ಕನ್ನಡ: ಇತಿಹಾಸ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಬೆಳವಣಿಗೆ

ಕನ್ನಡವು ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತುಸಲ್ಪಟ್ಟಿರುವ ಮೂಲದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಖಚಿತವಾಗಿ ಸಾಧ್ಯವಿಲ್ಲ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿತೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊಟ್ಟ ವೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ.

ಕನ್ನಡದ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಲು ಕೆಲವು ಕಾಲಮಾನಗಳನ್ನು ನಿರ್ಧರಿಸಿದ್ದಾರೆ.

  1. ಪೂರ್ವದ ಹಳಗನ್ನಡ ಅನಿಶ್ಚಿತ ಪ್ರಾರಂಭದಿಂದ ೭ನೆಯ ಶತಮಾನದವರೆಗೆ
  2. ಹಳಗನ್ನಡ ೭ ರಿಂದ ೧೨ ನೆಯ ಶತಮಾನದವರೆಗೆ
  3. ನಡುಗನ್ನಡ ೧೨ ನೇ ಶತಮಾನದ ಪ್ರಾರಂಭದಿಂದ ೧೬ನೇ ಶತಮಾನದವರೆಗೆ
  4. ಹೊಸಗನ್ನಡ ೧೬ನೆಯ ಶತಮಾನದ ಆದಿಯಿಂದ ಈಚೆಗೆ ...

ಕಳೆದ ಶತಮಾನದಲ್ಲಿ ಆಗಿರುವ ಅತಿ ವ್ಯಾಪಕವಾದ ಕನ್ನಡದ ಅಭಿವೃದ್ಧಿಯನ್ನು ಗಮನಿಸಿದರೆ ೨೦ನೆಯ ಶತಮಾನದಿಂದ ಈಚಿನ ಕಾಲವನ್ನು ಆಧುನಿಕ ಕನ್ನಡ ಎಂಬ ಹೊಸ ಯುಗವಾಗಿ ಪರಿಗಣಿಸಬೇಕಾಗುತ್ತದೆ. ಕನ್ನಡ ಭಾಷೆಯು ಅಭಿಜಾತ ಭಾಷೆಯ ಸ್ಥಾನಮಾನ ಪಡೆಯಲು ಅರ್ಹವಾಗಿದೆ. ಅಂತರ್ಜಾಲದಲ್ಲಿ ಕನ್ನಡ ಭಾಷೆಯನ್ನು ಯಥೇಚ್ಛವಾಗಿ ಉಪಯೋಗಿಸಲಾಗುತ್ತಿದೆ.

ಕನ್ನಡ ಭಾಷೆ ಮತ್ತು ಕನ್ನಡ ಅಂಕೆಗಳ ಬೆಳವಣಿಗೆ

'ಕುಮುದೇಂದು ಮುನಿ' ರಚಿಸಿದ 'ಸಿರಿಭೂವಲಯ' ಗ್ರಂಥದ ಆಧಾರದಿಂದ ಕನ್ನಡ ಭಾಷೆ ಗುಪ್ತಭಾಷೆಯಾಗಿದ್ದಿತು.(ಬ್ರಹ್ಮರ್ಷಿ ದೇವರಾತರ ಪ್ರಕಾರ ವೇದ ಕಾಲದಿಂದಲೂ ೪ ಗುಪ್ತ ಭಾಷೆಗಳಿವೆಯಂತೆ ಅದರಲ್ಲಿ ಕನ್ನಡ ಭಾಷೆಯೂ ಒಂದೆನಿಸುತ್ತದೆ) ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ ಎಂದು ಕುಮುದೇಂದು ಮುನಿಯು ತನ್ನ ಗ್ರಂಥದಲ್ಲಿ ಸಾಬೀತು ಮಾಡಿದ್ದಾರೆ.

  • "ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ಖಚಿತವಾದ ಮಾಹಿತಿಯನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ. ಕನ್ನಡ ಭಾಷೆಯೂ ಈಗ ವ್ಯಾಪಾರಿ ರಂಗದಲ್ಲೂ ಮುಂಚೂಣಿ ಭಾಷೆಯಾಗಿ ಬೆಳೆಯುತ್ತಿದೆ.


ಉದಾಹರಣೆಗೆ: ಣಿಚ್ಚವು ಹೊಸದಾಗಿರುವಂಕಾಕ್ಷರ ದಚ್ಚುಗಳೊಳಗೊಂಬತ್ತು ಣೊಚ್ಚಿತ್ತು ಬಿನ್ನತ್ತಾಗಿರುತರುವಂಕದ ಅಚ್ಚಕಾವ್ಯಕೆ ಸೊನ್ನೆಯಾದಿಮ್

ನುಣುಪಾದ ಸೊನ್ನೆಯ ಮಧ್ಯದೊಳ್ ಕೂಡಿಸೆ ಗಣಿತರ್ಗೆ ಲೆಕ್ಕವ ತರುವ ಅಣಿಯಾದ ಸೊನ್ನೆಗೆ ಮಣಿಯುತ ನಾನೀಗ ಗುಣಕರ್ಗೆ ಭೂವಲಯವನು

ವರುಷಭಾರತದೊಳು ಬೆಳಗುವೆತ್ತಿಹ ಕಾವ್ಯ ಕರುನಾಡ ಜನರಿಗನಾದಿ ಅರುಹನಾಗಮದೊಂದಿಗೆ ನಯ ಬರುವಂತೆ ವರಕಾವ್ಯವನ್ನು ಕನ್ನದಿಪೆ

ಪುರ ಜಿನನಾಥ ತನ್ನಂಕದೊಳ್ ಬ್ರಾಹ್ಮಿಗೆ ಅರವತ್ನಾಲ್ಕಕ್ಷರವಿತ್ತ ವರಕುವರಿಯರು ಸೌಂದರಿಗೆ ಒಂಬತ್ತನು ಕರುಣಿಸಿದನು ಸೊನ್ನೆ ಸಹಿತ

ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ ಏಳೆಂಟೊಂಬತೆಂಬ ಉನ್ನತವಾದಂಕ ಸೊನ್ನೆಯಿಂ ಹುಟ್ಟಿತೆಂದೆನ್ನುವುದನು ಕಲಿಸಿದನು

ಸರ್ವಜ್ಞದೇವನು ಸರ್ವಾಂಗದಿಂ ಪೇಳ್ದ ಸರ್ವಸ್ವ ಭಾಷೆಯ ಸರಣಿಗೆ ಸಕಲವ ಕರ್ಮಾಟದಣುರೂಪ ಹೊಂದುತ ಪ್ರಕಟದ ಓಂದರೋಳ್ ಅಡಗಿ

ಹದಿನೆಂಟು ಭಾಷೆಯ ಮಹಾಭಾಷೆಯಾಗಲು ಬದಿಯ ಭಾಷೆಗಳೇಳುನೂರು ಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ ಹುದುಗಿದಂಕ ಭೂವಲಯ

ಪರಭಾಷೆಗಳೆಲ್ಲ ಸಂಯೋಗವಾಗಲು ಸರಸ ಶಬ್ದಾಗಮ ಹುಟ್ಟಿ ಸರವದು ಮಾಲೆಯಾದತಿಶಯ ಹಾರದ ಸರಸ್ವತಿ ಕೊರಳ ಆಭರಣ

ಭೌಗೋಳಿಕ ವ್ಯಾಪಕತೆ

ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತಿದೆ, ಮತ್ತು ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ (ಕೇರಳ, ಗೋವಾ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರೆ) ಸಹ ಉಪಯೋಗಿಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್ ಮತ್ತು ಕೊಲ್ಲಿ ದೇಶಗಳಲ್ಲಿ ಸಹ ಸಾಕಷ್ಟು ಕನ್ನಡಿಗರ ಜನಸಂಖ್ಯೆ ಇದೆ. ಇವರೆಲ್ಲರೂ ಕೆಲಸಕ್ಕಾಗಿ ಕರ್ನಾಟಕದಿಂದ ವಲಸೆ ಹೋದವರಾಗಿದ್ದಾರೆ.

ಅಧಿಕೃತ ಮಾನ್ಯತೆ ಮತ್ತು "ಚೆನ್ನುಡಿ"

ಕನ್ನಡದ ಬಾವುಟ
 
 

ಕನ್ನಡ ಭಾಷೆ ಭಾರತ ದೇಶದ ೨೨ ಅಧಿಕೃತ ರಾಷ್ಟ್ರ ಭಾಷೆಗಳಲ್ಲಿ ಒಂದು. ಕರ್ನಾಟಕ ರಾಜ್ಯದ ಏಕೈಕ ಅಧಿಕೃತ ಭಾಷೆ ಕನ್ನಡ. ಅಕ್ಟೋಬರ್ ೩೧, ೨೦೦೮ ರಂದು ಭಾರತ ಸರ್ಕಾರ ಕನ್ನಡ ಭಾಷೆಗೆ ಅಭಿಜಾತ ಸ್ಥಾನಮಾನದ ಜೊತೆಗೆ ಭಾರತದ ಭಾಷೆಗಳಲ್ಲಿ ನಾಲ್ಕನೆಯ ಗೌರವ ಸ್ಥಾನ ನೀಡಿದೆ. ಅಭಿಜಾತ ಭಾಷೆಗೆ ಕನ್ನಡದಲ್ಲಿ "ಚೆನ್ನುಡಿ" ಎಂದೂ ಕೂಡ ಕರೆಯುವರು. ಟೆಂಪ್ಲೇಟು:ದ್ರಾವಿಡ ಭಾಷೆಗಳ ವಂಶಾವಳಿ

ಕನ್ನಡ ಅಕ್ಷರಮಾಲೆ

ಟೆಂಪ್ಲೇಟು:ಮುಖ್ಯ ಕನ್ನಡ ಅಕ್ಷರಮಾಲೆಯಲ್ಲಿ ೫೪ ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿ ಸುಮಾರು ಎಲ್ಲಾ ಭಾರತೀಯ ಭಾಷೆಗಳಲ್ಲಿ ಬರುತ್ತವೆ. ತೆಲುಗು ಲಿಪಿ ಕನ್ನಡ ಭಾಷೆಯ ಲಿಪಿಯನ್ನು ಹೋಲುತ್ತದೆ, ಮತ್ತು ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣ ವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು ಪ್ರತಿನಿಧಿಸುತ್ತದೆ. ಆಂಗ್ಲ (ಇಂಗ್ಲೀಷ್) ವೊದಲಾದ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ.

ಮಾನವನು ತಿಳಿಸಬೇಕಾದ ಅರ್ಥಕ್ಕೆ ಭಾಷೆ ಸಂಕೇತವಾದರೆ, ಭಾಷೆಗೆ ಲಿಪಿ ಸಂಕೇತವಾಗುತ್ತದೆ. ಚಿತ್ರಲಿಪಿಯಿಂದ ಹಿಡಿದು ಇಂದಿನ ಮುದ್ರಣ— ಕಂಪ್ಯೂಟರ್ ಲಿಪಿಯವರೆಗೆ ಲಿಪಿಗಳು ಬೆಳೆದಿವೆ. ಭಾರತದಲ್ಲಿರುವ ಅನೇಕ ಭಾಷಾಲಿಪಿಗಳಿಗೂ ಅಶೋಕನ ಶಾಸನಗಳ ಬ್ರಾಹ್ಮೀಲಿಪಿಯೇ ಮೂಲ. ಶತಮಾನಗಳು ಕಳೆದ ಮೇಲೆಯೂ ಈಗ ಕನ್ನಡದ ಅಕ್ಷರಗಳು ಬ್ರಾಹ್ಮೀಲಿಪಿಯಿಂದ ಹೇಗೆ ಬೆಳೆದು ಬಂದಿವೆ ಎಂಬುದನ್ನು ಕ್ರಮವಾಗಿ ವಿವರಿಸಬಹುದು. ವಿದ್ವಾಂಸರು ಈ ಬಗ್ಗೆ ವರ್ಣಮಾಲೆಯ ಪಟಗಳನ್ನು ರಚಿಸಿ ಶತಮಾನಗಳ ಅಕ್ಷರ ಸ್ವರೂಪ ಗಳನ್ನು ಗುರುತಿಸಿದ್ದಾರೆ. ಇದರಿಂದ ಅಕ್ಷರಗಳು ಬದಲಾದ ಸ್ವರೂಪವನ್ನು ಪಡೆದ ಕ್ರಮವನ್ನು ನಾವು ಕಣ್ಣಾರೆ ಕಾಣಬಹುದು. ಮುದ್ರಣ ಬಂದ ಮೇಲೆ ಕನ್ನಡಕ್ಕೆ ಈಗಿನ ರೂಪ ನಿಂತಿದೆ. ಪ್ರಪಂಚದಲ್ಲಿ ೧೮ ಬಗೆಯ ಲಿಪಿಗಳಿವೆ. ಇವುಗಳಲ್ಲಿ ೮ ಅಕ್ಷರ ಲಿಪಿಗಳು. ಮಿಕ್ಕವು ಚಿತ್ರಲಿಪಿ ಮುಂತಾದವು. ಭಾರತದಲ್ಲಿ ಅನೇಕ ಭಾಷೆಗಳಿಗೆ ಬ್ರಾಹ್ಮಿಲಿಪಿಯಿಂದ ಬಂದ ಅನೇಕ ಲಿಪಿಗಳೇ ಇವೆ. ಜೊತೆಗೆ ಪರ್‍ಸೋ-ಅರೇಬಿಕ್ ಲಿಪಿಗಳೂ ಇವೆ.

ಉದಾ: ಉರ್ದು, ಕಾಶ್ಮೀರಿ, ಪುಷ್ಟು.

ಕನ್ನಡ ವರ್ಣಮಾಲೆಯಲ್ಲಿ ಇರಬೇಕಾದ ಅಕ್ಷರಗಳ ಬಗ್ಗೆ ವಿದ್ವಾಂಸರಲ್ಲಿ ಬೇಕಾದಷ್ಟು ಚರ್ಚೆಯಾಗಿದೆ. ಕೊನೆಯದಾಗಿ ಈಗ ಕನ್ನಡದ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು:

ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ ಕ್ಷ ತ್ರ ಜ್ಞ

= ಒಟ್ಟು ೫೨.

ಈಚೆಗೆ ಇಂಗ್ಲಿಷಿನ F, Z ಎಂಬ ಧ್ವನಿಯನ್ನು ಫ಼ ಜ಼ ಎಂಬಂತೆ ಗುರುತಿಸುತ್ತ ಇದ್ದಾರೆ. ಆಗ ೫೪.

ಱ ಮತ್ತು  ೞ ಗಳನ್ನು ಈಗ ಬಳಸುತ್ತಿಲ್ಲ.

ಕನ್ನಡ ವರ್ಣಮಾಲೆಯಲ್ಲಿ ಇರಬೇಕಾದ ಅಕ್ಷರಗಳ ಬಗ್ಗೆ ವಿದ್ವಾಂಸರಲ್ಲಿ ಬೇಕಾದಷ್ಟು ಚರ್ಚೆಯಾಗಿದೆ.

ವರ್ಣ ವ್ಯವಸ್ಥೆ

ಕನ್ನಡ ಭಾಷೆಯಲ್ಲಿ ಕೆಲವು ವರ್ಣಗಳು ತನ್ನ ರಚನೆಯಲ್ಲಿ (ಉಚ್ಛಾರಣೆಯಲ್ಲಿ) ಸ್ವತಂತ್ರವಾಗಿ ಉಪಯೋಗಿಸಲ್ಪಡುತ್ತವೆ. ಇವುಗಳನ್ನು ಸ್ವರಗಳೆಂದು ಕರೆಯುತ್ತೇವೆ. ಹಾಗೂ, ಸ್ವರ ಸಹಾಯದಿಂದ ಉಪಯೋಗಿಸಲ್ಪಡುವ ವರ್ಣಗಳನ್ನು ವ್ಯಂಜನಗಳೆಂದು ಕರೆಯುತ್ತೇವೆ.

ಸ್ವರಗಳ ವಿಧಗಳು

ಸ್ವರಗಳನ್ನು ಅವುಗಳ ಉಚ್ಛಾರಣೆಗೆ ತೆಗೆದುಕೊಳ್ಳುವ ಕಾಲಾವಧಿಯನ್ನು ಅವಲಂಬಿಸಿ ಹ್ರಸ್ವಸ್ವರಗಳು, ಮತ್ತು ದೀರ್ಘಸ್ವರಗಳು ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ.

ಹ್ರಸ್ವ ಸ್ವರವನ್ನು ಉಚ್ಛಾರಣೆ ಮಾಡಲು ಬೇಕಾದ ಕಾಲವನ್ನು ಛಂದಸ್ಸಿನಲ್ಲಿ ಒಂದು ಮಾತ್ರೆಯ ಕಾಲ ಎಂದು ಕರೆಯಲಾಗಿದೆ. ಉದಾಹರಣೆಗೆ: ಅ, ಇ, ಉ, ಋ, ಎ, ಒ

ದೀರ್ಘಸ್ವರಗಳ ಉಚ್ಛಾರಣೆಗೆ ಎರಡು ಮಾತ್ರೆಗಳ ಕಾಲವನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ: ಆ, ಈ, ಊ, ೠ, ಏ, ಐ, ಓ, ಔ

"ಋ"ಕಾರವನ್ನು ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಪದಗಳಲ್ಲಿ ಮಾತ್ರ ಕಾಣುತ್ತೇವೆ.

"ಐ" ಮತ್ತು "ಔ"ಗಳ ಸ್ವರೂಪ: ಇವು ವಾಸ್ತವದಲ್ಲಿ ಎರಡು ಬೇರೆ ಬೇರೆ ಸ್ವರಗಳ ಸಂಯೋಗದಿಂದ ಉಂಟಾಗುತ್ತವೆ. ಅ ಮತ್ತು ಇ ಸ್ವರಗಳ ಸಂಧಿಸುವಿಕೆಯಿಂದ "ಐ"ಕಾರವು ಉಂಟಾಗಿದ್ದು, ಅ ಮತ್ತು ಉ ಸ್ವರಗಳಿಂದ "ಔ"ಕಾರವು ಜನಿಸಿದೆ. ಈ ಎರಡು ಸ್ವರಗಳು ವಿಜಾತೀಯ ಸ್ವರಗಳ ಸಂಧಿಸುವಿಕೆಯಿಂದ ಆಗಿದ್ದು, ಅವುಗಳ ದೀರ್ಘ ಸ್ವರೂಪದಿಂದಾಗಿ ದೀರ್ಘಸ್ವರಗಳ ಪಟ್ಟಿಗೆ ಸೇರಿಸಲಾಗಿವೆ.

ವ್ಯಂಜನದ ವಿಧಗಳು

ವ್ಯಂಜನಗಳನ್ನು ಉಚ್ಚಾರಣೆಯ ಆಧಾರದ ಮೇಲೆ "ಕ್"ನಿಂದ "ಮ್"ಕಾರದ ವರೆಗಿನ ಇಪ್ಪತ್ತೈದು ವರ್ಣಗಳನ್ನು ವರ್ಗೀಯ ವ್ಯಂಜನಗಳೆಂದು ಕರೆಯುತ್ತೇವೆ. "ಯ್"ಕಾರದಿಂದ "ಳ್"ಕಾರದ ವರೆಗಿನ ವ್ಯಂಜನಗಳನ್ನು ಅವರ್ಗೀಯ ವ್ಯಂಜನಗಳೆನ್ನುತ್ತೇವೆ.

ಕನ್ನಡ ಲಿಪಿಯ ವಿಕಾಸ

      ಕನ್ನಡದ ಹಳೆಯ ನ್ ಅಕ್ಷರ/ ನಕರಪಿಲ್ಲು.

ಲಿಪ್ಯಂತರಣ

ಕನ್ನಡ ಅಕ್ಷರಗಳನ್ನು ಗಣಕಯಂತ್ರದಲ್ಲಿ ಸಾಮಾನ್ಯ ಕೀಲಿಮಣೆಯ ಮೂಲಕ ಮೂಡಿಸಲು ಅನೇಕ ಲಿಪ್ಯಂತರಣ ವಿಧಾನಗಳಿವೆ. ಇವುಗಳಲ್ಲಿ ಕೆಲವೆಂದರೆ INSCRIPT, ITRANS, ಬರಹ ಮತ್ತು ನುಡಿ. ಕರ್ನಾಟಕ ಸರ್ಕಾರದ ಅಧಿಕೃತ ಲಿಪ್ಯಂತರಣ ವಿಧಾನ ನುಡಿ. INSCRIPT ಶಿಷ್ಟಾಚಾರವನ್ನು ವಿಂಡೋಸ್ ಹಾಗೆಯೇ GNOME ಬಳಸುವ ಎಲ್ಲಾ ಕಾರ್ಯಾಚರಣೆ ವ್ಯವಸ್ಥೆಗಳೂ ಗುರುತು ಹಿಡಿಯುತ್ತವೆ.

ಉಲ್ಲೇಖಗಳು

ಟೆಂಪ್ಲೇಟು:Reflist

ಹೆಚ್ಚಿಗೆ ಓದಲು

ಬಾಹ್ಯ ಸಂಪರ್ಕಗಳು

ಟೆಂಪ್ಲೇಟು:ಭಾರತೀಯ ಭಾಷೆಗಳು