ಇತರೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ


ಪತ್ರಲೇಖನ

ಪೀಠಿಕೆ

ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ. ಪತ್ರಲೇಖನ ಒಂದು ಕಲೆ . ಹಿಂದೊಮ್ಮೆ ಇದು ಬಹಳ ಪರಿಣಾಮಕಾರಿಯಾದ ಸಂಪರ್ಕ ಸಾಧನವಾಗಿತ್ತು. ಪುರಾಣ ,ಕಾವ್ಯಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂದೇಶ ಕಳಿಸುವಾಗ ಪಾರಿವಾಳಗಳ ಮೂಲಕ ಕಳಿಸುವ ಪರಿಪಾಠವಿತ್ತು. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಸಂದೇಶವನ್ನು ಕಳಿಸಲು ಮೇಘಗಳನ್ನು ಬಳಸಿದ್ದನ್ನು ನೋಡಬಹುದು. ಕಾಲಾನಂತರದಲ್ಲಿ ಸಂದೇಶಗಳನ್ನು ಕಳಿಸಲು ದೂತರು ಕುದುರೆಯ ಮೇಲೆ ಸಾಗುತ್ತಿದ್ದರು. ಎಲೆಗಳ ಮೇಲೆ ಬರೆಯುತ್ತಿದ್ದ ಸಂದೇಶಗಳು ಕ್ರಮೇಣ ಕಾಗದಗಳ ಮೇಲೆ ಬರೆಯಲ್ಪಟ್ಟು ಅಂಚೆ ಇಲಾಖೆಗಳ ಮೂಲಕ ಪತ್ರದ ರೂಪ ತಾಳಿ ಪತ್ರವ್ಯವಹಾರ ಪ್ರಾರಂಭವಾಯಿತು.


ಇಂದು ದೂರವಾಣಿ ,ಮೊಬೈಲ್ ,ಗಣಕಯಂತ್ರ ಗಳು ಬಂದ ಮೇಲೆ ಪತ್ರವ್ಯವಹಾರವು ತನ್ನ ಮೊದಲಿನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಇಂದು ಅಂತರ್ಜಾಲ ಸೌಲಭ್ಯದಿಂದಾಗಿ ಹೆಚ್ಚಿನ ಸಂದೇಶಗಳು ಮಿಂಚಂಚೆಯ (mail) ಮೂಲಕ ರವಾನೆಯಾಗುತ್ತಿವೆ. ಮೊಬೈಲ್‌ನಲ್ಲಿ ಎಷ್ಟೋ ದೂರದಲ್ಲಿರುವವರಿಗೆ whatsapp ,hike ,telegram ಇವೇ ಮೊದಲಾದ ವ್ಯವಸ್ಥೆಗಳ ಮೂಲಕ ಕ್ಷಣ ಮಾತ್ರದಲ್ಲಿ ಸಂದೇಶವನ್ನು ರವಾನಿಸಬಹುದಾಗಿದೆ. ಹಾಗಾಗಿ ಇಂದು ಪತ್ರ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ ಕೂಡ ಪತ್ರಲೇಖನವು ಒಂದು ಕಲೆ. ತನ್ನಲ್ಲಿನ ವಿಚಾರವನ್ನು ಇನ್ನೊಬ್ಬರಿಗೆ ಹೇಳಲು ಇರುವ ಪರಿಣಾಮಕಾರಿ ವಿಧಾನವೇ. ಇಲ್ಲಿ ಪತ್ರ ಬರವಣಿಗೆಯ ಆಕರ್ಷಣೆ ಪ್ರಧಾನವಾದುದು. ಬರವಣಿಗೆ ಸುಂದರವಾಗಿರಬೇಕು ಎನ್ನುವುದರ ಜೊತೆಗೆ ಪದಗಳ ಬಳಕೆ ಸೊಗಸಾಗಿರಬೇಕು ಎನ್ನುವುದು ಮುಖ್ಯವಾಗಿರುತ್ತದೆ. ಅದು ಕಾಗದದಲ್ಲಿ ನೀಡುವ ಒಂದು ಭೇಟಿ. ಬರಹ ರೂಪದಲ್ಲಿ ಕಣ್ಣಿಗೆ ಕಾಣುವ ಸಾಧನ . ಹಲವು ಕಾಲ ಇರಿಸಿಕೊಂಡು ಮತ್ತೆ ಮತ್ತೆ ಓದಬಹುದು. ಗಾಂಧೀಜಿಯವರ ಪತ್ರಗಳು ,ನೆಹರೂರವರು ತಮ್ಮ ಮಗಳು ಇಂದಿರಾ ಪ್ರಿಯದರ್ಶಿನಿಗೆ ಬರೆದ ಪತ್ರಗಳು ಇಂದಿಗೂ ವಿಶ್ವವಿಖ್ಯಾತವಾಗಿರುವಂತವು.

ಪತ್ರಲೇಖನ -ವಿಧಗಳು

ಸಾಮಾನ್ಯವಾಗಿ ಪತ್ರ ವ್ಯವಹಾರದಲ್ಲಿ ಎರಡು ವಿಧಗಳು

  • ಖಾಸಗಿ ಪತ್ರಗಳು ಅಥವಾ ವೈಯಕ್ತಿಕ ಪತ್ರಗಳು (ಔಪಚಾರಿಕ ಪತ್ರಗಳು )
  • ವ್ಯಾವಹಾರಿಕ ಪತ್ರಗಳು ಅಥವಾ ಮನವಿ ಪತ್ರಗಳು (ಅನೌಪಚಾರಿಕ ಪತ್ರಗಳು )
  • ಪತ್ರಲೇಖನದಲ್ಲಿ ಅರಿಯಬೇಕಾದ ಮುಖ್ಯವಾದ ಸಂಗತಿಯೆಂದರೆ ಪತ್ರದ ಪ್ರಾರಂಭ, ಸಂಬೋಧನೆ, ವಿಷಯವಿವರಣೆ, ಅಂತ್ಯ ಈ ಅಂಶಗಳಲ್ಲಿ ವೈಯಕ್ತಿಕ ಮತ್ತು ವ್ಯಾವಹಾರಿಕ ಪತ್ರಗಳಲ್ಲಿ ಹೇಗೆ ಬಳಕೆ ಮಾಡಬೇಕು ಎಂಬುದರ ಅರಿವಿರಬೇಕು. ವ್ಯತ್ಯಾಸ ಅರಿತಿರಬೇಕು.

ಪತ್ರದ ಅಂಗಗಳು

ಸಾಮಾನ್ಯವಾಗಿ ಪತ್ರ ಲೇಖನವು ಐದು ಅಂಗಗಳನ್ನು ಹೊಂದಿರಬೇಕು . ಇದನ್ನು ಪತ್ರದ ಚೌಕಟ್ಟು ಎಂದು ಕರೆಯಬಹುದು. ಖಾಸಗಿ ಪತ್ರವೇ ಆಗಿರಲಿ ಅಥವಾ ವ್ಯಾವಹಾರಿಕ ಪತ್ರವಾಗಿರಲಿ ಅದರಲ್ಲಿ ಈ ಕೆಳಗಿನ ಅಂಶಗಳು ಇರಬೇಕು.

  • ಪತ್ರ ಶೀರ್ಷಿಕೆ (ಪತ್ರದ ಪ್ರಾರಂಭ )
  • ಸಂಬೋಧನೆ
  • ಪತ್ರದ ಒಡಲು (ವಿಷಯವಿವರಣೆ)
  • ಮುಕ್ತಾಯ (ಪತ್ರದ ಅಂತ್ಯ )
  • ಸಹಿ ಮತ್ತು ಹೊರವಿಳಾಸ

ಪತ್ರ ಶೀರ್ಷಿಕೆ (ತಲೆಬರಹ ಅಥವಾ ಪತ್ರದ ಆದಿಭಾಗ )

ಯಾರು ಪತ್ರ ಬರೆಯುತ್ತಿದ್ದಾರೋ ಅವರ ಪೂರ್ಣ ವಿಳಾಸವನ್ನು ಪತ್ರದ ಮೇಲೆ ಬಲ ಭಾಗದಲ್ಲಿ ಬರೆಯಬೇಕು . ಹೀಗೆ ಬರೆಯುವುದರಿಂದ ಯಾರು ಪತ್ರ ಬರೆಯುತ್ತಿದ್ದಾರೆ? ಎಲ್ಲಿಂದ ಬರೆಯುತ್ತಿದ್ದಾರೆ ? ಇತ್ಯಾದಿ ಅಂಶಗಳು ತಿಳಿಯುತ್ತವೆ.

  • ಒಂದರ ಕೆಳಗೆ ಒಂದರಂತೆ ಕ್ರಮವಾಗಿ ಬರೆಯುವುದು ಸೂಕ್ತ
  • ದಿನಾಂಕವನ್ನು ಬರೆಯುತ್ತಿರುವವ ವಿಳಾಸದ ಕೆಳಗೆ ನಮೂದಿಸುವುದು ಸೂಕ್ತ.
  • ವ್ಯಾವಹಾರಿಕ ಪತ್ರವಾಗಿದ್ದರೆ ಇಂದ ವಿಳಾಸದ ನಂತರ ಸ್ವಲ್ಪ ಅಂತರ ಉಳಿಸಿ ಪತ್ರದ ಎಡಭಾಗದಲ್ಲಿ ಯಾರಿಗೆ ಬರೆಯುತ್ತಿದ್ದೇವೆಯೋ ಅವರ ವಿಳಾಸವನ್ನು ನಮೂದಿಸಬೇಕಾಗುತ್ತದೆ.

ಸಂಬೋಧನೆ (ಗೌರವಯುತ ಸಂಬೋಧನೆ ,ಒಕ್ಕಣೆ )

  • ಇದು ಯಾರಿಗೆ ಪತ್ರವನ್ನು ಬರೆಯುತ್ತದ್ದೇವೆಯೋ ಅವರಿಗೆ ಸಲ್ಲಿಸುವ ಮರ್ಯಾದಾಸೂಚಕ ಮಾತು ಅಥವಾ ಗೌರವಯುತ ಅಭಿವಂದನೆ ಅಥವಾ ಶುಭಾಶಯ .ಇದು ಪತ್ರ ಬರೆಯುವವನಿಗೂ ಬರೆಯಿಸಿಕೊಳ್ಳುತ್ತಿರುವ ವ್ಯಕ್ತಿಗೂ ನಡುವಿನ ಸಂಬಂಧವನ್ನು ಅವಲಂಬಿಸಿರುತ್ತದೆ.
  • ಈ ಸಂಬೋಧನೆ ಆಯಾ ವ್ಯಕ್ತಿಗಳ ಅನುಸಾರ ಬೇರೆ ಬೇರೆಯಾಗಿರುತ್ತದೆ.

ಹಿರಿಯರಿಗೆ ಗೌರವ ಸೂಚಕ ಶಬ್ದಗಳು

  • ತಂದೆಗೆ : ತೀರ್ಥರೂಪುರವರಿಗೆ /ಪೂಜ್ಯ ತಂದೆಯವರಿಗೆ ----- ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು .
  • ತಾಯಿಗೆ :ಮಾತೃಶ್ರೀಯವರಿಗೆ / ಪೂಜ್ಯತಾಯಿಯವರಿಗೆ ------ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು .
  • ಚಿಕ್ಕಪ್ಪ,ದೊಡ್ಡಪ್ಪ ,ಮಾವ ,ಅಣ್ಣ ಇತ್ಯಾದಿ ಹಿರಿಯರಿಗೆ : ತೀರ್ಥರೂಪ ಸಮಾನರಾದ …. ಅವರಿಗೆ ಅಥವಾ ಪೂಜ್ಯರಾದ …. ಅವರಿಗೆ ------- ಸಾಷ್ಟಾಂಗ ನಮಸ್ಕಾರಗಳು ಅಥವಾ ಅವರಲ್ಲಿ ಬೇಡುವ ಆಶೀರ್ವಾದಗಳು .
  • ಚಿಕ್ಕಮ್ಮ ,ದೊಡ್ಡಮ್ಮ ,ಅತ್ತೆ,ಅಕ್ಕ -ಮುಂತಾದ ಹಿರಿಯರಿಗೆ : ಮಾತೃಶ್ರೀ ಸಮಾನರಾದ-----ಅವರಿಗೆ ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು.
  • ತಮ್ಮನಿಗೆ(ಕಿರಿಯರಿಗೆ) :ಪ್ರೀತಿಯ ತಮ್ಮನಿಗೆ /ಚಿರಂಜೀವಿ ಸಹೋದರನಿಗೆ ಆಶೀರ್ವಾದಗಳು

ತಂಗಿ,ಮಗಳು ,ಸೊಸೆ ಮೊದಲಾದವರಿಗೆ :ಚಿರಂಜೀವಿ ಸೌಭಾಗ್ಯವತಿ ---- ಅಥವಾ ಪ್ರೀತಿಯ ಸಹೋದರಿ,------ ಆಶೀರ್ವಾದಗಳು .

  • ಸಂಬಂಧಿಕರಲ್ಲದ ಹಿರಿಯರಿಗೆ :ಶ್ರೀಯುತರಾದ ----ಅಥವಾ ಶ್ರೀಮಾನ್ ರವರಿಗೆ ಗೌರವಪೂರ್ವಕ ಪ್ರಣಾಮಗಳು ಅಥವಾ ಮಾಡುವ ವಿಜ್ಞಾಪನೆಗಳು .
  • ಗುರುಗಳಿಗೆ (ಶಿಕ್ಷಕರಿಗೆ ):ಪೂಜ್ಯರಾದ ಅಧ್ಯಾಪಕರಿಗೆ /ಗುರುಗಳಿಗೆ --ಸಾದರ ನಮಸ್ಕಾರಗಳು,ಪ್ರಣಾಮಗಳು.
  • ಗೆಳೆಯರಿಗೆ : ಪ್ರಿಯ /ಆತ್ಮೀಯ/ನಲ್ಮೆಯ /ಸ್ನೇಹಿತನಿಗೆ --- ವಂದನೆಗಳು .
  • ಬಂಧುಗಳಿಗೆ : ಪ್ರಿಯ ಬಂಧುಗಳಿಗೆ ----ಮಾಡುವ ನಮಸ್ಕಾರಗಳು .
  • ಅಧಿಕಾರಿಗಳಿಗೆ :ಅವರವರ ಸ್ಥಾನಗಳಿಗೆ -ಅರ್ಹತೆಗಳಿಗೆ ಅನುಸರಿಸಿ ಇರಬೇಕು

ಉದಾ : ಮಾನ್ಯ ಮುಖ್ಯೋಪಾಧ್ಯಾಯರು, ಮಾನ್ಯ ಅಧ್ಯಕ್ಷರು ,ಮಾನ್ಯ ನಿರ್ದೇಶಕರು,ಮಾನ್ಯ ಜಿಲ್ಲಾಧಿಕಾರಿಯವರು

  • ಪತ್ರಿಕಾ ಸಂಪಾದಕರಿಗೆ : ಮಾನ್ಯ ಸಂಪಾದಕರು ------ ನಮಸ್ಕಾರಗಳು.

ವಿಷಯ (ಒಡಲು)

ಪತ್ರದ ಮುಖ್ಯವಾದ ಭಾಗವಿದು . ಖಾಸಗಿ ಪತ್ರಗಳಲ್ಲಿ ಇದು ಕ್ಷೇಮ ಸಮಾಚಾರದ ಮಹತ್ವವನ್ನು ಒಳಗೊಂಡಿರುತ್ತದೆ. ಏನಾಗಿದೆ? ಏನಾಗಬೇಕು, ಇತ್ಯಾದಿ ವಿವರಗಳನ್ನು ಬೇರೆ ಬೇರೆ ವಾಕ್ಯ ವೃಂದಗಳಲ್ಲಿ ಸ್ಪಷ್ಟವಾಗಿ ಅರ್ಥವಾಗುವಂತೆ ಬರೆಯಬೇಕು .ಓದುಗರಿಗೆ ಪತ್ರ ಬರೆದವರು ಯಾಕೆ ಬರೆದಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುವಂತಿರಬೇಕು . ವ್ಯಾವಹಾರಿಕ ಪತ್ರಗಳಲ್ಲಿ ಪತ್ರ ಬರೆಯುತ್ತಿರುವ ಉದ್ದೇಶವನ್ನು ಒಂದು ಚಿಕ್ಕ ವಾಕ್ಯದಲ್ಲಿ ಮೊದಲು ಹೇಳಿ ಅದರ ಕೆಳಗೆ ಅದರ ಸ್ಪಷ್ಟವಾದ ವಿವರಣೆ ನೀಡಬೇಕು. ವಿವರಣೆಯಲ್ಲಿ ಪತ್ರದ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಬೇಕು.

ಪತ್ರದ ಅಂತ್ಯ (ಮುಕ್ತಾಯ )

ಪತ್ರದ ವಿವರ ಮುಕ್ತಾಯವಾದ ಮೇಲೆ ಪತ್ರದ ಸಂಬೋಧನೆಯಲ್ಲಿ ಬಳಸಿದ ಹಾಗೆ ನಮಸ್ಕಾರಗಳು /ಪ್ರಣಾಮಗಳು /ವಂದನೆಗಳು /ಬೇಡುವ ಆಶೀರ್ವಾದಗಳು ಹೀಗೆ ಒಕ್ಕಣೆಯನ್ನು ಬಳಸಬೇಕು. ವಿವರಣೆ ಮುಕ್ತಾಯವಾದಮೇಲೆ ಪತ್ರದ ಎಡಭಾಗದಲ್ಲಿ ಇಂತಿ ತಮ್ಮ ವಿಶ್ವಾಸಿ ----- ಒಕ್ಕಣೆಯಲ್ಲಿ ಪ್ರಾರಂಭದಲ್ಲಿ ತಮ್ಮನ್ನು ಕರೆದುಕೊಂಡ ಹಾಗೆ ಬರೆಯುವುದು ಸೂಕ್ತ .

  • ತಂದೆಗೆ /ತಾಯಿಗೆ : ಇಂತಿ ತಮ್ಮ ಪುತ್ರ -ಪುತ್ರಿ
  • ಹಿರಿಯ ಬಂಧುಗಳಿಗೆ : ಇಂತಿ ತಮ್ಮ ಪ್ರೀತಿಯ
  • ಅಧಿಕಾರಿಗಳಿಗೆ : ಇಂತಿ ತಮ್ಮ ವಿಶ್ವಾಸಿ /ಇಂತಿ ತಮ್ಮ ನಂಬುಗೆಯ
  • ಗುರುಗಳಿಗೆ : ಇಂತಿ ತಮ್ಮ ವಿಧೇಯ /ಇಂತಿ ತಮ್ಮ ಪ್ರೀತಿಯ ಶಿಷ್ಯ
  • ಗೆಳೆಯ/ಗೆಳತಿ : ಇತಿ ನಿನ್ನ ಪ್ರೀತಿಯ /ನಲ್ಮೆಯ ಗೆಳೆಯ/ಗೆಳತಿ
  • ಕಿರಿಯರಿಗೆ : ಇತಿ ನಿನ್ನ ಶ್ರೇಯೋಭಿಲಾಷಿ /ಹಿತಚಿಂತಕ
  • ವ್ಯಾಪಾರಿಗೆ :ಇತಿ ನಿಮ್ಮ ವಿಶ್ವಾಸಿ /ಗ್ರಾಹಕ

ಸಹಿ ಮತ್ತು ಹೊರವಿಳಾಸ

ವಂದನಾ ಪೂರ್ವಕ ಮುಕ್ತಾಯದ ಕೆಳಗೆ ಪತ್ರ ಬರೆದವರು ತಮ್ಮ ಸಹಿ ನಮೂದಿಸಬೇಕು ಪತ್ರದ ಎಡಭಾಗದಲ್ಲಿ ಕೆಳಗೆ ಯಾರಿಗೆ ಪತ್ರ ತಲುಪಬೇಕಿದೆಯೋ ಅವರ ವಿಳಾಸ ನಮೂದಿಸಬೇಕು .ಅವರ ಹೆಸರು ,ಮನೆನಂಬರ್,ಬೀದಿ ,ವಿಭಾಗ ,ಊರು ,ಜಿಲ್ಲೆ ಇವುಗಳ ವಿವರ ವಿಳಾಸದ ಜೊತೆ ಇರಬೇಕು

ಖಾಸಗಿ /ವೈಯಕ್ತಿಕ ಪತ್ರಗಳ ಮಾದರಿ

ಖಾಸಗಿ ಪತ್ರಗಳು ನಮ್ಮ ತಂದೆ//ತಾಯಿ, ಅಣ್ಣ /ತಮ್ಮ ,ಅಕ್ಕ /ತಂಗಿ ,ಗೆಳೆಯ /ಗೆಳತಿ ಮತ್ತು ಹತ್ತಿರದ ಬಂಧುಗಳಿಗೆ ಬರೆಯುವ ಪತ್ರಗಳು .

  • ಪ್ರಶ್ನೆ : ನಿಮ್ಮ ವಿದ್ಯಾಭ್ಯಾಸ ಪ್ರಗತಿ ತಿಳಿಸಿ ಕೊಡಗಿನ ವಿರಾಜಪೇಟೆಯಲ್ಲಿರುವ ನಿಮ್ಮ ತಾಯಿ ಭಾಗ್ಯಳಿಗೆ ಪತ್ರ ಬರೆಯಿರಿ.

ಕ್ಷೇಮ ಶ್ರೀ ಸವಿತಾ ೧೦ ನೇ ತರಗತಿ ನೂತನ ವಿದ್ಯಾ ಮಂದಿರ ಧಾರವಾಡ .

            ಮಾತೃಶ್ರೀಯವರ ಪಾದಾರವಿಂದಗಳಲ್ಲಿ ನಿಮ್ಮ ಮಗಳಾದ ಸವಿತಾಳು ಮಾಡುವ ಸಾಷ್ಟಾಂಗ ನಮಸ್ಕಾರಗಳು ಮತ್ತು ಬೇಡುವ ಆಶಿರ್ವಾದಗಳು .ಇಲ್ಲಿ ನಾನು ಆರೋಗ್ಯವಾಗಿದ್ದೇನೆ ಮತ್ತು ನೀವೂ ಸಹ ಆರೋಗ್ಯದಿಂದಿರುವಿರೆಂದು ಭಾವಿಸುವೆ ಮತ್ತು ತಮ್ಮ ಕ್ಷೇಮ ಸಮಾಚಾರ ಪತ್ರದ ನಿರೀಕ್ಷೆಯಲ್ಲಿದ್ದೇನೆ. 

ನಾನು ಚೆನ್ನಾಗಿ ಓದುತ್ತಿದ್ದೇನೆ. ಇಲ್ಲಿಯವರೆಗೆ ನಡೆದ ಎಲ್ಲ ಸಾಧನಾ ಪರೀಕ್ಷೆಗಳಲ್ಲಿಯೂ ನಾನು ಚೆನ್ನಾಗಿ ಅಂಕ ಪಡೆದಿರುತ್ತೇನೆ. ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ನನ್ನ ಎಲ್ಲ ವಿಷಯಗಳ ಶೇಕಡಾವಾರು ಅಂಕ ೯೨ ಇರುತ್ತದೆ. ಈಗ ಬರಲಿರುವ ಪೂರ್ವ ಸಿದ್ಧತಾ ಪರೀಕ್ಷೆಗೆ ನಾನು ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಶಿಕ್ಷಕರೆಲ್ಲರೂ ಚೆನ್ನಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಏಪ್ರಿಲ್‌ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಕಡೆಯ ಪಕ್ಷ ೯೫% ಮೇಲೆ ಅಂಕಗಳಿಸಿ ಜಿಲ್ಲೆಗಾದರೂ ಪ್ರಥಮ ಸ್ಥಾನ ಪಡೆಯಬೇಕೆಂಬ ಅಭಿಲಾಷೆ ನನ್ನದು . ಈ ವಿಚಾರವನ್ನು ತೀರ್ಥರೂಪು ತಂದೆಯವರಿಗೂ ತಿಳಿಸಿ ಅವರ ಆಶಿರ್ವಾದ ಕೇಳಿರುವೆನೆಂದು ತಿಳಿಸಿರಿ.ಮನೆಯಲ್ಲಿನ ಎಲ್ಲ ಹಿರಿಯರಿಗೆ ನನ್ನ ಪ್ರಣಾಮಗಳು. ಕಿರಿಯರಿಗೆ ಆಶಿರ್ವಾದ ತಿಳಿಸಿರಿ. ಏಪ್ರಿಲ್ ಪರೀಕ್ಷೆ ಮುಗಿದ ಮೇಲೆ ಊರಿಗೆ ಬರುತ್ತೇನೆ.

                                    ಪ್ರಣಾಮಗಳೊಂದಿಗೆ                   

ನಿಮ್ಮ ಪ್ರೀತಿಯ ಮಗಳು ಸವಿತಾ ಗೆ : ಭಾಗ್ಯ

  1. ೩೨ , ೩ ನೇ ಮುಖ್ಯ ರಸ್ತೆ ,೨ ನೇ ಅಡ್ಡ ರಸ್ತೆ

ಕಯ್ಯಾರ ನಗರ ವಿರಾಜಪೇಟೆ , ಕೊಡಗು

"https://karnatakaeducation.org.in/KOER/index.php?title=ಇತರೆ&oldid=18775" ಇಂದ ಪಡೆಯಲ್ಪಟ್ಟಿದೆ