ಕನ್ನಡ ನಾಡು ನುಡಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಕಲಿಕೋದ್ದೇಶಗಳು

ಕವಿ ಪರಿಚಯ

ಶ್ರೀವಿಜಯ:

  • ಶ್ರೀವಿಜಯನ ಕಾಲ: ಕ್ರಿ.ಶ. ಸುಮಾರು ೯ನೆಯ ಶತಮಾನ
  • ಆಶ್ರಯದಾತ: ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ
  • ಈತನ ಕೃತಿ ಕವಿರಾಜಮಾರ್ಗ ಎಂಬ ಲಕ್ಷಣ ಗ್ರಂಥ ಇದು ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಕೃತಿಯಾಗಿದೆ.

ನಯಸೇನ :

  • ನಯಸೇನನ ಕಾಲ: ಕ್ರಿ.ಶ. ಸುಮಾರು ೧೨ನೆಯ ಶತಮಾನ  ಸ್ಥಳ: ಧಾರವಾಡ ಜಿಲ್ಲೆಯ ಮುಳುಗುಂದ.
  • ಈತನ ಪ್ರಮುಖ ಕೃತಿ:  ಧರ್ಮಾಮೃತ ಎಂಬ ಚಂಪೂ ಕಾವ್ಯ.
  • ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ವಿರೋಧ ವ್ಯಕ್ತಪಡಿಸುತ್ತಾನೆ.

[ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು. ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ-ತುಪ್ಪಗಳ ಮಿಶ್ರಣದಂತೆ ಅಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ.]

ನೇಮಿಚಂದ್ರ :

  • ನೇಮಿಚಂದ್ರನ ಕಾಲ: ಕ್ರಿ.ಶ. ಸುಮಾರು ೧೨ನೆಯ ಶತಮಾನ.
  • ಈತನ ಕೃತಿಗಳು: ಲೀಲಾವತೀ ಪ್ರಬಂಧ ಹಾಗೂ ಅರ್ಧನೇಮಿ ಪುರಾಣ
  • ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ.

ಮಹಲಿಂಗರಂಗ :

  • ಮಹಲಿಂಗರಂಗನ ಕಾಲ: ಕ್ರಿ.ಶ. ಸುಮಾರು ೧೭ ನೆಯ ಶತಮಾನ.
  • ಇವನ ನಿಜನಾಮ: ಶ್ರೀರಂಗ. ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ.
  • ಈತನ ಆರಾಧ್ಯ ದೈವ: ಶ್ರೀಶೈಲ ಮಲ್ಲಿಕಾರ್ಜುನ.
  • ಈತನ ಪ್ರಮುಖ ಕೃತಿ: ಅನುಭವಾಮೃತ. ಇದು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ.

ಆಂಡಯ್ಯ :

  • ಆಂಡಯ್ಯನ ಕಾಲ: ಕ್ರಿ.ಶ. ಸುಮಾರು ೧೩ನೇ ಶತಮಾನ.
  • ಆಶ್ರಯದಾತ: ಕದಂಬರ ದೊರೆ ಕಾಮದೇವ.
  • ಇವನ ಪ್ರಮುಖ ಕೃತಿ: ಕಬ್ಬಿಗರ ಕಾವ ಅಥವಾ ಕಬ್ಬಿಗರ ಕಾವಂ ಎಂಬ ಚಂಪೂ ಕಾವ್ಯ
  • ಕನ್ನಡ ಸಾಹಿತ್ಯದಲ್ಲಿ ಕಬ್ಬಿಗರ ಕಾವಂ ಒಂದು ವಿಶಿಷ್ಟ ಕೃತಿ. ಸಂಸ್ಕೃತದ ಸಹಾಯವನ್ನು ಪಡೆಯದೆ ಕೇವಲ ತದ್ಭವ ಪದಗಳನ್ನೂ ದೇಸೀ ನುಡಿಗಳನ್ನು ಬಳಸಿಕೊಂಡು ಈ ಕೃತಿಯನ್ನು ಕಟ್ಟಲಾಗಿದೆ.

[ಕನ್ನಡ ನಾಡು-ನುಡಿ ಪದ್ಯದಲ್ಲಿ ಇರುವ ಪದ್ಯಗಳನ್ನು ಬಿ.ಎಂ.ಶ್ರೀ. ಅವರು ಸಂಪಾದಿಸಿರುವ ಕನ್ನಡ ಬಾವುಟ ಕೃತಿಯಿಂದ ಆರಿಸಿಕೊಳ್ಳಲಾಗಿದೆ.]

ಶಿಕ್ಷಕರಿಗೆ ಟಿಪ್ಪಣಿ

ಹೆಚ್ಚುವರಿ ಸಂಪನ್ಮೂಲ

ಸಾರಾಂಶ

(ಈ ಸಾರಾಂಶಕ್ಕೆ ಕನ್ನಡ ದೀವಿಗೆಯ ಸಹಾಯ ಪಡೆಯಲಾಗಿದೆ )

ಪದನಱಿದು ನುಡಿಯಲುಂ ನುಡಿ 

ದುದನಱಿದಾರಯಲುಮಾರ್ಪರಾ ನಾಡವರ್ಗಳ್| 

ಚದುರರ್ ನಿಜದಿಂ ಕುಱತೋ

ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್||೧||            - ಶ್ರೀವಿಜಯ

ಪದವಿಭಾಗ ಕ್ರಮ: ಪದನರಿದು (ಪದವನ್ನು ಅರಿತು) ನುಡಿಯಲುಂ (ನುಡಿಯಲು) ನುಡಿದುದನ್ (ನುಡಿದುದನ್ನು) + ಅರಿದು (ತಿಳಿದು) + ಆರಯಲುಮ್ (ಪಾಲಿಸಲು) + ಆರ್ಪರ್ (ಸಾಮರ್ಥ್ಯವುಳ್ಳವರು) + ಆ ನಾಡವರ್ಗಳ್ (ಆ ಜನಸಾಮಾನ್ಯರು/ನಾಡಜನರು) ಚದುರರ್ (ಚತುರರು) ನಿಜದಿಂ(ನಿಜವಾಗಿ) ಕುರಿತು (ಉದ್ದೇಶವಿಟ್ಟು) + ಓದದೆಯಂ (ಓದದಿದ್ದರೂ/ವಿದ್ಯಾಭ್ಯಾಸ ಮಾಡದಿದ್ದರೂ) ಕಾವ್ಯ (ಕವಿತೆ) ಪ್ರಯೋಗ (ಸೃಷ್ಟಿಸುವ/ರಚಿಸುವ) ಪರಿಣತ (ಪರಿಣತಿ ಹೊಂದಿರುವ) ಮತಿಗಳ್ (ಬುದ್ಧಿವುಳ್ಳವರು).

ಸಾರಾಂಶ: ಶ್ರೀವಿಜಯನು ಕನ್ನಡನಾಡಿನ ಜನರು ಪದದ ಅರ್ಥವನ್ನು ಅರಿತು ಮಾತನಾಡುವ ಸಾಮರ್ಥ್ಯವುಳ್ಳವರು. ತಾವು ಆಡುವ ಮಾತನ್ನು ಅರ್ಥಮಾಡಿಕೊಂಡು ನಡೆಯುವವರಾಗಿದ್ದರು. ಆ ಸಾಮಾನ್ಯ ಜನರು ನಿಜವಾಗಿಯು ಚತುರರು, ಅವರು ಶಿಕ್ಷಣವನ್ನು ಪಡೆಯದಿದ್ದರು ಕಾವ್ಯವನ್ನು ರಚಿಸುವಷ್ಟು ಪರಿಣತಿ ಹೊಂದಿದ ಬುದ್ಧಿಯುಳ್ಳವರು ಎಂದು ಕನ್ನಡಿಗರ ಗುಣ ವಿಶೇಷತೆ ಹಾಗೂ ಕಾವ್ಯ ಶಕ್ತಿಯನ್ನು ವರ್ಣಿಸಿದ್ದಾನೆ.

*****

ಸಕ್ಕದಮಂ ಪೇೞ್ವೊಡೆ ನೆಱೆ

ಸಕ್ಕದಮಂ ಪೇೞ್ಗೆ ಶುದ್ಧ ಕನ್ನಡದೊಳ್ ತಂ|

ದಿಕ್ಕುವುದೇ ಸಕ್ಕದಮಂ

ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ||೨||             -  ನಯಸೇನ

ಪದವಿಭಾಗ ಕ್ರಮ: ಸಕ್ಕದಮಂ (ಸಂಸ್ಕೃತವನ್ನು) ಪೇೞ್ವೊಡೆ (ಹೇಳುವುದಾದರೆ) ನೆರೆ (ಪೂರ್ಣ) ಸಕ್ಕದಮಂ (ಸಂಸ್ಕೃತವನ್ನು) ಪೇೞ್ಗೆ (ಹೇಳಿ) ಸುದ್ದ (ಶುದ್ಧ) ಕನ್ನಡದೊಳ್ (ಕನ್ನಡದಲ್ಲಿ) ತಂದು + ಇಕ್ಕುವುದೇ (ಹಾಕುವುದೇ) ಸಕ್ಕದಮಂ (ಸಂಸ್ಕೃತವನ್ನು) ತಕ್ಕುದೆ (ಸರಿಯೇ / ಉಚಿತವೇ) ಬೆರಸಲ್ಕೆ (ಬೆರೆಸಲು) ಘೃತಮುಮಂ (ತುಪ್ಪವನ್ನೂ) ತೈಲಮುಮಂ (ಎಣ್ಣೆಯನ್ನೂ)

ಸಾರಾಂಶ: ನಯಸೇನನು, ಕವಿಗಳು ಕನ್ನಡದಲ್ಲಿ ಕಾವ್ಯವನ್ನು ರಚಿಸುವಾಗ ಕನ್ನಡದೊಂದಿಗೆ ಸಂಸ್ಕೃತ ಶಬ್ದಗಳನ್ನು ಹೆಚ್ಚಾಗಿ ಬಳಸುತ್ತಿದ್ದುದನ್ನು ನೋಡಿ ಅದನ್ನು ಆಕ್ಷೇಪಿಸುತ್ತಾನೆ. ಅವನು, ಕಾವ್ಯ ರಚಿಸುವುದಾದರೆ ಶುದ್ಧ ಕನ್ನಡದಲ್ಲಿ ರಚಿಸಬೇಕು; ಇಲ್ಲವೇ ಪೂರ್ಣವಾಗಿ ಸಂಸ್ಕೃತದಲ್ಲಿ ರಚಿಸಬೇಕು; ಶುದ್ಧವಾದ ಕನ್ನಡದಲ್ಲಿ ಸಂಸ್ಕೃತವನ್ನು ತಂದು ತುರುಕುವುದು ಸರಿಯೇ? ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ-ತುಪ್ಪಗಳ ಅಸ್ವಾದ ಮಿಶ್ರಣವಾಗುತ್ತದೆ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.

******

ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ|

ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರನೊತ್ತಿ ಗಂಟಲಂ|

ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್|

ಮುಟ್ಟಿದರೊತ್ತಿ ಮೆಟ್ಟಿದರದೇನಳವಗ್ಗಳಮೋಕವೀಂದ್ರರಾ|| ೩ ||               - ನೇಮಿಚಂದ್ರ

ಪದವಿಭಾಗ ಕ್ರಮ: ಕಟ್ಟುಗೆ (ಕಟ್ಟಲಿ) ಕಟ್ಟದಿರ್ಕೆ (ಕಟ್ಟದಿರಲಿ) ಕಡಲಂ (ಸಮುದ್ರವನ್ನು) ಕಪಿಸಂತತಿ (ವಾನರ ಸೈನ್ಯವು), ವಾಮನಕ್ರಮಂ (ವಾಮನಾವತಾರದಲ್ಲಿ) ಮುಟ್ಟುಗೆ ಮುಟ್ಟಲಿ) ಮುಟ್ಟದಿರ್ಕೆ (ಮುಟ್ಟದಿರಲಿ) ಮುಗಿಲಂ (ಆಕಾಶವನ್ನು), ಹರನಂ (ಹರನನ್ನು) ನರನೊತ್ತಿ (ಅರ್ಜುನನು ಒತ್ತಿ) ಗಂಟಲಂ (ಗಂಟಲನ್ನು) ಮೆಟ್ಟುಗೆ (ಮೆಟ್ಟಲಿ) ಮೆಟ್ಟುದಿರ್ಕೆ (ಮೆಟ್ಟದಿರಲಿ) ಕವಿಗಳ್ (ಕವಿಗಳು) ಕೃತಿಬಂಧದೊಳ್ (ಕಾವ್ಯದಲ್ಲಿ) + ಅಲ್ತೆ (ಅಲ್ಲವೇ) ಕಟ್ಟಿದರ್ (ಕಟ್ಟಿದರು) ಮುಟ್ಟಿದರ್ (ಮುಟ್ಟಿದರು) ಒತ್ತಿ ಮೆಟ್ಟಿದರ್ (ಒತ್ತಿ ಮೆಟ್ಟಿದರು) + ಅದೇನು + ಅವರ + ಅಗ್ಗಳಮೋ (ಸಾಮರ್ಥ್ಯವೋ / ಹಿರಿಮೆಯೋ) ಕವೀಂದ್ರರಾ (ಕವೀಂದ್ರರು).

ಸಾರಾಂಶ: ನೇಮಿಚಂದ್ರನು ಕವಿಗಳ ಕಾವ್ಯ ಶಕ್ತಿಯನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಾ ರಾಮಾಯಣದಲ್ಲಿ ವಾನರ ಸೈನ್ಯವು ಸಮುದ್ರಕ್ಕೆ ಸೇತುವೆಯನ್ನು ಕಟ್ಟಲಿ ಕಟ್ಟದಿರಲಿ. ವಾಮನಾವತಾರದಲ್ಲಿ ವಾಮನನು ಆಕಾಶವನ್ನು ತನ್ನ ಕಾಲಿನಿಂದ ಮುಟ್ಟಲಿ ಮುಟ್ಟದಿರಲಿ. ಮಹಾಭಾರತದಲ್ಲಿ ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಲಿ ಮೆಟ್ಟದಿರಲಿ. ಆದರೆ ಕವಿಗಳು ತಮ್ಮ ಕೃತಿಗಳಲ್ಲಿ ವಾನರ ಸೈನ್ಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರು; ವಾಮನನ ಕಾಲಿನಿಂದ ಆಕಾಶವನ್ನು ಮುಟ್ಟಿದರು; ಅರ್ಜುನನ ಕಾಲಿನಿಂದ ಶಿವನ ಗಂಟಲನ್ನು ಒತ್ತಿ ಮೆಟ್ಟಿದರು; ಇದು ಕವಿಗಳ ಸಾಮರ್ಥ್ಯ/ಅಗ್ಗಳಿಕೆ ಎಂದು ಹೇಳಿದ್ದಾನೆ.

******

ಸುಲಿದ ಬಾಳೆಯ ಹಣ್ಣಿನಂದದಿ ಕಳಿದ ಸಿಗುರಿನ ಕಬ್ಬಿನಂದದಿ

ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ

ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ

ಗಳಿಸಿಕೊಂಡೊರೆ ಸಾಲದೇ ಸಂಸ್ಕೃತದಲಿನ್ನೇನು?  ||೪||                           - ಮಹಲಿಂಗರಂಗ

ಪದವಿಭಾಗ ಕ್ರಮ: ಸುಲಿದ ಬಾಳೆಯ ಹಣ್ಣಿನಂದದಿ (ಹಣ್ಣಿನಂತೆ) ಕಳಿದ ಸಿಗುರಿನ ಕಬ್ಬಿನಂದದಿ (ಸಿಗುರು ತೆಗೆದ ಕಬ್ಬಿನಂತೆ) ಅಳಿದ ಉಷ್ಣದ ಹಾಲಿನಂದದಿ (ಶಾಖ ಆರಿದ ಹಾಲಿನಂತೆ) ಸುಲಭವಾಗಿ + ಇರ್ಪ (ಇರುವ) ಲಲಿತವಹ (ಲಲಿತವಾದ) ಕನ್ನಡದ ನುಡಿಯಲಿ (ಕನ್ನಡ ಭಾಷೆಯಲ್ಲಿ) ತಿಳಿದು (ಅರ್ಥಮಾಡಿಕೊಂಡು) ತನ್ನೊಳು (ತನ್ನಲ್ಲಿ) ಮೋಕ್ಷವ (ಮೋಕ್ಷವನ್ನು) ಗಳಿಸಿಕೊಂಡಡೆ (ಗಳಿಸಿಕೊಂಡರೆ) ಸಾಲದೇ(ಸಾಲುವುದಿಲ್ಲವೇ) ಸಂಸ್ಕೃತದೊಳ್ (ಸಂಸ್ಕೃತದಲ್ಲಿ) ಇನ್ನೇನು(ಇನ್ನೇನಿದೆ).

ಸಾರಾಂಶ: ಮಹಲಿಂಗರಂಗನು ಕನ್ನಡ ಭಾಷೆಯ ಸರಳತೆ, ಮಧುರತೆ, ಶಕ್ತಿಯ ಬಗ್ಗೆ ವರ್ಣಿಸುತ್ತಾ ಸುಲಿದ ಬಾಳೆಯ ಹಣ್ಣಿನಂತೆ; ಸಿಗುರು ತೆಗೆದ ಕಬ್ಬಿನಂತೆ; ಶಾಖ ಆರಿಹೋಗಿ ತಣ್ಣಗಾದ ಹಾಲಿನಂತೆ ಸುಲಭವಾಗಿರುವ, ಸುಲಲಿತವಾಗಿರುವ ಕನ್ನಡ ಭಾಷೆಯನ್ನು ಅರಿತು, ಮೋಕ್ಷವನ್ನು ಗಳಿಸಿಕೊಂಡರೆ ಸಾಲದೇ? ಸಂಸ್ಕೃತ ಭಾಷೆಯಲ್ಲಿ ಅಂತಹುದು ಏನಿದೆ? ಎಂದು ಪ್ರಶ್ನಿಸುತ್ತಾನೆ. ಮುಕ್ತಿ ಪಡೆಯಲು ಕನ್ನಡದಲ್ಲೇ ದೇವರನ್ನು ಸ್ತುತಿಸಿ ಮುಕ್ತಿ ಪಡೆಯಬಹುದಲ್ಲವೇ? ಅದಕ್ಕೆ ಸಂಸ್ಕೃತದಲ್ಲೇ ಶ್ಲೋಕ ಹೇಳಬೇಕೆಂದೇನಿಲ್ಲ. ಸಂಸ್ಕೃತ ಭಾಷೆಯಷ್ಟೇ ಶಕ್ತಿ ಕನ್ನಡ ಭಾಷೆಗೂ ಇದೆ ಎಂದು ಕವಿ ಅಭಿಪ್ರಾಯಪಟ್ಟಿದ್ದಾನೆ.

******

ಮಲ್ಲಿಗೆಯಲ್ಲದೆ ಸಂಪಗೆ|

ಯಲ್ಲದೆ ದಾಳಿಂಬಮಲ್ಲದೊಪ್ಪುವ ಚೆಂದೆಂ|| 

ಗಲ್ಲದೆ ಮಾವಲ್ಲದೆ ಕೌಂ|

ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್||೫||                   -ಆಂಡಯ್ಯ

ಪದವಿಭಾಗ ಕ್ರಮ: ಮಲ್ಲಿಗೆ + ಅಲ್ಲದೆ ಸಂಪಗೆ + ಅಲ್ಲದೆ ದಾಳಿಂಬಮ್(ದಾಳಿಂಬೆ) + ಅಲ್ಲದೆ + ಒಪ್ಪುವ (ಸುಂದರವಾದ) ಚೆಂದೆಂಗು (ಕೆಂದಂಗಿ/ಕೆಂಪಾದ ತೆಂಗು) + ಅಲ್ಲದೆ ಮಾವು + ಅಲ್ಲದೆ ಕೌಂಗು (ಅಡಿಕೆ) + ಅಲ್ಲದೆ ಗಿಡಮರಗಳ್(ಗಿಡಮರಗಳು) + ಎಂಬುವು + ಇಲ್ಲ + ಆ ನಾಡೊಳ್ (ಆ ನಾಡಿನಲ್ಲಿ)

ಸಾರಾಂಶ: ಆಂಡಯ್ಯ ಕನ್ನಡ ನಾಡಿನ ಸಸ್ಯ ಸಂಪತ್ತನ್ನು ಕುರಿತು ಕನ್ನಡನಾಡಿನಲ್ಲಿ ಮಲ್ಲಿಗೆ ಅಲ್ಲದೆ; ಸಂಪಗೆ ಅಲ್ಲದೆ; ಕೆಂಪಾದ ತೆಂಗು ಅಲ್ಲದೆ; ಮಾವು ಅಲ್ಲದೆ ಅಡಿಕೆ ಅಲ್ಲದೆ; ಗಿಡಮರಗಳೇ ಇಲ್ಲ ಎಂದು ವರ್ಣಿಸುತ್ತಾನೆ. ಕನ್ನಡ ನಾಡಿನಲ್ಲಿ ಉತ್ತಮ ಫಲ ನೀಡುವಂತಹ ಸಸ್ಯಗಳು ಸಮೃದ್ಧವಾಗಿವೆ ಎಂಬುದು ಆಂಡಯ್ಯನಿಗೆ ಕನ್ನಡ ನಾಡಿನ ಬಗ್ಗೆ ಇದ್ದ ಅಭಿಮಾನವನ್ನೂ ಅಂದಿನ ಸಮೃದ್ಧಿಯನ್ನೂ ಸೂಚಿಸುತ್ತದೆ.

ಪರಿಕಲ್ಪನೆ ೧

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ