಿನ ಕೆರೆಯು ನೀರಿನಿಂದ ಕಂಗೊಳಿಸುವುದು ಒಂದು ವಿಶೇಷ .

ವಿಸ್ಮಯತಾಣ ಜಂತರ್‌ ಮಂತರ್‌

ಚಿತ್ರ:4.ದೇವಾಲಯದಿಂದ ಜಂತರ ಮಂತರಕ್ಕೆ.mmಹಿಂದಿನ ಜಯಪುರ ಸಂಸ್ಥಾನದ ದೊರೆಗಳು ಕಟ್ಟಿಸಿದ ಹಲವಾರು ಕಟ್ಟಡಗಳು ಈ ನಗರದ ಸೌಂದರ್ಯದವನ್ನು ಹೆಚ್ಚಿಸಿವೆ. ಅವುಗಳಲ್ಲಿ ಜಯಪುರದ ಜಂತರ್ ಮಂತರ್ ಬಲು ಪ್ರಖ್ಯಾತವಾದ್ದು. ಇದು ಜಯಸಿಂಹ ಕಟ್ಟಿಸಿದ ಖಗೋಳ ವೀಕ್ಷಣಾಲಯಗಳಲ್ಲೊಂದು. 1718-1734ರಲ್ಲಿ ಇದನ್ನು ಕಟ್ಟಲಾಯಿತು. ಜಯಪುರ ಭಾರತದ ಉಳಿದ ನಗರಗಳಿಗಿಂತ ಸಾಂಸ್ಕೃತಿಕ ಹಾಗೂ ರಾಜಕೀಯ ಕಾರಣಗಳಿಂದಾಗಿ ವಿಶ್ವದ ಗಮನ ಸೆಳೆದ ನಗರವಾಗಿದೆ. ಕಲೆಯ ಆಗರವಾದ ಜಯಪುರ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ. ಅಲ್ಲಿನ ಜನರ ಉಡುಗೆ-ತೊಡಿಗೆ,ಸಂಪ್ರದಾಯಗಳು, ಕಲಾಸಕ್ತಿ ಹಾಗೂ ಜಯಪುರದ ಪ್ರಾಕೃತಿಕ ಸೌಂದರ್ಯ ಮತ್ತು ವಾಸ್ತುಶಿಲ್ಪ, ಐತಿಹಾಸಿಕ ಮಹತ್ವವನ್ನು ತಿಳಿಸುತ್ತವೆ. ಹಾಗೆಯೇ ಜಯಪುರದ ರಾಜರ ವೈಜ್ಞಾನಿಕತೆಗೆ ಸಾಕ್ಷಿಯಾದ ಜಂತ್ರ-ಮಂತ್ರ ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ. ಪ್ರವಾಸ ಸಾಹಿತ್ಯದ ಬಗ್ಗೆ ಅರಿವನ್ನು ಮೂಡಿಸುವುದು ತಿಳಿಸಿಕೊಡುವುದೇ ಪ್ರಕೃತ ಗದ್ಯ ಭಾಗದ ಮುಖ್ಯ ಉದ್ದೇಶವಾಗಿದೆ.

ಜಂತರ್ ಮಂತರ್

ಇದು ಪಿಂಕ್ ಸಿಟಿ ಎಂದು ಹೆಸರಾದ ಜೈಪುರದ ಐತಿಹಾಸಿಕ ಖಗೋಳ ವಿಕ್ಷಣಾ ಕೇಂದ್ರ. ಇದು ವಿಶ್ವ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ. ಇದನನ್ಉ ಮಹಾರಾಜ 2ನೇ ಸವಾಯ್ ಜೈಸಿಂಗ್ 1728ರಲ್ಲಿ ಕಟ್ಟಿಸಿದನು. ಇಲ್ಲಿ ಈ ಮಹಾರಾಜನು ಸ್ವತಃ ಖಗೋಳ ವೀಕ್ಷಣೆ ಮಾಡುತ್ತಿದ್ದನು. ಜೈಪುರದ ಪ್ರವಾಸಕ್ಕೆ ಹೋದವರು ಜಂತರ್ ಮಂತರ್ ವೀಕ್ಷಣೆ ಮಾಡದೇ ಬರುವುದಿಲ್ಲ.

ಜಂತರ್ ಮಂತರ್ ನಲ್ಲಿ ಆಗಿನಕಾಲದಲ್ಲಿ ಸ್ಥಳೀಯ ಕಾಲಮಾನವನ್ನು ಲೆಕ್ಕಾಚಾರ, ಭಾರತದ ಜ್ಯೋತಿಷ್ಯದ ಲೆಕ್ಕಾಚಾರ, ಗ್ರಹ ಮತ್ತು ನಕ್ಷತ್ರಗಳ ಚಲನೆ, ರಾಶಿಗಳ ಬದಲಾವಣೆ, ಮಳೆಮಾಪನ, ಅಕ್ಷಾಂಶ ಮತ್ತು ರೇಖಾಂಶಗಳ ಲೆಕ್ಕಾಚಾರ ಹಾಗೂ ಇತರೆ ಆಕಾಶಕಾಯಗಳ ಚಲನೆ ಅದರಲ್ಲೂ ಮುಖ್ಯವಾಗಿ ಬೆಳಗಿನ ಸಮಯದಲ್ಲಿ ಸೂರ್ಯ ಮತ್ತು ಇತರೆ ನಕ್ಷತ್ರಗಳ ನಡುವಿನ ದೂರವನ್ನು ಅಳೆಯಲು ಬಳಸುತ್ತಿದ್ದರು.

ಜಯಪುರದ ವಿಶೇಷತೆ

ರಜಪೂತರ ವಾಸ್ತುಶೈಲಿ, ಉಡುಗಡ ತೊಡುಗೆ,ಆನೆ ಉತ್ಸವ,ಒಂಟೆ ಉತ್ಸವ, ಆನೆ ಸವಾರಿ, ಪಿಂಕ್‌ ಸಿಟಿ ಇತ್ಯಾದಿ

ಕಾರಂತರಿಗೆ ಜಾನಪದ ಸಂಸ್ಕೃತಿಯಲ್ಲಿ ಬಹಳ ಆಸಕ್ತಿ. ಅವರು ಜಯಪುರದ ಜಾನಪದ ನೃತ್ಯವನ್ನು ಮನಸಾರೆ ನೋಡಿ ತಣಿದರು. ಇದು ಇಲ್ಲಿನ ಜನರ ಸಾಮಾನ್ಯ ನೃತ್ಯ. ಇಬ್ಬರು ಸ್ತ್ರೀಯರು ಮುಖಕ್ಕೆ ಸೆರಗು ಕಾಕಿಕೊಂಡು ನೃತ್ಯಮಾಡುತ್ತಿದ್ದರು. ಇದಕ್ಕೆ ಡೋಲು ತಮಟೆಯ ಹಿಮ್ಮೇಳಗಳಿದ್ದವು. ಬಹಳ ನಾಜೂಕಾಗಿ ನೃತ್ಯಮಾಡುತ್ತಿದ್ದರು. ವೀಕ್ಷಣೆಯ ನಂತರ ರೈಲ್ವೆ ನಿಲ್ದಾಣವನ್ನು ತಲುಪಿ ನಂತರ ದೆಹಲಿಗೆ ತೆರಳಿದರು.

ಚಟುವಟಿಕೆ

ಚಿತ್ರ:ಬೆ ತಾ ಜಯಪುರ ಭಾಷಾ ಚಟುವಟಿಕೆ.mm

ಚಟುವಟಿಕೆ ೧

ಚಿತ್ರ ವೀಕ್ಷಿಣೆ - (Bedagina tana Jayapura introduction Photos folder)

  1. ಚಟುವಟಿಕೆ ಹೆಸರು: ಚಿತ್ರಗಳ ಮೂಲಕ ಕಲಿಕೆ (ಪ್ರಶ್ನೆಗಳು ಸರಳವಾಗಿರಲಿ)
  2. ಉದ್ದೇಶಗಳ
    1. ಚಿತ್ರ ವೀಕ್ಷಣೆ ಮತ್ತು ಮಾತುಗಾರಿಕೆ
    2. ಚಿತ್ರ ವೀಕ್ಷಣೆಯ ಮೂಲಕ ಜಯಪುರದ ಪರಿಚಯ
    3. ಗದ್ಯಕ್ಕೆ ಆಸಕ್ತಿ ಕೆರಳಿಸುವುದು
  1. ಸಾಮಗ್ರಿಗಳು/ಸಂಪನ್ಮೂಲಗಳು; ವೀಡಿಯೋ, ಕಪ್ಪು ಹಲಗೆ, ಪ್ರೊಜೆಕ್ಟರ್ ಚಿತ್ರಗಳ ಲಿಂಕ್‌
  2. ಸಮಯ : 10 ನಿಮಿಷ
  3. ವಿಧಾನ/ಪ್ರಕ್ರಿಯೆ:
  4. ಮೌಲ್ಯಮಾಪನ ಪ್ರಶ್ನೆಗಳು

ಭಾರತ ಅನೇಕ ಸಂಸ್ಕೃತಿಯ ತವರು. ನಾವು ಸ್ಥಳದಿಂದ ಸ್ಥಳಕ್ಕೆ ಹೋದಂತೆ ನಾವು ಅನೇಕ ಸಂಸ್ಕೃತಿಯನ್ನು ಕಾಣಬಹುದಾಗಿದೆ. ಇದು ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೆ ತನ್ನದೇ ಆದ ರೀತಿನೀತಿಗಳನ್ನು ಹೊಂದಿದೆ.

  1. ನೀವು ನೋಡಿದ ಚಿತ್ರಗಳಲ್ಲಿ ನೀವು ಗುರುತಿಸಿದ ವೈವಿದ್ಯತೆಗಳೇನು?
  2. ಇದು ಭಾರತದ ಯಾವ ಪ್ರದೇಶ ಎಂದು ಗುರುತಿಸಿ ಹೇಳಿರಿ?
  3. ಜಯಪುರದ ಬಗ್ಗೆ ನಿಮಗೆಷ್ಟು ಗೊತ್ತಿದೆ ?
  4. ನಿಮ್ಮಲ್ಲಿ ಯಾರಾದರು ಜಯಪುರಕ್ಕೆ ಭೇಡಿ ನೀಡಿರುವಿರಾ? ಭೇಟಿ ನೀಡಿದ್ದರೆ ತಮ್ಮ ಅನುಭವವನ್ನು ಹಂಚಿಕೊಳ್ಳಿರಿ
ಚಟುವಟಿಕೆ ೨
  1. ಚಟುವಟಿಕೆ ಹೆಸರು: ವ್ಯಕ್ತಿಚಿತ್ರಗಳ ಮೂಲಕ ಕವಿ ಪರಿಚಯ
  2. ಉದ್ದೇಶಗಳು;
    1. ಚಿತ್ರವೀಕ್ಷಣೆ ಮತ್ತು ಮಾತುಗಾರಿಕೆ
    2. ಚಿತ್ರವೀಕ್ಷಣೆಯ ಮೂಲಕ ಲೇಖಕರ ಪರಿಚಯ
  1. ಸಾಮಗ್ರಿಗಳು/ಸಂಪನ್ಮೂಲಗಳು; ವೀಡಿಯೋ, ಕಪ್ಪುಹಲಗೆ,ಪ್ರೊಜೆಕ್ಟರ್ ಕವಿಗಳ ಪೋಟೋಗಳು
  2. ಸಮಯ:10 ನಿಮಿಷ
  3. ವಿಧಾನ/ಪ್ರಕ್ರಿಯೆ:
  4. ಮೌಲ್ಯಮಾಪನ ಪ್ರಶ್ನೆಗಳು

ಕನ್ನಡದ ಜ್ಞಾನಪೀಠ ಪುರಸ್ಕೃತರ ಭಾವಚಿತ್ರ ವೀಕ್ಷಣೆಯ ಮೂಲಕ ಕಾರಂತರನ್ನು ಪರಿಚಯಿಸಲಾಗುವುದು. - ಮೊದಲು 7 ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಇದರಿಂದ ಮಕ್ಕಳಲ್ಲಿರುವ ಪೂರ್ವಜ್ಞಾನದಿಂದ ಈ ವ್ಯಕ್ತಿಗಳ ಭಾವಚಿತ್ರವನ್ನು ಗುರುತಿಸುವರು. ಇದರ ಮೂಲಕ ಲೇಖಕರ ಬಗೆಗಿನ ಕೆಲವು ಮುಖ್ಯ ಪ್ರಶ್ನೆಗಳನ್ನು ಕೇಳಲು ಸಹಾಯವಾಗುತ್ತದೆ.

ಪ್ರಶ್ನೆಗಳು

  1. ನೀವು ಈಗ ಭಾವಚಿತ್ರದಲ್ಲಿ ನೋಡಿದ ವ್ಯಕ್ತಿಗಳು ಯಾರು?
  2. ಇವರ ಸಾಧನೆಗಳೇನು ? ಇವರಲ್ಲಿ ನಿಮಗೆ ಯಾರು ಇಷ್ಟ?ಏಕೆ?
  3. ನೀವು ಓದಿರುವ ಇವರ ಕೆಲವು ಕೃತಿಗಳನ್ನು ಹೆಸರಿಸಿ?
  4. ಪ್ರವಾಸ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಏನು ?
  5. ಇಲ್ಲಿನ ಎಲ್ಲರಿಗಿಂತ ಕಾರಂತರು ಭಿನ್ನ ಹೇಗೆ?
ಚಟುವಟಿಕೆ ೩
  1. ಚಟುವಟಿಕೆ ಹೆಸರು: ಕಾರಂತರ ವೀಡಿಯೋ ಆಧಾರಿತ ಚಟುವಟಿಕೆ
  2. ಉದ್ದೇಶಗಳು;
  1. ವೀಡಿಯೋ ವೀಕ್ಷಣೆ ಮತ್ತು ಆಲಿಸುವಿಕೆ
  2. ವೀಡಿಯೋ ವೀಕ್ಷಣೆಯ ಮೂಲಕ ಕಾರಂತರ ದೃಷ್ಟಿಕೋನದ ವಿಶ್ಲೇಷಣೆ
  3. ವೀಡಿಯೋದಲ್ಲಿರುವ ಅಂಶಗಳ ಚರ್ಚೆ (ಮಾತುಗಾರಿಕೆ)
  1. ಸಾಮಗ್ರಿಗಳು/ಸಂಪನ್ಮೂಲಗಳು; ವೀಡಿಯೋ, ಕಪ್ಪು ಹಲಗೆ, ಪ್ರೊಜೆಕ್ಟರ್
  2. ಸಮಯ : 15 ನಿಮಿಷ
  3. ವಿಧಾನ/ಪ್ರಕ್ರಿಯೆ: ಹುಡುಗ ಹುಡುಗಿಯರಿಬ್ಬರನ್ನೂ ಒಳಗೊಂಡಂತೆ ಸಾಮಾನ್ಯ ಆಧಾರದ ಮೇಲೆ 4 ಗುಂಪುಗಳಾಗಿ ವಿಭಾಗ ಮಾಡುವುದು. 2 ನಿಮಿಷದ ವೀಡಿಯೋವನ್ನು ವೀಕ್ಷಿಸಲು ಅವಕಾಶ ನೀಡುವುದು ಮತ್ತು ಗಮನವಿರಿಸಿ ಆಲಿಸಲು ಮತ್ತು ವೀಕ್ಷಿಸಲು ತಿಳಿಸುವುದು. ಕಾರಂತರ ವೀಡಿಯೋದಲ್ಲಿನ ಧ್ವನಿಯನ್ನು ಕೇಳಿಸಿಕೊಂಡ ನಂತರ ಶಿಕ್ಷಕರ ಪ್ರಶ್ನೆಗಳಿಗೆ ಆಲೋಚಿಸಿ ಚರ್ಚಿಸುವರು ಮತ್ತು ಉತ್ತಸುವರು.
  4. ಮೌಲ್ಯಮಾಪನ ಪ್ರಶ್ನೆಗಳು
  1. ಇಲ್ಲಿಕಾರಂತರು ಏನನ್ನು ಚರ್ಚಿಸಿದ್ದಾರೆ
  2. ಮಕ್ಕಳು ಕಾರಂತರಿಗೆ ಕೇಳಿದ 2 ಪ್ರಶ್ನೆಗಳಾವುವು?
  3. ಮಕ್ಕಳು ಕಥೆ ಕೇಳುವುದು ಸರಿಯೇ? ಚರ್ಚಿಸಿ
  4. ಕಾರಂತರ ಬಾಲವನದ ಬಗ್ಗೆ ಏನು ತಿಳಿದಿಯೇ?

ಮನೆಗೆಲಸ

  1. ನೀವು ನೋಡಿದ ವೀಡಿಯೋವಿನ ಯಾವುದಾದರು ಸನ್ನಿವೇಶದ 5 ಚಿತ್ರಗಳ ಕಾರ್ಟೂನ್‌ ಬರೆದು ಕೆಳಗೆ ಸಂಭಾಷಣೆಯನ್ನು ಬರೆಯಿರಿ?
  2. ಪಠ್ಯ ಪುಸ್ತಕದ ಮೊದಲ ಪುಟದಲ್ಲಿನ ಸಜಾತಿಯ ಮತ್ತು ವಿಜಾತಿಯ ಸಂಯುಕ್ತಾಕ್ಷರಗಳನ್ನು ಪಟ್ಟಿಮಾಡಿ ಬರೆಯಿರಿ
ಚಟುವಟಿಕೆ ೪
  1. ಚಟುವಟಿಕೆ ಹೆಸರು:ಸರಣಿ ಚಿತ್ರವನ್ನು ನೋಡಿ ನಿಮ್ಮ ಕಲ್ಪನೆಗೆ ತಕ್ಕಂತೆ ಕಥೆ ಹೇಳಿರಿ ಮತ್ತು ಬರೆಯಿರಿ
  2. ಉದ್ದೇಶಗಳು;
  1. ಚಿತ್ರಗಳನ್ನು ನೋಡಿ ಅದಕ್ಕೆ ಅರ್ಥ ಕಲ್ಪಿಸುವುದು
  2. ಚಿತ್ರ ವೀಕ್ಷಣೆಯ ಮೂಲಕ ಕಥೆ ಕಟ್ಟುವ ಕೌಶಲ
  3. ಕತೆಯ ಸನ್ನಿವೇಶವನ್ನು ಬದಲಿಸಿ ಹೇಳುವುದು (ಮಾತುಗಾರಿಕೆ)
  1. ಸಾಮಗ್ರಿಗಳು/ಸಂಪನ್ಮೂಲಗಳು; ಜಯಪುರದ ಮುಶೈಸಂ ಚಿತ್ರಗಳು -6 , ಕಪ್ಪು ಹಲಗೆ, ಪ್ರೊಜೆಕ್ಟರ್
  2. ಸಮಯ:30ನಿಮಿಷ
  3. ವಿಧಾನ/ಪ್ರಕ್ರಿಯೆ:
  4. ಮೌಲ್ಯಮಾಪನ ಪ್ರಶ್ನೆಗಳು
ಚಟುವಟಿಕೆ ೫

1. ಚಟುವಟಿಕೆ ಹೆಸರು: ಜಯಪುರದ ಪಾಠದ ಪದಕೋಶ ಚಟುವಟಿಕೆ

2. ಉದ್ದೇಶಗಳು;

1. ಅನಗ್ರಾಮ್‌ ಅನ್ವಯದ ಮೂಲಕ ಪದಸಂಪತ್ತಿನ ವೃದ್ದಿ

2. ಅಕ್ಷರ ಬದಲಾದ ಪದದ ಗುರುತಿಸುವಿಕೆ ಮತ್ತು ಜೋಡಣೆ

3. ಹೊಸ ಪದಕೋಶದ ರಚನೆ ಮತ್ತು ಹಂಚಿಕೆ

3. ಸಾಮಗ್ರಿಗಳು/ಸಂಪನ್ಮೂಲಗಳು ; ಇಂಡಿಕ್ ಅನಾಗ್ರಾಮ್‌ ಅನ್ವಯ ಬಳಕೆ (30 ಪದ ರಚನೆ)

4. ಸಮಯ : 45 ನಿಮಿಷ

5. ವಿಧಾನ/ಪ್ರಕ್ರಿಯೆ :

ಇಂಡಿಕ್ ಅನಾಗ್ರಾಮ್‌ ಅನ್ವಯ ಬಳಕೆ ಮಾಡಿ ನಾಲ್ಕೂ ಗುಂಪಿಗೆ ಪ್ರತ್ಯೇಕವಾಗಿ 15 ಅಂಶದ ಪದ ಪಟ್ಟಿ - ಒಂದು ಕಂಪ್ಯೂಟರ್‌ಗೆ 2 ಮಕ್ಕಳು. ಈ ಮೂಲಕ ಇಂಡಿಕ್ ಅನಾಗ್ರಾಮ್‌ ಅನ್ವಯ ಬಳಕೆ ಮಾಡಿ ಕನ್ನಡ ಟೈಪಿಸಲು ಮತ್ತು ಅಸ್ಥವ್ಯಸ್ಥ ಅಕ್ಷರಗಳನ್ನು ಪದವಾಗಿ ರೂಪಿಸುವರು ಸಾಧ್ಯವಾಗದ ಪಕ್ಷದಲ್ಲಿ 'ಸುಳಿವು' ಗುಂಡಿಯನ್ನು ಬಳಸಿ ಉತ್ತರಿಸಲು ಪ್ರಯತ್ನಿಸುವರು.

ಚರ್ಚಾ ಪ್ರಶ್ನೆಗಳು

1. ಈ ಮಾದರಿ ಚಟುವಟಿಕೆಯಿಂದ ಕಲಿಕೆಯ ಮೇಲಾದ ಪರಿಣಾಮವೇನು?

2. ಇದನ್ನು ಅನ್ಯಭಾಷೆಯ ಕಲಿಕೆಯಲ್ಲೂ ಅನ್ವಯಿಸಬಹುದೆ ?

ರಚನೆ : ಜಯಪುರ ಪಾಠಕ್ಕೆ 10 ಪದಪಟ್ಟಿಯನ್ನು ಹೊಂದಿರುವ ಇಂಡಿಕ್ ಅನಾಗ್ರಾಮ್‌ ಅನ್ನು ತಯಾರಿಸಿ .ಹೊಸ ಪದಪಟ್ಟಿ ರಚನೆಮಾಡಿ ಸಂಪನ್ಮೂಲವನ್ನು ಹಂಚಿಕೆಮಾಡಿಕೊಳ್ಳಿರಿ.

ಚಟುವಟಿಕೆ ೬
  1. ಚಟುವಟಿಕೆ ಹೆಸರು ; ಜಯಪುರ ಅಂದು - ಇಂದು ವೀಡಿಯೋ ಆಧಾರಿತ ಚಟುವಟಿಕೆ
  2. ಉದ್ದೇಶಗಳು:
  1. ಸಾಮಗ್ರಿಗಳು/ಸಂಪನ್ಮೂಲಗಳು : ಯು ಟೂಬ್‌ ಲಿಂಕ್‌ (ಸಂಗ್ರಹಿಸಿದ ಸಂಪನ್ಮೂಲ)

ಪ್ರೊಜೆಕ್ಷರ್‌ - ಸ್ಪೀಕರ್ - ಯೂ ಟೂಬ್‌ ನಲ್ಲಿನ

  1. ಸಮಯ : ಸಮಯ : 45 ನಿಮಿಷ
  2. ವಿಧಾನ/ಪ್ರಕ್ರಿಯೆ:
  3. ಮೌಲ್ಯಮಾಪನ ಪ್ರಶ್ನೆಗಳು
    1. ಅಂದಿನ ಜಯಪುರಕ್ಕೂ- ಇಂದಿನ ಜಯಪುರಕ್ಕೂ ಇರುವ ಪ್ರಮುಖ ವ್ಯತ್ಯಾಸಗಳೇನು? ಆಗಿರುವ ಬದಲಾವಣೆಗಳೇನು?
    2. ವೀಡಿಯೋನಲ್ಲಿ ವೀಕ್ಷಿಸಿದ ಜಯಪುರಕ್ಕೂ ಕಾರಂತರು ವಿವರಿಸಿರುವ ಜಯಪುರಕ್ಕೂ ಇರುವ ವ್ಯತ್ಯಾಸಗಳೇನು ?
    3. ಜಯಪುರದ ಜನ ಬಣ್ಣಗಳನ್ನು ಇಷ್ಟಪಡಲು ಕಾರವೇಣಾದರು ಇದೆಯೇ?
    4. ನಮ್ಮ ದೇಶಿ ಉಡುಪು ಮತ್ತು ಅವರ ಉಡುಪಿಗು ವ್ಯತ್ಯಾಸವೇನು ? ಮತ್ತು ಕಾರಣವೇನು? ಏನಾದರು ವೈಜ್ಞಾನಿಕ ಕಾರಣಗಳಿವೆಯೇ?

ಪಾಠದ ಸನ್ನಿವೇಶ

ಮುಖ್ಯಾಂಶಗಳು - Key Ideas

ಪ್ರವಾಸ ಸಾಹಿತ್ಯ ಪರಿಚಯ

ಕನ್ನಡ ಪ್ರವಾಸ ಸಾಹಿತ್ಯವು 19ನೆಯ ಶತಮಾನದಲ್ಲಿಯೇ ಆರಂಭವಾಯಿತು. ಜವಹರಲಾಲ್ ನೆಹರೂರವರು ಕೆ.ಪಿ.ಎಸ್.ಮೆನೆನ್ ರವರ ಗ್ರಂಥಕ್ಕೆ ಮುನ್ನುಡಿ ಬರೆಯುತ್ತ ಹೀಗೆ ಹೇಳಿದ್ದಾರೆ: ‘ಪ್ರವಾಸ ಮಾಡುವುದು ಒಳ್ಳೆಯದು; ಹಾಗೆ ಪ್ರವಾಸ ಮಾಡಲಾರದೇ ಹೋದಾಗ ಪ್ರವಾಸದ ಬಗೆಗೆ ಬಂದಿರುವ ಸಾಹಿತ್ಯವನ್ನಾದರೂ ಓದುವುದು ಉತ್ತಮ ಹವ್ಯಾಸ’. ಕನ್ನಡಿಗರು ಈ ಹವ್ಯಾಸ ಬೆಳೆಸಿಕೊಳ್ಳಲು ಸಾಕಷ್ಟು ಸರಕಿದೆ. ಪ್ರವಾಸ ಸಾಹಿತ್ಯದ ಬೆಳೆ 80 ಮತ್ತು 90ರ ದಶಕದಲ್ಲಿ ಅಪೂರ್ವವೂ, ಸಾಹಿತ್ಯ ಶ್ರೀಮಂತವೂ ಆಗಿದೆಯೆಂದು ಅಭಿಮಾನದಿಂದಲೇ ಹೇಳಬಹುದಾದಷ್ಟು ವಿಪುಲ ಸಂಖ್ಯೆ, ಭಿನ್ನ ವಿಭಿನ್ನ ದೃಷ್ಟಿಕೋನ ಹಾಗೂ ಅನುಭವದ ಪ್ರವಾಸ ಕೃತಿಗಳು ಪ್ರಕಟವಾಗಿರುವುದನ್ನು ನೋಡಬಹುದಾಗಿದೆ. ಪ್ರತಿಯೊಬ್ಬ ಲೇಖಕನೂ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಹೊಸ ನಾಡಿನ ಹೊಸ ಕತೆಯೊಂದನ್ನು ಕೊಟ್ಟಿದ್ದಾನೆ. ಕೆಲವೊಂದು ಕಥನಗಳಂತೂ ಜಾಗತಿಕ ಪ್ರವಾಸ ಸಾಹಿತ್ಯ ಕೃತಿಗಳ ಮಟ್ಟಕ್ಕೆ ನಿಲ್ಲುವಷ್ಟು ಚೆನ್ನಾಗಿವೆ. ಶೈಕ್ಷಣಿಕ ಮಹತ್ವ ಹಾಗೂ ವಿಭಿನ್ನ ಅನುಭವದ ನೆಲೆಗಳು ಇಂದು ಪ್ರವಾಸ ಸಾಹಿತ್ಯದ ಒಳಸೂತ್ರವಾಗಿ ನಿಂತಿವೆ. ಪ್ರವಾಸಾನುಭವ ಕಥನ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ - ಹೀಗೆ ಭಿನ್ನ ಕೋನಗಳಿಂದ ಅನ್ಯ ಸಂಸ್ಕೃತಿಯನ್ನು ಪರಿಚಯಿಸುವ ದಿಕ್ಕಿನಲ್ಲಿ ಸಾಗಿದೆ. ಈ ಪ್ರಯತ್ನದ ಹಾದಿಯಲ್ಲಿ ಪ್ರವಾಸ ಸಾಹಿತ್ಯದ ಸಂಖ್ಯೆಯೂ ಮಹಿಳಾ ಬರೆಹಗಾರ್ತಿಯರ ಸಂಖ್ಯೆಯೂ ವೃದ್ಧಿಸಿದೆ. ಸ್ವಾತಂತ್ರ್ಯೋತ್ತರ ಕಾಲದಿಂದ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಮಹಿಳಾ ಪ್ರವಾಸ ಕಥನಗಳು ದೊರಕುತ್ತವೆ.

ಪ್ರವಾಸಕ್ಕಾಗಿ ಒದಗುತ್ತಿರುವ ಕಾರಣಗಳೂ ಗಮನಾರ್ಹವಾಗಿ ಹೆಚ್ಚಾಗಿವೆ. ಯುನೆಸ್ಕೋ ಸೇವೆಗಾಗಿಯೋ ವಿವಿಧ ಸಾಹಿತ್ಯ ಸಂಘಗಳ ಮೂಲಕವೋ ಸಾಂಸ್ಕೃತಿಕ ತಂಡಗಳ ಪರವಾಗಿಯೋ ಅಕಾಡೆಮಿಗಳ ನೆರವಿನಿಂದಲೋ ಕೆಲಮೊಮ್ಮೆ ಸ್ವಂತ ಖರ್ಚಿನಿಂದಲೋ ದೇಶೀಯ ಹಾಗೂ ವಿದೇಶೀಯ ಸ್ಥಳಗಳ ಪ್ರವಾಸ ಸಮೃದ್ಧವಾಗಿದೆ. ಕನ್ನಡ ಪ್ರವಾಸ ಸಾಹಿತ್ಯದ ಇತಿಹಾಸ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿಯವರು 1890ರಲ್ಲಿ ದಕ್ಷಿಣ ಭಾರತ ಯಾತ್ರೆ ಎಂಬ ಪ್ರವಾಸ ಗ್ರಂಥವನ್ನು ಪ್ರಕಟಿಸಿದರು. ಇದು ಕನ್ನಡದ ಮೊದಲ ಪ್ರವಾಸ ಕಥನವಾಗಿದೆ.ನಂತರ 35 ವರ್ಷಗಳ ಕಾಲ ಯಾವ ಪ್ರವಾಸ ಗ್ರಂಥವೂ ಬರಲಿಲ್ಲ. 1920ರಲ್ಲಿ ವಿ.ಸೀ.ಯವರ ಪಂಪಾಯಾತ್ರೆ ಪ್ರಕಟವಾಯಿತು.

ಕನ್ನಡದ ಪ್ರಮುಖ ಪ್ರವಾಸ ಸಾಹಿತ್ಯಗಳೆಂದರೆ ವಿ.ಕೃ.ಗೋಕಾಕರ 'ಸಮುದ್ರದಾಚೆ'ಯಿಂದ, ಶಿವರಾಮ ಕಾರಂತರ ಅಪೂರ್ವ ಪಶ್ಚಿಮ (1953), ಬಿ.ಜಿ.ಎಲ್. ಸ್ವಾಮಿಯವರ 'ಅಮೆರಿಕದಲ್ಲಿ ನಾನು’, ಎ.ಎನ್.ಮೂರ್ತಿರಾಯರ 'ಅಪರವಯಸ್ಕನ ಅಮೆರಿಕಾ ಯಾತ್ರೆ' (1979) ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ 'ಅಮೆರಿಕದಲ್ಲಿ ಗೊರೂರು' (1979).

ಅಧ್ಯಯನದ ದೃಷ್ಟಿಯಿಂದ ಪ್ರಮುಖವಾಗಿ 3 ಭಾಗಗಳಾಗಿ ವಿಭಾಗಿಸಿಕೊಳ್ಳಬಹುದು

  1. ಸ್ಥಳೀಯ ಪ್ರವಾಸ – ಉದಾ; ತಲಕಾಡಿನ ವೈಭವ
  2. ರಾಷ್ಟ್ರೀಯ ಪ್ರವಾಸ - ಹಿರೇಮಲ್ಲೂರು ಈಶ್ವರನ್ ಅವರ ಕವಿ ಕಂಡ ನಾಡು, ಓಎಲ್‌ಎನ್‌ ಸ್ವಾಮಿ ರವರ ನನ್ನ ಹಿಮಾಲಯ
  3. ಅಂತರರಾಷ್ಟ್ರೀಯ ಪ್ರವಾಸ - ಪ್ರಭುಶಂಕರರ 'ಅಮೇರಿಕಾದಲ್ಲಿ ನಾನು ಮತ್ತು ಶಾಂತಿ'
ಕಾರಂತರ ಜಯಪುರ ಭೇಟಿಯ ಹಿನ್ನೆಲೆ

ಕ್ಷೇತ್ರ ಪರಿಚಯ ಗ್ರಂಥಗಳಲ್ಲಿ ಶಿವರಾಮ ಕಾರಂತರ 'ಅಬುವಿನಿಂದ ಬರಾಮಕ್ಕೆ' ಒಂದು ಅಪೂರ್ವ ಕೃತಿ. ಅಬು, ಅಜ್ಮೀರ, ಪುಷ್ಕರ, ಜಯಪುರ, ಸಿಮ್ಲಾ, ಆಗ್ರ, ಕಾಶಿ, ಡಾಲ್ಮಿಯಾ, ಕಲ್ಕತ್ತ ಮತ್ತು ಬರಾಮಗಳಲ್ಲಿ ಸಂಚರಿಸಿ ಅಲ್ಲಿನ ನಿಸರ್ಗ ಮತ್ತು ಸಂಗೀತ, ಸಾಹಿತ್ಯ, ಜನಜೀವನಾದಿಗಳನ್ನು ಈ ಗ್ರಂಥದಲ್ಲಿ ಕಂಡರಿಸಿದ್ದಾರೆ. ಡಾ.ಕೋಟ ಶಿವರಾಮ ಕಾರಂತರು ತಮ್ಮ ಸ್ನೇಹಿತರ ಜೊತೆ ರಾಜಸ್ಥಾನದ ರಾಜಧಾನಿ ಜಯಪುರದ ಐತಿಹಾಸಿಕ ಸ್ಥಳಗಳಿಗೆ ಭೇಟಿಕೊಟ್ಟು ಪಡೆದ ಅನುಭವವನ್ನು ಈ 'ಅಬೂವಿನಿಂದ ಬರಾಮಕ್ಕೆ' ಪ್ರವಾಸ ಕಥನದಲ್ಲಿ ಸವಿವರವಾಗಿ ವಿವರಿಸಿದ್ದಾರೆ.ಕನ್ನಡದಲ್ಲಿ ಪ್ರಕಟವಾಗಿರುವ ಪ್ರವಾಸ ಕಥನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಗ್ರಂಥಗಳು ಕ್ಷೇತ್ರ ಪರಿಚಯವನ್ನು ಮಾಡಿ ಕೊಡುವಂಥವು. ಭಾರತದ ಹಾಗೂ ಕರ್ನಾಟಕದ ಹಲವು ಕ್ಷೇತ್ರಗಳನ್ನು ಪರಿಚಯಿಸುವ ಈ ಗ್ರಂಥಗಳಲ್ಲಿ ಸಾಹಿತ್ಯ ಮೌಲ್ಯಕ್ಕಿಂತ ಹೆಚ್ಚಾಗಿ ಕ್ಷೇತ್ರ ಪರಿಚಯವೇ ಮುಖ್ಯ ಗುರಿಯಾಗಿದೆ. ಇಂಥ ಕೆಲವು ಗ್ರಂಥಗಳಲ್ಲಿ ಕ್ಷೇತ್ರ ಮಹಿಮೆಯನ್ನು ಕುರಿತು ರಚಿತವಾಗಿರುವ ಹಾಡುಗಳಲ್ಲಿ ಸಾಹಿತ್ಯಾಂಶವನ್ನು ಕಾಣಬಹುದಾಗಿದೆ. ಬಹುಪಾಲು ಗ್ರಂಥಗಳು ಸಚಿತ್ರವಾಗಿರುವುದರಿಂದ ಆಕರ್ಷಕವಾಗಿವೆ. ಈ ಪಠ್ಯ ಭಾಗದಲ್ಲಿ ಲೇಖಕರು ರಾಜಸ್ಥಾನದ ತಮ್ಮ ಪ್ರವಾಸದ ಸ್ವ ಅನುಭವನ್ನು ಪಠ್ಯದ ಮೂಲಕ ತಿಳಿಸಿದ್ದಾರೆ? . ಭಾರತದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಗರಗಳಲ್ಲಿ ಒಂದಾದ ಜಯಪುರದ ಅಂದ ಚಂದ, ಅಲ್ಲಿನ ಜನರ ಉಡುಗೆ-ತೊಡುಗೆ, ಐತಿಹಾಸಿಕ ವೈಭವ ಜಾನಪದ ಕಲೆಗಳ ಸೊಗಸು, ಮೊದಲಾದ ವಿಚಾರಗಳ ಬಗ್ಗೆ ಲೇಖಕರು ತಿಳಿಸಿದ್ದಾರೆ. ಹಾಗೆಯೇ ಜಯಪುರದ ರಾಜರ ವೈಜ್ಞಾನಿಕತೆಗೆ ಸಾಕ್ಷಿಯಾದ ಜಂತ್ರ-ಮಂತ್ರ ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ.

ಜಯಪುರದ ಪರಿಚಯ

ಜೈಪುರ ಅಥವಾ ಜಯಪುರ ರಾಜಸ್ಥಾನ ರಾಜ್ಯದ ರಾಜಧಾನಿ. ಜೈಪುರವು ಭಾರತದ 'ಪಿಂಕ್ ಸಿಟಿ' ಎಂದೇ ಪ್ರಸಿದ್ಧವಾಗಿದೆ. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಈ ಸುಂದರವಾದ ನಗರವನ್ನು ಕಟ್ಟಿದ್ದು ಅಂಬಾರದ ಮಹಾರಾಜ ಎರಡನೇ ಸವಾಯಿ ಜೈ ಸಿಂಗ್‌. ಬಂಗಾಳದ ವಾಸ್ತುಶಿಲ್ಪ ತಜ್ಞ ವಿದ್ಯಾಧರ ಭಟ್ಟಾಚಾರ್ಯ ಎಂಬುವವರ ಸಹಾಯದಿಂದ ರಾಜನು ಇದನ್ನು ನಿರ್ಮಿಸಿದನಂತೆ. ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದ ಭಾರತದ ಮೊದಲ ನಗರ ಇದು.ಈ ಪ್ರದೇಶವು ಹಿಂದೂ ವಾಸ್ತುಶಿಲ್ಪಕ್ಕೆ ಉತ್ತಮವಾದ ಉದಾಹರಣೆ. ಇದನ್ನು ಪೀಠಪಾದ ಅಥವಾ ಎಂಟು ಮಂಡಲದ ರೂಪದಲ್ಲಿ ನಿರ್ಮಿಸಲಾಗಿದೆ. ಜೈಪುರವು ಕೋಟೆಗಳು, ಅರಮನೆಗಳು ಮತ್ತು ಹವೇಲಿಗಳಿಂದ ಆಕರ್ಷಣೆಯನ್ನು ಕಂಡುಕೊಂಡಿದೆ. ಜಗತ್ತಿನ ಎಲ್ಲಾ ಮೂಲೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೂರದ ಪ್ರದೇಶಗಳಿಂದ ಜನರು ಇಲ್ಲಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಅಂಬರ್ ಕೋಟೆ, ನಹಾರಗಢ ಕೋಟೆ ಹವಾ ಮಹಲ್‌, ಶೀಶ ಮಹಲ್‌, ಗಣೇಶ್ ಪೋಲ್‌ ಮತ್ತು ಜಲ ಮಹಲ್‌ ಇಲ್ಲಿನ ಕೆಲವು ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳು. ಈ ಅವಧಿಯಲ್ಲಿ ಭಾರತದ ವೈವಿಧ್ಯಮಯ ಮತ್ತು ಪ್ರಸಿದ್ದ ನಗರಗಳಲ್ಲಿ ಒಂದಾದ ಜಯಪುರದ ಬಗ್ಗೆ ತಿಳಿದುಕೊಳ್ಳೋಣ. ಇದು ರಾಜಸ್ಥಾನದ ರಾಜಧಾನಿ ಮತ್ತು ಸಂಸ್ಕೃತಿಯ ತವರು. ಇಲ್ಲಿ ಸುತ್ತಲೂ ಮರಳುಗಾಡಿನಿಂದ ಕೂಡಿದ್ದರೂ ಸಹ ಈ ಐತಿಹಾಸಿಕವಾದ ಮಹತ್ವದ ನಗರವು ಹೆಚ್ಚಿನ ಪ್ರವಾಸಿಗರನ್ನು ತನ್ನ ಕಡೆ ಸೆಳೆಯುತ್ತದೆ. ಇದಕ್ಕೆ ಇಲ್ಲಿನ ಕೋಟೆಗಳು, ಪುರಾತನ ದೇವಾಲಯ, ಆಹಾರ ಕ್ರಮ, ಆನೆ ಸವಾರಿ,ಒಂಟೆ ಸವಾರಿ, ಬಣ್ಣ ಬಣ್ಣದ ನೋಟ ಮುಂತಾದವು ಕಾರಣವಿರಬಹುದು

ಲೇಖಕರ ಪರಿಚಯ

ಮುಖ್ಯಾಂಶಗಳು - Key Ideas

ಕಾರಂತರು ಮತ್ತು ಕನ್ನಡ ಸಾಹಿತ್ಯ

ಇವರು ತಮ್ಮ ಪ್ರಸಿದ್ದ ಪ್ರವಾಕಥೆಯಾದ 'ಅಬುವಿನಿಂದ ಬರಮಕ್ಕೆ' ಕೃತಿಯಲ್ಲಿ ತಮ್ಮ ಜಯಪುರದ ಭೇಟಿಯ ಅನುಭವಗಳನ್ನು ದಾಖಲಿಸಿದ್ದಾರೆ. ಇವರನ್ನು ' ನಡೆದಾಡುವ ವಿಶ್ವಕೋಶ' 'ಕಡಲ ತೀರದ ಭಾರ್ಗವ' ಎಂದು ಕರೆಯುತ್ತಿದ್ದರು. ಇವರು ಲೇಖಕರು ಮಾತ್ರವಲ್ಲ ನಾಟಕಕಾರರು, ಜಾನಪದ ಕಲಾವಿದರು, ಹಾಡುಗಾರರು ಸಹ. ಇವರಿಗೆ ಯಕ್ಷಗಾನ - ಬಯಲಾಟ ಎಂದರೆ ಬಲು ಪ್ರೀತಿ. ಇವರ 'ಯಕ್ಷಗಾನ – ಬಯಲಾಟ' ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿರುತ್ತದೆ.

  • ಪೂರ್ಣ ಹೆಸರು: ಕೋಟ ಶಿವರಾಮ ಕಾರಂತ
  • ಕಾರಂತರ ವಿವಿಧ ಚಿತ್ರಗಳನ್ನು ಇಲ್ಲಿ ವೀಕ್ಷಿಸಿರಿ
  • ಜನನ:ಅಕ್ಟೋಬರ್ ೧೦, ೧೯೦೨
  • ಜನನ ಸ್ಥಳ:ಸಾಲಿಗ್ರಾಮ, ಉಡುಪಿ ಜಿಲ್ಲೆ
  • ನಿಧನ:ಡಿಸೆಂಬರ್ ೯,೧೯೯೭ (ಮಣಿಪಾಲ, ಉಡುಪಿ)
  • ಸಾಹಿತ್ಯ ಪ್ರಕಾರಗಳು:ಕಥೆ, ಕವನ, ಕಾದಂಬರಿ, ನಾಟಕ, ಯಕ್ಷಗಾನ
  • ಸಾಹಿತ್ಯ ಶೈಲಿ:ನವೋದಯ
  • ಆಕರ ಗ್ರಂಥ  :-ಅಬೂವಿನಿಂದ ಬರಾಮಕ್ಕೆ

ಕಾರಂತರ ಸಂದರ್ಶನದ ವೀಡಿಯೋ ಸಂಪನ್ಮೂಲ

ಪ್ರಕಟಿತ ಕೃತಿಗಳು

ಕಾರಂತರ ಉಚಿತ ಪುಸ್ತಕಗಳನ್ನು ನೋಡಲು ಮತ್ತು ಡೌನ್‌ಲೋಡ್ ಮಾಡಲು ಇಲ್ಲ ನೋಡಿರಿ ಅಬೂವಿನಿಂದ ಬರಾಮಕ್ಕೆ ಪಾತಾಳಕ್ಕೆ ಪಯಣ ಅಪೂರ್ವ ಪಶ್ಚಿಮ "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ.

ಕವನ ಸಂಕಲನಗಳು

ರಾಷ್ಟ್ರಗೀತ ಸುಧಾಕರ, ಸೀಳ್ಗವನಗಳು

ಕಾದಂಬರಿಗಳು

ಅದೇ ಊರು, ಅದೆ ಮರ, ಅಳಿದ ಮೇಲೆ, ಅಂಟಿದ ಅಪರಂಜಿ, ಆಳ, ನಿರಾಳ, ಇದ್ದರೂ ಚಿಂತೆ, ಇನ್ನೊಂದೇ ದಾರಿ, ಇಳೆಯೆಂಬ, ಉಕ್ಕಿದ ನೊರೆ, ಒಡಹುಟ್ಟಿದವರು, ಒಂಟಿ ದನಿ, ಔದಾರ್ಯದ ಉರುಳಲ್ಲಿ, ಕಣ್ಣಿದ್ದೂ ಕಾಣರು, ಕನ್ನಡಿಯಲ್ಲಿ ಕಂಡಾತ, ಕನ್ಯಾಬಲಿ, ಕರುಳಿನ ಕರೆ, ಕೇವಲ ಮನುಷ್ಯರು, ಗೆದ್ದ ದೊಡ್ಡಸ್ತಿಕೆ, ಗೊಂಡಾರಣ್ಯ, ಜಗದೋದ್ಧಾರ ನಾ, ಜಾರುವ ದಾರಿಯಲ್ಲಿ, ದೇವದೂತರು, ಧರ್ಮರಾಯನ ಸಂಸಾರ, ನಷ್ಟ ದಿಗ್ಗಜಗಳು, ನಂಬಿದವರ ನಾಕ-ನರಕ, ನಾವು ಕಟ್ಟಿದ ಸ್ವರ್ಗ, ನಿರ್ಭಾಗ್ಯ ಜನ್ಮ, ಬತ್ತದ ತೊರೆ, ಭೂತ, ಮರಳಿ ಮಣ್ಣಿಗೆ, ಮುಗಿದ ಯುದ್ಧ, ಮೂಜನ್ಮ, ಮೈ ಮನಗಳ ಸುಳಿಯಲ್ಲಿ, ಮೊಗ ಪಡೆದ ಮನ, ವಿಚಿತ್ರ ಕೂಟ, ಶನೀಶ್ವರನ ನೆರಳಿನಲ್ಲಿ, ಸನ್ಯಾಸಿಯ ಬದುಕು, ಸಮೀಕ್ಷೆ, ಸರಸಮ್ಮನ ಸಮಾಧಿ, ಸ್ವಪ್ನದ ಹೊಳೆ, ಹೆತ್ತಳಾ ತಾಯಿ

ಚಲನಚಿತ್ರವಾಗಿರುವ ಕಾದಂಬರಿಗಳು

  1. ಕುಡಿಯರ ಕೂಸು (ಚಲನಚಿತ್ರವಾಗಿದೆ)
  2. ಚಿಗುರಿದ ಕನಸು(ಚಲನಚಿತ್ರವಾಗಿದೆ)
  3. ಚೋಮನ ದುಡಿ(ಚಲನಚಿತ್ರವಾಗಿದೆ)
  4. ಬೆಟ್ಟದ ಜೀವ(ಚಲನಚಿತ್ರವಾಗಿದೆ)
  5. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ನಾಟಕ

  1. ಅವಳಿ ನಾಟಕಗಳು
  2. ಏಕಾಂಕ ನಾಟಕಗಳು
  3. ಐದು ನಾಟಕಗಳು
  4. ಕಟ್ಟೆ ಪುರಾಣ
  5. ಕಠಾರಿ ಭೈರವ
  6. ಕರ್ಣಾರ್ಜುನ
  7. ಕೀಚಕ ಸೈರಂಧ್ರಿ
  8. ಗರ್ಭಗುಡಿ
  9. ಗೀತ ನಾಟಕಗಳು
  10. ಜಂಬದ ಜಾನಕಿ
  11. ಜ್ಯೂಲಿಯಸ್ ಸೀಸರ್
  12. ಡುಮಿಂಗೊ
  13. ದೃಷ್ಟಿ ಸಂಗಮ
  14. ನವೀನ ನಾಟಕಗಳು
  15. ನಾರದ ಗರ್ವಭಂಗ
  16. ಬಿತ್ತಿದ ಬೆಳೆ
  17. ಬೆವರಿಗೆ ಜಯವಾಗಲಿ
  18. ಬೌದ್ಧ ಯಾತ್ರಾ
  19. ಮಂಗಳಾರತಿ
  20. ಮುಕ್ತದ್ವಾರ
  21. ಯಾರೊ ಅಂದರು
  22. ವಿಜಯ
  23. ವಿಜಯ ದಶಮಿ
  24. ಸರಳ ವಿರಳ ನಾಟಕಗಳು
  25. ಸಾವಿರ ಮಿಲಿಯ
  26. ಹಣೆ ಬರಹ
  27. ಹಿರಿಯಕ್ಕನ ಚಾಳಿ
  28. ಹೇಗಾದರೇನು?
  29. ಹೇಮಂತ

ಸಣ್ಣ ಕತೆ

  • ಕವಿಕರ್ಮ, ತೆರೆಯ ಮರೆಯಲ್ಲಿ, ಹಸಿವು, ಹಾವು

ಹರಟೆ/ವಿಡಂಬನೆ

  • ಗ್ನಾನ, ಚಿಕ್ಕ ದೊಡ್ಡವರು, ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು, ಮೈಗಳ್ಳನ ದಿನಚರಿಯಿಂದ, ಮೈಲಿಕಲ್ಲಿನೊಡನೆ ಮಾತುಕತೆಗಳು, ಹಳ್ಳಿಯ ಹತ್ತು ಸಮಸ್ತರು

ಪ್ರವಾಸ ಕಥನ

  • ಅಪೂರ್ವ ಪಶ್ಚಿಮ
  • ಅರಸಿಕರಲ್ಲ
  • ಅಬೂವಿನಿಂದ ಬರಾಮಕ್ಕೆ
  • ಪಾತಾಳಕ್ಕೆ ಪಯಣ
  • ಪೂರ್ವದಿಂದ ಅತ್ಯಪೂರ್ವಕ್ಕೆ
  • ಯಕ್ಷರಂಗಕ್ಕಾಗಿ ಪ್ರವಾಸ

ಆತ್ಮಕಥನ

  • ಸ್ಮೃತಿಪಟಲದಿಂದ (೧,೨,೩)
  • ಹುಚ್ಚು ಮನಸ್ಸಿನ ಹತ್ತು ಮುಖಗಳು

ಜೀವನ ಚರಿತ್ರೆ

  • ಕಲಾವಿದ ಕೃಷ್ಣ ಹೆಬ್ಬಾರರು

ಕಲಾಪ್ರಬಂಧ

  • ಕಲೆಯ ದರ್ಶನ
  • ಕರ್ನಾಟಕದಲ್ಲಿ ಚಿತ್ರಕಲೆ
  • ಚಾಲುಕ್ಯ ವಾಸ್ತು ಮತ್ತು ಶಿಲ್ಪ
  • ಚಿತ್ರಶಿಲ್ಪ, ವಾಸ್ತುಕಲೆಗಳು
  • ಜಾನಪದ ಗೀತೆಗಳು
  • ಭಾರತೀಯ ಚಿತ್ರಕಲೆ
  • ಭಾರತೀಯ ಶಿಲ್ಪ
  • ಯಕ್ಷಗಾನ ಬಯಲಾಟ
  • ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು

ವೈಜ್ಞಾನಿಕ

  • ಅದ್ಭುತ ಜಗತ್ತು (೧. ವಿಚಿತ್ರ ಖಗೋಲ, ೨. ನಮ್ಮ ಭೂಖಂಡಗಳು)
  • ಉಷ್ಣವಲಯದ ಆಗ್ನೇಸ್ಯ
  • ಪ್ರಾಣಿ ಪ್ರಪಂಚದ ವಿಸ್ಮಯಗಳು
  • ಮಂಗನ ಕಾಯಿಲೆ
  • ವಿಜ್ಞಾನ ಮತ್ತು ಅಂಧಶೃದ್ಧೆ
  • ವಿಶಾಲ ಸಾಗರಗಳು
  • ಹಿರಿಯ ಕಿರಿಯ ಹಕ್ಕಿಗಳು

ಇತರ

  • ಪ್ರಜಾಪ್ರಭುತ್ವವನ್ನು ಕುರಿತು
  • ಬಾಳ್ವೆಯೇ ಬೆಳಕು
  • ಬಾಳ್ವೆಯೇ ಬೆಳಕು ಅಥವಾ ಜೀವನ ಧರ್ಮ
  • ಮನೋದೇಹಿಯಾದ ಮಾನವ
  • ವಿಚಾರಶೀಲತೆ
  • ವಿಚಾರ ಸಾಹಿತ್ಯ ನಿರ್ಮಾಣ
  • ಸ್ವಾರ್ಥಿ ಮಾನವ

ಸಂಪಾದನೆ

  • ಐರೋಡಿ ಶಿವರಾಮಯ್ಯ ಬದುಕು, ಬರಹ
  • ಕೌಶಿಕ ರಾಮಾಯಣ
  • ಪಂಜೆಯವರ ನೆನಪಿಗಾಗಿ

ವಿಶ್ವಕೋಶ

  • ಕಲಾ ಪ್ರಪಂಚ
  • ಪ್ರಾಣಿ ಪ್ರಪಂಚ
  • ಬಾಲ ಪ್ರಪಂಚ (೧,೨,೩)
  • ವಿಜ್ಞಾನ ಪ್ರಪಂಚ (೧,೨,೩,೪)

ನಿಘಂಟು

  • ಸಿರಿಗನ್ನಡ ಅರ್ಥಕೋಶ

ಅನುವಾದ

  • ಕೀಟನಾಶಕಗಳ ಪಿಡುಗುಗಳು
  • ಕೋಟ ಮಹಾಜಗತ್ತು
  • ಜನತೆಯೂ ಅರಣ್ಯಗಳೂ
  • ನಮ್ಮ ಪರಮಾಣು ಚೈತನ್ಯ—ಉತ್ಪಾದನಾ ಸಾಧನಗಳು
  • ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ
  • ನಮ್ಮ ಸುತ್ತಲಿನ ಕಡಲು
  • ನಮ್ಮೆಲ್ಲರಿಗೂ ಒಂದೇ ಭವಿಷ್ಯ
  • ಪರಮಾಣು – ಇಂದು ನಾಳೆ
  • ಪಂಚ ಋತು
  • ಬೆಳೆಯುತ್ತಿರುವ ಸಮಸ್ಯೆ
  • ಭಾರತದ ಪರಿಸರ – ದ್ವಿತೀಯ ಸಮಿಕ್ಷೆ
  • ಭಾರತದ ಪರಿಸರದ ಪರಿಸ್ಥಿತಿ – ೧೯೮೨ – ಪ್ರಜೆಯ ದೃಷ್ಟಿಯಲ್ಲಿ
  • ಭಾರತ ವರ್ಷದಲ್ಲಿ ಬ್ರಿಟಿಷರು
  • ಯಾರು ಲಕ್ಷಿಸುವರು?
  • ಶ್ರೀ ರಾಮಕೃಷ್ಣರ ಜೀವನ ಚರಿತೆ

ಮಕ್ಕಳ ಪುಸ್ತಕಗಳು

  • ಅನಾದಿ ಕಾಲದ ಮನುಷ್ಯ
  • ಒಂದೇ ರಾತ್ರಿ ಒಂದೇ ಹಗಲು
  • ಗಜರಾಜ
  • ಗೆದ್ದವರ ಸತ್ಯ
  • ಢಂ ಢಂ ಢೋಲು
  • ನರನೋ ವಾನರನೋ
  • ಮರಿಯಪ್ಪನ ಸಾಹಸಗಳು
  • ಮಂಗನ ಮದುವೆ
  • ಸೂರ್ಯ ಚಂದ್ರ
  • ಹುಲಿರಾಯ
  • ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆಗೆ ಸಂಬಂಧಿಸಿದ ೧೦ ಪುಸ್ತಕಗಳು
  • ಐಬಿಎಚ್, ಮೂಲವಿಜ್ಞಾನ ಪಾಠಮಾಲೆ ಹಾಗು ‘ಇಕೊ’ ದವರಿಗಾಗಿ ಮಾಡಿದ ಅನುವಾದಗಳು : ಸುಮಾರು ೧೩೩
  • ‘ಇಕೊ’ ದವರಿಗಾಗಿ ಮಾಡಿದ ಸಂಪಾದಿತ ಪುಸ್ತಕಗಳು : ೪೨

ಶೈಕ್ಷಣಿಕ ಕೃತಿಗಳು

ಮಕ್ಕಳ ಶಿಕ್ಷಣ

  • ಓದುವ ಆಟ
  • ಗೃಹ ವಿಜ್ಞಾನ (೧,೨,೩)
  • ಚಿತ್ರಮಯ ದಕ್ಷಿಣ ಕನ್ನಡ
  • ಚಿತ್ರಮಯ ದಕ್ಷಿಣ ಕನ್ನಡ – ಅಂದು, ಇಂದು
  • ಚಿತ್ರಮಯ ದಕ್ಷಿಣ ಹಿಂದುಸ್ತಾನ
  • ನಾಗರಿಕತೆಯ ಹೊಸ್ತಿಲಲ್ಲಿ
  • ರಮಣ ತಾತ
  • ಸ್ನೀತಿ (೧,೨,೩)
  • ಸಾಮಾನ್ಯ ವಿಜ್ಞಾನ (೧,೨,೩)
  • ಸಿರಿಗನ್ನಡ ಪಾಠಮಾಲೆ (೧,೨,೩,೪,೫,೬,೭)
  • ಹೂಗನ್ನಡ ಪಾಠಮಾಲೆ (೧,೨,೩,೪,೫,೬,೭,೮)

ವಯಸ್ಕರ ಶಿಕ್ಷಣ

  • ಅಳಿಲ ಭಕ್ತಿ ಮಳಲ ಸೇವೆ
  • ಕರ್ನಾಟಕದ ಜಾನಪದ ಕಲೆಗಳು
  • ಕೋಳಿ ಸಾಕಣೆ
  • ಜೋಗಿ ಕಂಡ ಊರು
  • ದಕ್ಷಿಣ ಹಿಂದುಸ್ತಾನದ ನದಿಗಳು
  • ದೇವ ಒಲಿದ ಊರು
  • ಬೇರೆಯವರೂ ಸರಿ ಇರಬಹುದು
  • ಹುಟ್ಟು ಸಾವು ಒಟ್ಟು ಒಟ್ಟು

ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃತಿಗಳು

  • Folk Art of Karnataka
  • Karnataka Paintings
  • My Concern for Life, Literature and Art
  • Picturesque South Kanara
  • Yakshagana

ಪ್ರಶಸ್ತಿ ಪುರಸ್ಕಾರಗಳು

ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.ಅವರ 'ಮೂಕಜ್ಜಿಯ ಕನಸು' ಕೃತಿಗೆ ಭಾರತೀಯ ಜ್ಞಾನ ಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಇವರನ್ನು ಅಲಂಕರಿಸಿರುವುದು ಇವರ ಬಹುಮುಖ ಪ್ರತಿಭೆಯನ್ನು ತೋರಿಸುತ್ತವೆ.

ಮೌಲ್ಯಮಾಪನ

ಭಾರತ ಅನೇಕ ಸಂಸ್ಕೃತಿಯ ತವರು. ನಾವು ಸ್ಥಳದಿಂದ ಸ್ಥಳಕ್ಕೆ ಹೋದಂತೆ ನಾವು ಅನೇಕ ಸಂಸ್ಕೃತಿಯನ್ನು ಕಾಣಬಹುದಾಗಿದೆ. ಇದು ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೆ ತನ್ನದೇ ಆದ ರೀತಿನೀತಿಗಳನ್ನು ಹೊಂದಿದೆ.

ಉಪಸಂಹಾರ

ಪ್ರವಾಸದಿಂದ ಮಾನವನ ವಿವಿಧ ಮುಖಗಳ ಪರಿಚಯ,ಪ್ರದೇಶಗಳು ಮತ್ತು ಸಂಸ್ಕೃತಿಗಳ ಪರಿಚಯವಾಗುತ್ತದೆ. ಇದರಿಂದ ಜೀವನದ ಮೇಲಿನ ಪ್ರೀತಿ ವೃದ್ದಿಯಾಗುತ್ತದೆ. ಪ್ರತಿ ಮಾನವನು ತನ್ನ ಜೀವಿತ ಪರಿಸರವನ್ನು ಬಿಟ್ಟು ಉಳಿದ ಪ್ರದೇಶದ ವೀಕ್ಷಣೆಯನ್ನು ಮಾಡಿಯೇ ಇರುತ್ತಾನೆ, ಏಕೆಂದರೆ ಮಾನವ ಸದಾ ಚಲನಾಶೀಲ ಪ್ರಚೃತ್ತಿಯವನು. ಮೌಲ್ಯಮಾಪನ ಪ್ರಶ್ನೆಗಳು

  1. ಪ್ರವಾಸ ಹೋಗಲು ಕಾರಣವೇನು ?
  2. ಪ್ರವಾಸಕ್ಕೆ ಬೇಕಾದ ತಯಾರಿಗಳೇನು? 3. ಪ್ರಯಣದ ಯಾವ ಮಾದರಿ ಹೆಚ್ಚು ಸೂಕ್ತ ಮತ್ತು ಯಾಕೆ ?
  3. ವೀಡಿಯೋನಲ್ಲಿ ವೀಕ್ಷಿಸಿದ ಜಯಪುರಕ್ಕೂ ಕಾರಂತರು ವಿವರಿಸಿರುವ ಜಯಪುರಕ್ಕೂ ಇರುವ ವ್ಯತ್ಯಾಸಗಳೇನು ?
  4. ಅವರ ಜಾನಪದ ಸಂಸ್ಕೃತಿಯ ಬಗ್ಗೆ ತಿಳಿಸಿ ಮತ್ತು ನಮ್ಮ ಜಾನಪದ ಸಂಸ್ಕೃತಿಯ ಜೊತೆ ಹೋಲಿಕೆಮಾಡಿ ಹೇಳಿ?
  5. ನೀವು ಜಯಪುರಕ್ಕೆ ಭೇಟಿ ನೀಡುವ ಅವಕಾಶ ದೊರೆತಿದೆ- ನಿಮ್ಮ ತಯಾರಿ ಮತ್ತು ಯೋಜನೆಯ ಬಗ್ಗೆ 5 ನಿಮಿಷದ ಭಾಷಣ ನೀಡಿರಿ (ತಂಡದಿಂದ ಒಬ್ಬರು)

ಮತ್ತಷ್ಟು ತಿಳಿಯಿರಿ

ಆಕರಗಳು