ಶಿಕ್ಷಕರ ಸ್ವರಚಿತ ಕವನಗಳು
ನುಡಿ-ಹೆಮ್ಮೆ
ಹೊನ್ನುಡಿಯು ನಮ್ಮದು
ಚೆನ್ನುಡಿಯು ನಮ್ಮದು
ಎಲ್ಲಿಹುದು ಇದಕೆ ಸಾಟಿ
ದಶದಿಶೆಗಳಲ್ಲಿ ಹಬ್ಬುತಾ
ಕಸ್ತೂರಿ ಕಂಪು ಹರಡುತಾ
ಚೆಲ್ಲಿಹುದು ಭಾವದೀಟಿ / ೧ /
ಇದರಿಂಪು ಮಧುರ
ಕೆನೆ ಹಾಲಿನಲ್ಲಿ ಬೆರೆತಂತೆ
ಸಹ್ಯಾದ್ರಿ ಕಾನಜೇನು
ಎಲ್ಲಿದ್ದರೇನು?ಹೇಗಿದ್ದರೇನು?
ತಾಯ್ನುಡಿಯ ಮರೆವೆವೇನು ?/೨/
ಇರ್ -ಸಾಸಿರ ವರುಷ
ಹಲ್ -ಮಿಡಿಯ ಹರುಷ
ಸಕ್ಕದದ ಹೂರಣ
ಆಂಗ್ಲದ ಸಂಕರಣ
"ಬಾಡಿಲ್ಲ ನುಡಿಯ ತೋರಣ"
ಕನ್ನುಡಿಯ ಡಿಂಡಿಮಾನುರಣನ
ಕಟ್ಟಾಳು ಜಾಗರಣ ,ಗಡಿನಾಡಲೂ
ಹೊರನಾಡಲೂ ಡಂಡಣಣ ಡಣಣ /೩/
ಪಂಪನ ಪೆಂಪು, ಕುವೆಂಪು ಕಂಪು
ಜನಪದದ ಇಂಪು,"ನುಡಿ ಆಲ "ಸೊಂಪು ಸೊಂಪು
ಶರಣರ ವಚನ,ದಾಸರ ಕೀರ್ತನ
ಲಕುಮೀಶ ಕುವರವ್ಯಾಸ
ಪೊನ್ನ ರತ್ನಾಕರಣ್ಣ
ರಾಘವಾಂಕ ಜನ್ನ ರನ್ನ
ನೆಲವೆನಿತು ಪುಣ್ಯವಣ್ಣ /೪/
ಬೇಂದ್ರೆ ಕಾರಂತ ಮಾಸ್ತಿ
ಸಿರಿನುಡಿಯಸಮೃದ್ಧ ಆಸ್ತಿ
ಗೋಕಾಕ ಕಾರ್ನಾಡ ಕಂಬಾರ ಮೂರ್ತಿ
ನುಡಿದೀಪಕೆ ತೈಲವೆರೆದ ಧವಳಕೀರ್ತಿ
ಸಂದಿಹುದು ಶ್ರೇಷ್ಠತೆಗೆ ಏಳೆಂಟು ಜ್ಞಾನಪೀಠ
ಸಾರ್ಥಕವು ಸಾಹಿತ್ಯಕೃಷಿಯ ಸರಸದಾಟ/೫/
ಬಂದರೆ ಕುತ್ತು ಹೋಗುವೆವು ಸತ್ತು
ತಾಯ್ನಾಡೆ ಹೆಚ್ಚು ತಾಯ್ನುಡಿಯ ಕಿಚ್ಚು
ಧಗಧಗವು ಕನ್ನಡಿಗರೆದೆಯೆಕುಲುಮೆ
ಅನವರತ ಆಜ್ಯಧಾರೆ ಸುರಿಯುತ ಒಲುಮೆಒಲುಮೆ/೬/
ರಚನೆ..:
ಚಂದ್ರೇಗೌಡ ನಾರಮ್ನಳ್ಳಿ, ಎಂ.ಎ,ಕನ್ನಡಪಂಡಿತ್.ಬಿ.ಇಡಿ. ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ ಮೊ8722199344