ಕನ್ನಡ: ಛಂದಸ್ಸು ಶಾಸ್ತ್ರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಛಂದಸ್ಸು

ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ.
ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.
ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ.


ಛಂದಸ್ಸಿನಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ

ವಿಭಾಗಗಳು

  • ಪ್ರಾಸ
  • ಯತಿ
  • ಗಣ

ಪ್ರಾಸ

ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ.
ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ ಆದಿ ಪ್ರಾಸ.
ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು ಮಧ್ಯ ಪ್ರಾಸ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ.

ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯ ಪ್ರಾಸ.

ಯತಿ

ಯತಿ ಎಂದರೆ ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.


ಗಣ

ಗಣ ಎಂದರೆ ಗುಂಪು. ಛಂದಸ್ಸಿನಲ್ಲಿ ಮಾತ್ರಾಗಣ, ಅಕ್ಷರಗಣ ಮತ್ತು ಅಂಶಗಣಗಳೆಂಬ ಮೂರು ವಿಧದ ಗಣಗಳಿವೆ.

ಮಾತ್ರಾಗಣ

ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.

ಮಾತ್ರೆ

ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಎಂಬ ಮಾನದಿಂದ ಅಳೆಯಲಾಗುವುದು.

ಲಘು

ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ( U) ಎನ್ನುವರು.

ಗುರು

ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( - ) ಎಂದು ಕರೆಯುವರು.

ಪ್ರಸ್ತಾರ

ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವುದು ಎನ್ನುವರು.


ಅಕ್ಷರವು ಗುರು ಎನಿಸುವ ಲಕ್ಷಣಗಳು

ಲಕ್ಷಣ ಉದಾಹರಣೆ
ದೀರ್ಘಾಕ್ಷರ _ U
ಶಾಲೆ
ಒತ್ತಕ್ಷರದ ಹಿಂದಿನ ಅಕ್ಷರ _ U U U
ಒ ತ್ತಿ ನ ಣೆ
ಅನುಸ್ವಾರದಿಂದ ಕೂಡಿರುವ ಅಕ್ಷರ _   U  U
ಬಂ ದ ನು
ವಿಸರ್ಗದಿಂದ ಕೂಡಿರುವ ಅಕ್ಷರ _  U
ದುಃಖ
ವ್ಯಂಜನಾಕ್ಷರದಿಂದ ಕೂಡಿದ ಅಕ್ಷರ U U   _
ಮನದೊಳ್
ಸ್ವರವಿರುವ ಅಕ್ಷರ _   U   U
ಕೈ ಮು ಗಿ
ಸ್ವರವಿರುವ ಅಕ್ಷರ _    U
ಮೌ ನ
ಷಟ್ಪದಿಯ ಮೂರು ಮತ್ತು ಆರನೆಯ ಪಾದದ ಕೊನೆಯ ಅಕ್ಷರ  

ಅಕ್ಷರವು ಲಘು ಎನಿಸುವ ಲಕ್ಷಣಗಳು

ಗುರು ಎನಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರದ ಅಕ್ಷರಗಳನ್ನು ಲಘು ಎಂದು ಪರಿಗಣಿಸಬೇಕು.

ಮಾತ್ರಾಗಣ ಆಧಾರಿತ ಛಂದಸ್ಸುಗಳು

  1. ಕಂದ ಪದ್ಯ
  2. ಷಟ್ಪದಿ
  3. ರಗಳೆ
  4. ಕಾವ್ಯ

ಅಕ್ಷರಗಣ

ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಕ್ಷರಗಣ.

ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳೂ ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮವಿಲ್ಲ. ಗಣ ವಿಂಗಡಣೆಯ ನಂತರ ಒಂದು ಅಥವಾ ಎರಡು ಅಕ್ಷರಗಳು ಶೇಷವಾಗಿ ಉಳಿಯಬಹುದು.

ಅಕ್ಷರಗಣಗಳ್ಲಿ ಒಟ್ಟು ಎಂಟು ವಿಧಗಳಿವೆ.

  • ಯಗಣ
  • ಮಗಣ
  • ತಗಣ
  • ರಗಣ
  • ಜಗಣ
  • ಭಗಣ
  • ನಗಣ
  • ಸಗಣ

ಯಮಾತಾರಾಜಭಾನ ಸಲಗಂ ಸೂತ್ರ

ಅಕ್ಷರಗಣಗಳನ್ನು ಯಮಾತಾರಾಜಭಾನ ಸಲಗಂ ಎಂಬ ಸೂತ್ರದ ಆಧಾರದಿಂದ ನಿರ್ಣಯಿಸಬಹುದಾಗಿದೆ.

ಗಣ ಅಕ್ಷರಗಳು ಪ್ರಸ್ತಾರ
ಗಣ ಯಮಾತಾ U   _   _
ಗಣ ಮಾತಾರಾ _   _   _
ಗಣ ತಾರಾಜ _   _   U
ಗಣ ರಾಜಭಾ _   U   _
ಗಣ ಜಭಾನ U   _   U
ಗಣ ಭಾನಸ _   U   U
ಗಣ ನಸಲ U   U   U
ಗಣ ಸಲಗಂ U   U   _

ಗಣಗಳನ್ನು ಗುರುತಿಸುವ ಪದ್ಯ

ಅಕ್ಷರಗಣದಲ್ಲಿ ಬರುವ ಎಂಟು ಗಣಗಳನ್ನು ಗುರುತಿಸಲು ಕೆಳಗಿನ ಪದ್ಯವು ಸಹಕಾರಿಯಾಗಿದೆ.

ಗುರು ಲಘು ಮೂರಿರೆ - - ಗಣ
ಗುರು ಲಘು ಮೊದಲಲ್ಲಿ ಬರಲು - - ಗಣಮೆಂಬರ್
ಗುರು ಲಘು ನಡುವಿರೆ - - ಗಣ
ಗುರು ಲಘು ಕೊನೆಯಲ್ಲಿ ಬರಲು - - ಗಣಮಕ್ಕುಂ


ವೃತ್ತಗಳು

ಅಕ್ಷರಗಣದ ಛಂದಸ್ಸನ್ನು ವೃತ್ತ ಎಂದು ಕರೆಯಲಾಗುತ್ತದೆ.ಇದರಲ್ಲಿ ಪ್ರತಿ ಪದ್ಯವೂ ನಾಲ್ಕು ಸಾಲುಗಳಿರುತ್ತವೆ. ಆದಿಪ್ರಾಸ ಕಡ್ಢಾಯವಾಗಿ ಬರುತ್ತದೆ.
ಕನ್ನಡದಲ್ಲಿ ಪ್ರಸಿದ್ಧವಾಗಿ ಆರು ವೃತ್ತಗಳು ಬಳಕೆಯಲ್ಲಿವೆ. ಅವನ್ನು ಖ್ಯಾತಕರ್ಣಾಟಕ ವೃತ್ತಗಳೆಂದು ಕರೆಯುತ್ತಾರೆ. ಅವು

  1. ಉತ್ಪಲ ಮಾಲಾ ವೃತ್ತ
  2. ಚಂಪಕಮಾಲಾವೃತ್ತ
  3. ಶಾರ್ದೂಲವಿಕ್ರೀಡಿತ ವೃತ್ತ
  4. ಮತ್ತೇಭವಿಕ್ರೀಡಿತ ವೃತ್ತ
  5. ಸ್ರಗ್ಧರಾ ವೃತ್ತ
  6. ಮಹಾಸ್ರಗ್ಧರಾ ವೃತ್ತ

ಅಂಶಗಣ

ಅಂಶಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಂಶಗಣ.ಇದನ್ನು ನಾಗವರ್ಮನು "ಕರ್ಣಾಟಕ ವಿಷಯಜಾತಿ" ಎಂದೂ ಹಾಗೇ ಜಯಕೀರ್ತಿಯು "ಕರ್ಣಾಟಕವಿಷಯಭಾಷಾಜಾತಿ" ಎಂದೂ ಕರೆದಿದ್ದಾರೆ.
ಇದು ಅಪ್ಪಟ ದೇಸೀ ಛಂದಸ್ಸಿನ ಪ್ರಕಾರವಾಗಿದೆ.
ಒಂದು ಅಂಶ ಎಂದರೆ ಒಂದು ಮಾತ್ರಾ ಕಾಲವೂ ಆಗಬಹುದು, ಅಥವಾ ಎರಡು ಮಾತ್ರಾಕಾಲವೂ ಆಗಬಹುದು. ಗಣದ ಆರಂಭದಲ್ಲಿ ಮಾತ್ರ ಎರಡು ಮಾತ್ರೆಗಳಿಗೆ ಒಂದು ಅಂಶವನ್ನು ಪರಿಗಣಿಸಬೇಕು.
ಉದಾ:- "ಕವಿತೆ" ಈ ಶಬ್ದದಲ್ಲಿ ಎರಡು ಅಂಶಗಳಾಗುತ್ತವೆ. 'ಕವಿ' ಎಂಬುದು ಒಂದು ಅಂಶವಾದರೆ 'ತೆ' ಎಂಬುದು ಇನ್ನೊಂದು ಅಂಶವಾಗುತ್ತದೆ,
ಇದರಲ್ಲಿ ಮೂರು ವಿಧ. ಅವನ್ನು ಬ್ರಹ್ಮಗಣ,ವಿಷ್ಣುಗಣ,ರುದ್ರಗಣ ಎಂದು ಕರೆಯುವರು.
(ವಿ.ಸೂ- ಗು-ಗುರು, ಲ-ಲಘು,ಅಲ್ಪವಿರಾಮ(,)ದಿಂದ ಅಂಶಗಳನ್ನು ಬೇರ್ಪಡಿಸಿದೆ.

ಬ್ರಹ್ಮಗಣದಲ್ಲಿ ಎರಡು ಅಂಶಗಳಿರುತ್ತವೆ. ಅವು ಈ ನಾಲ್ಕು ರೀತಿಯಲ್ಲಿಯೂ ಇರಬಹುದು
೧. ಗು,ಗು
೨. ಗು,ಲ
೩,ಲಲ,ಗು
೪.ಲಲ,ಲ
ಹಾಗೆಯೇ ವಿಷ್ಣುಗಣದಲ್ಲಿ ಮೂರು ಅಂಶಗಳು ಇರುತ್ತವೆ. ಅವುಗಳ ವಿಧಗಳು ಹೀಗಿವೆ-
೧.ಗು,ಲ,ಲ
೨.ಗು,ಗು,ಲ
೩.ಗು,ಗು,ಗು
೪.ಗು,ಲ,ಗು
೫.ಲಲ,ಗು,ಗು
೬.ಲಲ,ಗು,ಲ
೭.ಲಲ,ಲ,ಗು
೮.ಲಲ,ಲ,ಲ
ಹಾಗೆಯೇ ರುದ್ರಗಣದಲ್ಲಿ ನಾಲ್ಕು ಅಂಶಗಳಿರುತ್ತವೆ, ಅವುಗಳ ವಿಧಗಳನ್ನೂ ಹೀಗೆ ತೋರಿಸಬಹುದು
೧.ಗು,ಲ,ಲ,ಲ
೨.ಗು,ಗು,ಲ,ಲ
೩.ಗು,ಗು,ಗು,ಲ
೪.ಗು,ಗು,ಗು,ಗು
೬,ಗು,ಲ,ಗು,ಲ
೭,ಗು,ಲ,ಲ,ಗು
೮. ಗು,ಗು,ಲ,ಗು
೯.ಗು,ಲ,ಗು,ಗು,ಇತ್ಯಾದಿ, ಹಾಗೆಯೇ ಮೊದಲ ಗುರುವಿನ ಬದಲು ಎರಡು ಲಘುಗಳನ್ನು ಇಟ್ಟುಕೊಂಡು ಕೂಡ ಗಣಗಳನ್ನು ರಚಿಸಬಹುದು.

ಸಾಂಗತ್ಯ, ತ್ರಿಪದಿ, ಅಕ್ಕರ, ಸೀಸಪದ್ಯ ,ಅಕ್ಕರಿಕೆ, ಏಳೆ, ಗೀತಿಕೆ, ಅಂಶಷಟ್ಪದಿ, ಚೌಪದಿ, ಛಂದೋವತಂಸ, ಮದನವತಿ, ಪಿರಿಯಕ್ಕರ,ಇತ್ಯಾದಿಗಳು ಅಂಶಚ್ಛಂದಸ್ಸಿನ ಹಲವು ಪ್ರಕಾರಗಳು.
ಪದ್ಯಪಾನ ಜಾಲತಾಣದಲ್ಲಿ ಅಂಶಚ್ಛಂದಸ್ಸಿನ ಬಗ್ಗೆ ಇನ್ನಷ್ಟು ಮಾಹಿತಿ ಸಿಗುತ್ತದೆ.

ಕನ್ನಡ ಛಂಧೋಗ್ರಂಥಗಳ ಪರಿಚಯ

  1. ಕವಿರಾಜ ಮಾರ್ಗ:

ನೃಪತುಂಗನ ಆಸ್ಥಾನದಲ್ಲಿದ್ದ “ಶ್ರೀವಿಜಯ’ನಿಂದ ರಚಿಸಲ್ಪಟ್ಟಿತು.ಇದರ ಕಾಲ ಕ್ರಿ.ಶ. 850 ಇದು ಅಲಂಕಾರಿಕ ಗ್ರಂಥವಾದರೂ ವ್ಯಾಕರಣ ಮತ್ತು ಛಂದಸ್ಸುಗಳ ಕೆಲ ಅಂಶಗಳನ್ನು ಪ್ರಸ್ತಾಪಿಸಿದೆ.ಇಲ್ಲಿ ಯತಿ ವಿಚಾರ, ಛಂದೋಭಂಗ, ಗುರು ಲಘು ದೋಷಗಳು ಪ್ರಾಸ ವಿಚಾರ ಮೊದಲಾದವನ್ನು ತಿಳಿಸುತ್ತದೆ.

  1. ಗುಣಗಾಂಕಿಯಂ :

ಜೈನ ಲಾಕ್ಷಣಿಕನಾದ “ಅಮೃತ ಸಾಗರ”ಎಂಬುವನಿಂದ ರಚಿತವಾದ “ಯಾಪ್ಪರುಂಗ ಲಕ್ಕಾರಿಹೈ” ಎಂಬ ಛಂದೋಗ್ರಂಥವೊಂದು ತಮಿಳು ಭಾಷೆಯಲ್ಲಿದೆ.ಇದು 11ನೇ ಶತಮಾನಕ್ಕಿಂತ ಹಿಂದೆ ರಚಿತವಾಗಿರಬಹುದೆಂದು ತಿಳಿಯಲಾಗಿದೆ. ಇದಕ್ಕೆ ಚೈನವ್ಯಾಖ್ಯಾತೃವದ “ಗುಣಸಾಗರನೆಂಬುವನು” ಒಂದು ವ್ಯಾಖ್ಯಾನವನ್ನು ಬರೆದಿದ್ದಾನೆ.