ಮಗ್ಗದ ಸಾಹೇಬ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೯:೩೮, ೧೧ ಆಗಸ್ಟ್ ೨೦೨೦ ರಂತೆ Kishor (ಚರ್ಚೆ | ಕಾಣಿಕೆಗಳು) ಇವರಿಂದ (removed Category:೮ನೇ ತರಗತಿ using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಪರಿಕಲ್ಪನಾ ನಕ್ಷೆ

ಚಿತ್ರ:Maggada Saheba Lesson Plan edited.mm

ಕಲಿಕೋದ್ದೇಶಗಳು

ಪಾಠದ ಉದ್ದೇಶ

  1. ಸಣ್ಣ ಕಥೆ ಸಾಹಿತ್ಯದ ಪರಿಚಯ
  2. ಅಜ್ಞಾತ ಸಾಹಿತಿಯ ಪರಿಚಯ
  3. ಪ್ರಾದೇಶಿಕತೆಯ ಪರಿಚಯ
  4. ಧಾರ್ಮಿಕ ಸಹಿಷ್ಣತೆಯನ್ನು ಅರ್ಥೈಸುವುದು
  5. ಮಕ್ಕಳಲ್ಲಿ ಔದ್ಯೋಗಿಕ ಶಿಕ್ಷಣ, ಸ್ವಯಂ ಉದ್ಯೋಗ, ನವೀನ ಶಿಕ್ಷಣದ ಮಹತ್ವವನ್ನು ತಿಳಿಸುವುದು.
  6. ಗುಡಿ ಕೈಗಾರಿಕೆಯ ಪ್ರಸ್ತುತ ಪರಿಸ್ಥಿತಿಯ ಅವಲೋಕನ

ಭಾಷಾ ಕಲಿಕಾ ಗುರಿಗಳು

  1. ಗ್ರಾಮೀಣ ವೃತ್ತಿಗಳನ್ನು ಪರಿಚಯಿಸಲು ಚಿತ್ರ ಸಂಪನ್ಮೂಲದ ಬಳಕೆ
  2. ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಅದಲು ಬದಲಾದ ಅಕ್ಷರಗಳ ಮೂಲಕ ಪದವನ್ನು ಗುರುತಿಸಲು ಇಂಡಿಕ್‌ ಅನಾಗ್ರಾಮ್ ಅನ್ವಯಕದ ಬಳಕೆ
  3. ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ಸಂಪನ್ಮೂಲ ಬಳಕೆ
  4. ಕಠಿಣ ಪದಗಳ ಅರ್ಥ ತಿಳಿಯಲು  ಗೋಲ್ಡನ್‌ ಶಬ್ಧಕೋಶದ ಬಳಕೆ

ಹಿನ್ನೆಲೆ / ಸಂದರ್ಭ

ಪಾಠದ ಸನ್ನಿವೇಶ

ಈ ಗದ್ಯಪಾಠವನ್ನು ಬಾಗಲೋಡಿ ದೇವರಾಯರ ಸಣ್ಣಕಥೆಯಿಂದ ಆಯ್ದುಕೊಳ್ಳಲಾಗಿದೆ. ಇದರಲ್ಲಿ ಲೇಖಕರು ಅನೇಕ ಆಶಯವನ್ನು ತಿಳಿಸಿದ್ದಾರೆ. ಇಲ್ಲಿ ಸ್ವತಂತ್ರ ಪೂರ್ವದ ಕಾಲದಲ್ಲಿ ಮೊದಲಿಗೆ ಕೈಗಾರೀಕರಣವು ಭಾರತದ ಮೇಲೆ ಪರಿಣಾಮ ಬೀರಿದ ಸನ್ನಿವೇಶದಲ್ಲಿ ಇದು ನಡೆದಿರಬಹುದಾದ ಸುಳಿವನ್ನು ಲೇಖಕರು ನೀಡಿದ್ದು ಪಾಠಭಾಗದ ಎಲ್ಲಿಯೂ ಇದನ್ನು ಪ್ರಸ್ತಾಪಿಸಿಲ್ಲ. ಗುಡಿ ಕೈಗಾರಿಕೆಯು ಪ್ರಧಾನವಾಗಿದ್ದ ದೇಶದ ಮೇಲೆ ಕೈಗಾರೀಕರಣ ಮಾಡಿದ ಪರಿಣಾಮದ ಸನ್ನಿವೇಶವನ್ನು ಈ ಪಾಠವನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸಮಾಡಬೇಕು. ಪಕೃತ ಗದ್ಯಭಾಗವು ಧಾರ್ಮಿಕ ಸಹಿಷ್ಣತೆ, ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶಗಳು, ಶಾಲೆಗಳಲ್ಲಿ ಔದ್ಯೋಗಿಕ ಶಿಕ್ಷಣ, ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಮೊದಲಾದ ಅಂಶಗಳನ್ನು ಒಳಗೊಂಡಿದೆ. ತಂದೆಯು ಮಗನಿಗಿದ್ದ ಮಗ್ಗದ ಬಗೆಗಿನ ಒಲವಿಗೆ ವಿರೋಧ ವ್ಯಕ್ತಪಡಿಸಿದರು. ಇದರಿಂದ ಮನನೊಂದ ಮಗ ತನ್ನ ಮಾರ್ಗವನ್ನು ಸ್ವತಂತ್ರವಾಗಿ ಕಂಡುಕೊಂಡನು.

ಜಾನಪದ, ಪ್ರಾದೇಶಿಕ ಸಂಸ್ಕೃತಿ

ಗೃಹ ಕೈಗಾರಿಕೆಗಳು ಮತ್ತು ದೊಡ್ಡ ಪ್ರಮಾಣದ ಕೈಗಾರಿಕೆ

ಖಾದಿ ಉದ್ಯಮದ ಇತಿಹಾಸ (ಆಂಗ್ಲದಲ್ಲಿದೆ)

ಆಧುನಿಕ - ಮತ್ತು ಗುಡಿ ಕೈಗಾರಿಕೆಯ ಪೈಪೋಟಿ

ಘಟಕ - ೧ ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ

ಸಣ್ಣ ಕಥೆ ಅದರ ಹೆಸರೇ ತಿಳಿಸುವಂತೆ ಗಾತ್ರದಲ್ಲಿ ಚಿಕ್ಕದು. ಆದರೆ ಪ್ರಭಾವದಲ್ಲಿ ಭಾವಗೀತೆಯಷ್ಟು ತೀವ್ರವಾದುದು. ಬಿಸಿಬಿಸಿಯಾದ ಯಾವುದೋ ಒಂದು ಘಟನೆಯನ್ನು ಅದು ಎತ್ತಿಕೊಂಡು ನೇರವಾಗಿ ಸ್ವಲ್ಪದರಲ್ಲಿ ಹೇಳಿ ಮುಗಿಸುತ್ತದೆ. ಕಥೆ ಇಲ್ಲಿ ಪಂದ್ಯದ ಕುದುರೆಯಂತೆ. ನೇರ ಗುರಿ ಮುಟ್ಟುವುದೇ ಅದರ ಉದ್ದೇಶ.

ಕನ್ನಡದ ಜಾಯಮಾನಕ್ಕೆ ಕಥೆಗಳು ಹೊಸದಲ್ಲ ಇದರ ಅಸ್ಥಿತ್ವವನ್ನು ಕವಿರಾಜಮಾರ್ಗಕಾರನೇ ಪ್ರಸ್ತಾಪಿಸಿದ್ದಾನೆ. ಆದರೂ ಅಧಿಕೃತವಾಗಿ ಕನ್ನಡದ ಮೊದಲ ಉಪಲಬ್ಧ ಗ್ರಂಥ ವಡ್ಡಾರಾಧನೆಯಲ್ಲಿ ಅನೇಕ ಕಥೆಗಳು ಉಪಕಥೆಗಳಾಗಿ ಸಣ್ಣ ಕಥೆಗಳಾಗಿ ಹರಿದಿರುವ ಪರಿಯನ್ನು ಗುರುತಿಸಬಹುದು.

ಭಾರತೀಯ ಕಥಾ ಪರಂಪರೆಯು ಆರಂಭದಲ್ಲಿ ಧಾರ್ಮಿಕ ನೆರಳಿನಲ್ಲಿ ಬೆಳೆಯುತ್ತಾ ಬಂದಿದೆ. ದುರ್ಗಸಿಂಹನ ಪಂಚತಂತ್ರ, ಗುಣಾಢ್ಯನ ಬೃಹತ್ ಕಥಾಕೋಶ ಸೋಮನಾಥ ಸೂರಿಯ ಕಥಾ ಸರಿತ್ಸಾಗರ, ಅಲ್ಲದೆ ಜಾನಪದ ಸಾಹಿತ್ಯದಲ್ಲಿ ಇದರ ಸುಳಿವನ್ನು ಗುರುತಿಸಬಹುದಾಗಿದೆ.

ಕನ್ನಡದಲ್ಲಿನ 'ಸಣ್ಣ ಕಥೆ' ಎಂಬ ಶಬ್ಧವನ್ನು ಇಂಗ್ಲೀಷ್‌ನ 'Short Story' ಎಂಬುದರ ನೇರ ಭಾಷಾಂತವಾಗಿದೆ.

ಜೀವನದ ವಾಸ್ತವವಾದ ವಾತ್ಸವದ ಹಾಗೆಯೇ ರಸವತ್ತಾದ ಚಿತ್ರಗಳನ್ನು ಕೊಡುವುದಷ್ಟೇ ನನ್ನ ಕೆಲಸ ಎಂಬುದು ಮಾಸ್ತಿಯವರ ಅಭಿಪ್ರಾಯವಾಗಿದೆ. ಇವರನ್ನು ಕನ್ನಡದ ಸಣ್ಣಕಥೆಗಳ ಜನಕ ಎಂದು ಬಿರುದು ನೀಡಲಾಗಿದೆ.

ಶಾಂತಿನಾಥ ದೇಸಾಯಿ ಯವರು ಹೇಳುವಂತೆ 'ಕಾವ್ಯ ಹೇಳಿ ಕೇಳಿ ಒಳಧ್ವನಿಯ ಹೊರ ಅಭಿವ್ಯಕ್ತಿ. ಸಣ್ಣ ಕಥೆ ಹೊರಜಗತ್ತಿನ ಅಭಿವ್ಯಕ್ತಿ.

ಹೊಸಗನ್ನಡದ ಸಾಹಿತ್ಯದ ಸಂದರ್ಭದಲ್ಲಿ ಸಣ್ಣ ಕಥೆಗಳು ವಿವಿಧ ಘಟ್ಟಗಳಲ್ಲಿ ಬೆಳೆದು ಬಂದಿರುವುದನ್ನು ಸಾಹಿತ್ಯಕ ಇತಿಹಾಸಕಾರರು ಗುರುತಿಸಿದ್ದಾರೆ. ನವೋದಯ ಪ್ರಗತಿಶೀಲ ನವ್ಯ ದಲಿತ-ಬಂಡಾಯ ಸ್ತ್ರೀವಾದಿ , ಸಂವೇದನಾತ್ಮಕ ಚಿಂತನೆ, ತಾತ್ವಿಕ ಪ್ರಣಾಳಿಕೆಯ ಹಂತದಲ್ಲಿ ಈ ಸಾಹಿತ್ಯವು ನಡೆದು ಬಂದಿರುವುದನ್ನು ಇವರು ಗುರುತಿಸುತ್ತಾರೆ.

1900 ರಲ್ಲಿ ಪಂಜೆಮಂಗೇಶರಾಯರ ನನ್ನ ಚಿಕ್ಕತಾಯಿ, ನನ್ನ ಚಿಕ್ಕ ತಂದೆ, ಎಂಬ ಕಥೆಗಳು ಸುಹಾಸಿನಿ ಪತ್ರಿಕೆಯಲ್ಲಿ ಪ್ರಕಟವಾಯಿತು.

ನವೋದಯ

ಈ ಕಾಲ ಘಟ್ಟದ ಪ್ರಮುಖರೆಂದರೆ ಪಂಜೆಮಂಗೇಶರಾಯರ, ಕೆರೂರು ವಾಸುದೇವಾಚಾರ್ಯ, ಎಂ ಎಸ್‌ ಕಾಮತ್‌ ದೇವುಡು ಮಾಸ್ತಿ, ಸಿ ಕೆ ವೆಂಕಟರಾಮಯ್ಯ, ಕುವೆಂಪು ಬೇಂದ್ರೆ, ನರಸಿಂಹಶಾಸ್ತ್ರಿ ಸೇಡಿಯಾಪು ಕೃಷ್ಟಭಟ್ಟ ಆನಂದ ಕಂದ ಆನಂದ ಎಂ ವಿ ಸೀತಾರಾಮಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಬಾಗಲೋಡಿ ದೇವರಾಯ, ಕೊಡಗಿನ ಗೌರಮ್ಮ ಮೊದಲಾದವರು ಪ್ರಮುಖರು

ಪ್ರಗತಿಶೀಲ

ಮುಖ್ಯವಾಗಿ ಹಿಂದಿ ಸಾಹಿತ್ಯದಿಂದ ಹಾಗೂ ಭಾರತೀಯ ಲೇಖಕರ ಇಂಗ್ಲಿಷ್ ಸಾಹಿತ್ಯದಿಂದ ಕನ್ನಡ ಪ್ರಗತಿಶೀಲ ಸಾಹಿತ್ಯಕ್ಕೆ ಸ್ಫೂರ್ತಿಯೊದಗಿತು. ಅ.ನ.ಕೃ. ಕನ್ನಡದಲ್ಲಿ ಈ ಚಳವಳಿಯ ಮುಂದಾಳಾದರು. ತ.ರಾ.ಸು., ಬಸವರಾಜ ಕಟ್ಟೀಮನಿ, ನಿರಂಜನ, ಚದುರಂಗ, ಅರ್ಚಕ ವೆಂಕಟೇಶ, ಕುಮಾರ ವೆಂಕಣ್ಣ, ಎಸ್. ಅನಂತನಾರಾಯಣ ಮುಂತಾದವರು ಈ ಪಂಥದ ಇತರ ಲೇಖಕರು.

ನವ್ಯ

೧೯೪೭ ರ ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು: ನವ್ಯ. ಈ ಪ್ರಕಾರದ ಪಿತಾಮಹರೆಂದರೆ ಗೋಪಾಲಕೃಷ್ಣ ಅಡಿಗರು. ನವ್ಯ ಕವಿಗಳು ನಿರಾಶಾವಾದಿ ಬುದ್ಧಿಜೀವಿಗಳಿಗಾಗಿ ಹಾಗೂ ನಿರಾಶಾವಾದಿ ಬುದ್ಧಿಜೀವಿಗಳಂತೆ ಕಾವ್ಯ ರಚಿಸಿದರು. ಭಾಷಾಪ್ರಯೋಗದ ಚಮತ್ಕಾರ ಹಾಗೂ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು.

ಶಾಂತಿನಾಥ ದೇಸಾಯಿ (ಮಂಜುಗಡ್ಡೆ, ಕ್ಷಿತಿಜ, ದಂಡೆ), ಯಶವಂತ ಚಿತ್ತಾಲ (ಸಂದರ್ಶನ, ಆಬೋಲಿನ, ಆಟ, ಕತೆಯಾದಳು ಹುಡುಗಿ), ಪಿ.ಲಂಕೇಶ್, (ನಾನಲ್ಲ, ಕೆರೆಯ ನೀರನು ಕೆರೆಗೆ ಚೆಲ್ಲಿ, ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ), ಕೆ.ಸದಾಶಿವ (ತುಣುಕುಗಳು, ನಲ್ಲಿಯಲ್ಲಿ ನೀರು ಬಂತು), ಟಿ.ಜಿ.ರಾಘವ (ಜ್ವಾಲೆ ಆರಿತು), ಕಾಮರೂಪಿ (ಒಂದು ತೊಲ ಪುನುಗು ಮತ್ತು ಇತರ ಕಥೆಗಳು), ಗಿರಡ್ಡಿ ಗೋವಿಂದರಾಜ (ಆ ಮುಖಾ ಈ ಮುಖಾ), ಪೂರ್ಣಚಂದ್ರ ತೇಜಸ್ವಿ (ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟ್‌ ಆಫೀಸು) ಮುಂತಾದವರು ಹಲವಾರು ಉತ್ತಮ ನವ್ಯಕಥೆಗಳನ್ನು ನೀಡಿದ್ದಾರೆ.

ದಲಿತ-ಬಂಡಾಯ

ಸ್ತ್ರೀವಾದಿ ,

ಸಂವೇದನಾತ್ಮಕ ಚಿಂತನೆ,

ತಾತ್ವಿಕ ಪ್ರಣಾಳಿಕೆ

ವಿಕಿಪೀಡಿಯದಲ್ಲಿನ ಕನ್ನಡದಲ್ಲಿ ಸಣ್ಣಕಥೆಯ ಮಾಹಿತಿ

ಲೇಖಕರ ಪರಿಚಯ

ಬಾಗಲೋಡಿ ದೇವರಾಯರ (ಜನನ; ೨೭-೨-೧೯೨೭,ಮರಣ ೨೫-೭-೧೯೮೫) ತಂದೆ ಬಾಗಲೋಡಿ ಕೃಷ್ಣರಾಯರು. ಬಾಗಲೋಡಿ ದೇವರಾಯರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕಿನ್ನಿಕಂಬಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಮುಗಿಸಿದ ಇವರು ನಂತರ ಮಂಗಳೂರಿಗೆ ಬಂದರು. ನಂತರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿ, ನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಬಿ.ಎ.( ಆನರ್ಸ್) ಮಾಡಿದರು. ಅಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೇ ಮೊದಲ ರ‍್ಯಾಂಕ್ ಪಡೆದರು.

ಆಗಲೇ ಕತೆಗಳನ್ನು ಬರೆಯಲಾರಂಭಿಸಿ ಲೇಖಕರೆನಿಸಿದ್ದರು. ನಂತರ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಐ.ಎ.ಎಸ್ ಮುಗಿಸಿ ಫಾರಿನ್ ಸರ್ವಿಸ್‌ಗೆ ಅಯ್ಕೆಯಾದರು. ಭಾರತದ ರಾಯಭಾರಿಯಾಗಿ ಇಟಲಿ, ನೇಪಾಳ, ನೈಜೀರಿಯಾ, ಫಿಲಿಫೈನ್ಸ್, ನ್ಯೂಜಿಲ್ಯಾಂಡ್, ಬಲ್ಗೇರಿಯಾ ಮೊದಲಾದ ದೇಶಗಳಲ್ಲಿ ಕಾರ್ಯ ನಿರ್ವಹಿಸಿದರು. ಇವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಮಕಾಲೀನರು. ನಿವೃತ್ತಿ ಹೊಂದಿ ಬೆಂಗಳೂರಿಗೆ ಬಂದ ಒಂದೇ ವರ್ಷದ ಒಳಗೆ ಅಂದರೆ ೧೯೮೫ರಲ್ಲಿ ತೀರಿಕೊಂಡರು. ಇವರ ಪ್ರಮುಖ ಕಥಾ ಸಂಕಲನಗಳು: 'ಹುಚ್ಚುಮನಸಿನ ಮುನಸೀಫ ಮತ್ತು ಇತರ ಕತೆಗಳು', 'ಆರಾಧನಾ', 'ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು' ಮುಂತಾದವುಗಳು.

'ಮಗ್ಗದ ಸಾಹೇಬ' ಎಂಬ ಗದ್ಯವನ್ನು ಇವರು ಬರೆದಿರುವ 'ಸಮಗ್ರ ಕತೆಗಳು' ಎಂಬ ಕಥಾಸಂಕಲನದ 185 ರಿಂದ 189ನೇ ವರೆಗಿನ ಪುಟಗಳಿಂದ ಆರಿಸಿಕೊಳ್ಳಲಾಗಿದೆ.

ಪಠ್ಯ ವಾಚನ ಪ್ರಕ್ರಿಯೆ

ಶಿಕ್ಷಕರ ವಾಚನ - ವಿದ್ಯಾರ್ಥಿ ಓದು - ಮೌನ ಓದು

ಪಾಠದ ಬೆಳವಣಿಗೆ

ಬಾಗಲೋಡಿಯವರ ಊರಿನಲ್ಲಿ ಹಿಂದು ಮುಸಲ್ಮಾನರು ಅನ್ಯೋನ್ಯತೆಯಿಂದ ಬಾಳುತ್ತಿದ್ದರು.ಪರಸ್ಪರ ಅವರು ತಮ್ಮ ತಮ್ಮ ಹಬ್ಬಗಳಲ್ಲಿ ಭಾಗವಹಿಸಿ ಧಾರ್ಮಿಕ ಸಹಿಷ್ಣತೆಯನ್ನು ಮೆರೆದರು. ಆ ಊರಿನಲ್ಲಿರುವ ರಹೀಮನಿಗೆ ತನ್ನ ಮಗನನ್ನು ಓದಿಸಿ ನೌಕರಿ ಕೊಡಿಸಬೇಕೆಂಬ ಮಹದಾಸೆ ಇತ್ತು.ಆದರೆ ಅವನು ನೌಕರಿ ಹಿಡಿಯದೆ ಮಗ್ಗದ ಬಗ್ಗೆ ಆಸಕ್ತಿ ಹೊಂದಿ ಅದರಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದನು. ಇದರಿಂದ ತಂದೆ ತನ್ನ ಅಂತ್ಯಕಾಲದಲ್ಲಿ ಆನಂದ ಪಟ್ಟನು

ಘಟಕ -೨ . ಮಗ್ಗದ ಸಾಹೇಬನ ಮನೆತನದ ಹಿನ್ನೆಲೆ

ಘಟಕ-೨ - ಪರಿಕಲ್ಪನಾ ನಕ್ಷೆ

ವಿವರಣೆ

ಮಗ್ಗ

ಈ ಭಾಗದಲ್ಲಿ ಮಗ್ಗದ ಸಾಹೇಬನ ಹಿನ್ನಲೆ, ಮಕ್ಕಳು ಮತ್ತು ಅವನ ಕುಟುಂಬದ ಸಾಮಾಜಿಕ ಹೊಂದಾಣಿಕೆಯನ್ನು ಪ್ರಸ್ತುತಪಡಿಸಲಾಗಿದೆ. ಅವನು ಮಗ್ಗವನ್ನು ತ್ಯಜಿಸಿದ್ದರೂ ಅವನನ್ನು ಮಗ್ಗದ ಸಾಹೇಬನೆಂದು ಕರೆಯುತ್ತಿದ್ದ ಕಾರಣ. ಅವನ ಕೌಟುಂಬಿಕ ಬದ್ದತೆಯನ್ನು ತಿಳಿಸಲಾಗಿದೆ.

ಈ ಭಾಗದಲ್ಲಿ ಸಂಸ್ಕೃತಿ ಸಂಪ್ರದಾಯ ಆಚರಣೆಗಳ ಬಗ್ಗೆ ಲೇಖಕರು ಚರ್ಚಿಸಿದ್ದಾರೆ. ಪರಸ್ಪರ ಧಾರ್ಮಿಕ ಸೌಹಾರ್ಧತೆಯನ್ನು ಪ್ರಸ್ತುತಪಡಿಸಿದ್ದಾರೆ.

ಚಟುವಟಿಕೆಗಳು

ಚಟುವಟಿಕೆ - ೧

ಮಗ್ಗದ ಸಾಹೇಬ ಪಾಠದ ಪೂರ್ಣ ಚಟುವಟಿಕೆಗಳ ಲಿಂಕ್

ಚಟುವಟಿಕೆ - ೨
  1. ಚಟುವಟಿಕೆ; ಚಿತ್ರವನ್ನು ನೋಡಿ ಹಬ್ಬಗಳನ್ನು ಗುರುತಿಸಿ ಬರೆಯಿರಿ

ಶಬ್ದಕೋಶ/ಪದ ವಿಶೇಷತೆ

  • ಈ ಪದಗಳಿಗೆ ಗೋಲ್ಡನ್‌ ಶಬ್ದಕೋಶ ಬಳಸಿ ಅರ್ಥ ತಿಳಿಯಿರಿ - - ವಾಡಿಕೆ - ಪ್ರತಿನಿಧಿ - ಸದಾಚಾರ - ಉರ್ಸ್‌
  • ಅನ್ಯಭಾಷೆಯದು ಎನಿಸುವ ೫ ಪದಗಳನ್ನು ಪಟ್ಟಿಮಾಡಿ ಅದರ ಅರ್ಥ ತಿಳಿಯಿರಿ

ವ್ಯಾಕರಣಾಂಶ

ಸಜಾತಿಯ ಒತ್ತಕ್ಷರ - ವಿಜಾತಿಯ ಒತ್ತಕ್ಷರ ಪಟ್ಟಿಮಾಡಿ

ಉದಾ: ಕಟ್ಟಿಸಿದ್ದರು - ಸದ್ಭಾವನೆ

ಶಿಕ್ಷಕರಿಗೆ ಟಿಪ್ಪಣಿ

(ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು)

ಆರು ಘಟಕಗಳಾಗಿ ಮಾಡಿಕೊಂಡಿದ್ದರೂ ಶಿಕ್ಷಕರು ಅವರವರ ತರಗತಿಯ ಅನುಕೂಲಕ್ಕೆ ತಕ್ಕಂತೆ ವಿಭಾಗಿಸಿಕೊಳ್ಳಬಹುದು. ಮೊದಲನೆಯ ಅವಧಿಯಲ್ಲಿ ಸಣ್ಣ ಕಥೆಯನ್ನು ಕೇಳಿಸಿ ಅದರ ಕಲ್ಪನೆಯನ್ನು ಮೂಡಿಸಿದ ಬಳಿಕ ಲೇಖಕ ದೇವರಾಯರ ಪರಿಚಯನ್ನು ಭಾವಚಿತ್ರ ತೋರಸುವುದರ ಮೂಲಕ ಮಾಡಬಹುದು. ಅಲ್ಲದೆ ಪಠ್ಯಾಧಾರಿತ ಪದಗಳ, ಅರ್ಥೈಸಿ ಓದಿ, ಆಶಯಗಳನ್ನು ತಿಳಿಸಬಹುದು. ಎರಡನೆ, ಮೂರನೆ, ನಾಲ್ಕನೆ ಅವಧಿಯಲ್ಲಿ ಪಾಠದ ವಿವರಣೆಯನ್ನು ವಿವಿಧ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಮಾಡಬಹುದು. ಐದನೆಯ ಅವಧಿಯಲ್ಲಿ ವ್ಯಾಕರಣಾಂಶಗಳ ಬಗ್ಗೆ ತಿಳಸಬಹುದು. ಆರನೆಯ ಅವಧಿಯಲ್ಲಿ ಪ್ರಶ್ನೋತ್ತರಗಳ ಬಗ್ಗೆ ಚರ್ಚೆ ಮಾಡಬಹುದು.
ಶಿಕ್ಷಕರಾದ ನಮಗೆ ಒಂದು ತರಗತಿಯಲ್ಲಿ ಪಾಠ ಮಾಡುವಾಗ ಆ ತರಗತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳನ್ನು ನಾವು ನೋಡುತ್ತೇವೆ. ತರಗತಿ ಹಂತದಲ್ಲಿ ನಾವು ಚಟುವಟಿಕೆಗಳನ್ನು ನೀಡುವಾಗ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಚಟುವಟಿಕೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ, ಏಕೆಂದರೆ ಎಲ್ಲಾ ಮಕ್ಕಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನೀಡಬೇಕಾಗುತ್ತದೆ. ಆ ಉದ್ದೇಶದಿಂದ ತರಗತಿಯಲ್ಲಿರುವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳನ್ನಾಗಿ ಮಾಡಿ ಅವರ ಕಲಿಕೆಗೆ ಅನುಗುಣವಾಗುವಂತೆ ಚಟುವಟಿಕೆಗಳನ್ನು ಮಾಡಲಾಗಿದೆ, ಶಿಕ್ಷಕರು ತಮ್ಮ ತರಗತಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು. ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

೧ನೇ ಅವಧಿ ಮೌಲ್ಯಮಾಪನ

ಕವಿ ಪರಿಚಯವನ್ನು ಪಾಠದ ಆರಂಭದಲ್ಲಿ ಅಥವ ತರಗತಿ ಆರಂಭವಾದ ಮಧ್ಯದಲ್ಲಿ ಕಲಿಸಬಹುದು. ಆದರೆ ಈ ಲೇಖಕರು ಕೆಲವು ಮಕ್ಕಳಿಗೆ ಅಪರಿಚಿತರಾಗಿರುವುದರಿಂದ ಸಣ್ಣ ಕಥೆ ಕೇಳಿಸಿ ನಂತರ ಇವರ ಪರಿಚಯವನ್ನು ಮಾಡಿಕೊಡಲಾಗಿದೆ. ಇದರಿಂದ ಮಕ್ಕಳಿಗೆ ಸಣ್ಣ ಕಥೆಗಳ ಮಹತ್ವ ತಿಳಿದುಕೊಳ್ಳುವುದರ ಜೊತೆ ಪ್ರಾಣಿ ಆಧಾರಿತ ಕಥೆಗಳಿಗೂ ದೈನಂದಿನ ಕಥೆಯಲ್ಲಿನ ಮನುಷ್ಯನನ್ನು ಕುರಿತು ಹೇಳುವ ಕಥೆಗೂ ವ್ಯತ್ಯಾಸ ತಿಳಿಯುತ್ತದೆ. ಕಥೆಯನ್ನು ಅರ್ಥಮಾಡಿಕೊಳ್ಳುವ ರೀತಿ ಮಕ್ಕಳಿಗೆ ತಿಳಿಯುತ್ತದೆ. ಆದರೂ ತರಗತಿಯ ನಿರ್ಣಯ ನಿರ್ವಹಿಸುವ ಶಿಕ್ಷಕರಿಗೆ ಬಿಟ್ಟಿರುತ್ತದೆ.

ಹೆಚ್ಚುವರಿ ಸಂಪನ್ಮೂಲ



ಘಟಕ - ೩. ಕರೀಮನ ಚಟುವಟಿಕೆಗಳು

ಚಿತ್ರ:Karimana Chatuvatike.mm

ಘಟಕ-೩ - ಪರಿಕಲ್ಪನಾ ನಕ್ಷೆ

ವಿವರಣೆ

ತಂದೆಯು ಮಗ್ಗದ ಸಹವಾಸ ಬೇಡವೆಂದರೂ ಕರೀಮ್‌ ಮಗ್ಗದ ಬಳಕೆಯನ್ನು ಕಲಿತು ಶಾಲೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡಿದನು. ಬಹುಮಾನ ಗಳಿಸಿದನು. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕದಲ್ಲಿ ಅಭಿನಯಿಸಲು ತಾಯಿಯಿಂದ ಒಡವೆ ತೆಗೆದುಕೊಂಡು ಹೋಗಿ ನಂತರ ಮನೆಬಿಟ್ಟು ಹೋಗುತ್ತಾನೆ. ಆದರೆ ಒಡವೆ ಏನಾಯಿತು? ಎಂದು ತಿಳಿಸಿರುವುದಿಲ್ಲ. ಇಲ್ಲಿ ಅವನ ಸಾಧನೆಯ ಜೀವನದ ಆರಂಭವನ್ನು ಪರಿಚಯಿಸಿಕೊಡಲಾಗಿದೆ. ಅಂದರೆ ಆರರಲ್ಲಿಯೇ ಅರವತ್ತಕ್ಕೆ ಏನಾಗುತ್ತಾನೆಂದು ತಿಳಿಸಲಾಗಿದೆ. ಕಥೆಯ ಆರಂಭವು ಕಥೆಗೆ ಉತ್ತಮ ಬುನಾದಿಯನ್ನು ಹಾಕಿಕೊಡುತ್ತದೆ.

ಚಟುವಟಿಕೆ

ಚಟುವಟಿಕೆ ೧
  1. ಚಟುವಟಿಕೆಯ ಹೆಸರು; ಈಜೀಪುರ ಶಾಲೆಯ ಮಕ್ಕಳ ಕೈ ಮಗ್ಗದ ಸ್ಥಳಕ್ಕೆ ಭೇಟಿ


ಚಟುವಟಿಕೆ ೨

ಶಬ್ದಕೋಶ/ಪದ ವಿಶೇಷತೆ

ಅದಲು ಬದಲಾದ ಪದಗಳನ್ನು ಗುರುತಿಸುವ, ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) ಪದ ಸಂಪತ್ತನ್ನು ವೃದ್ಧಿಸುವುದು ಚಟುವಟಿಕೆ

ವ್ಯಾಕರಣಾಂಶ

  1. ಕ್ರಿಯಾ ಪದದ ಪರಿಚಯ (ಚಿತ್ರ ಸಂಪನ್ಮೂಲ ಬಳಸಿ)

ಶಿಕ್ಷಕರಿಗೆ ಟಿಪ್ಪಣಿ /

ಮನೆ ವಾತಾವರಣ, ತಂದೆ ತಾಯಿ ಸಂಬಂಧ ಮತ್ತು ಬಾಂಧವ್ಯದ ಬಗ್ಗೆ ತಿಳಿಸಿಕೊಡಬೇಕು. ಕೆಲವು ಋಣಾತ್ಮಕ ಸನ್ನಿವೇಶಗಳನ್ನು ಅಂದರೆ, ಮನೆ ಬಿಡುವುದು, ಹಿರಿಯರ ಮಾತಿಗೆ ಅಗೌರವ ತೋರಿಸುವುದು,ಇತ್ಯಾದಿ ಅಂಶಗಳನ್ನು ಧನಾತ್ಮಕವಾಗಿಗಿ ತಿಳಿಸಿ ಕೊಡಿ.

೨ನೇ ಅವಧಿಯ ಮೌಲ್ಯಮಾಪನ

ಮಕ್ಕಳಿಗೆ ಕಳ್ಳ ಎಂಬ ಬಾವನೆ ಮತ್ತು ಮನೆ ಬಿಟ್ಟು ಹೋದ ಎಂಬ ಭಾಗವನ್ನು ತಿಳಿಸುವಾಗ ಜೋಪಾನವಾಗಿ ಚರ್ಚಿಸ ಬೇಕು. ಇದು ಕೆಲವು ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ತೆ ಇದೆ

ಹೆಚ್ಚುವರಿ ಸಂಪನ್ಮೂಲ

ಘಟಕ - ೪. ಮನೆ ಬಿಟ್ಟ ಕರೀಮ್‌ ವಿಖ್ಯಾತಿಯಾದದ್ದು

ಘಟಕ - ೪ - ಪರಿಕಲ್ಪನಾ ನಕ್ಷೆ

ಚಿತ್ರ:Mane bitta Kareem.mm

ವಿವರಣೆ

ಪದ್ಮ ಶ್ರೀ
ಪದ್ಮಭೂಷಣ
ಪದ್ಮವಿಭೂಷಣ

ಮಗ್ಗದ ಕೈಗಾರಿಕೆಯಲ್ಲಿ ಯಶಸ್ವಿಯಾದ ಕರೀಮ್‌ ಮನೆಗೆ ಹಿಂದಿರುಗಿ ತನ್ನ ತಂದೆ ಮತ್ತು ತಾಯಿಗೆ ಕಾಣಿಕೆಯನ್ನು ತಂದಿರುತ್ತಾನೆ. ಆದರೂ ತಂದೆ ಒಪ್ಪುವುದಿಲ್ಲ. ಶಂಕರಪ್ಪ ಶಿಕ್ಷಕರು ಬಂದು ತಿಳಿಸಿದರೂ ತಂದೆ ಒಪ್ಪದೆ ಕರೀಮನ ಮುಖವನ್ನು ನೋಡುವುದಿಲ್ಲ. ನನಗೆ ಇಬ್ಬರೇ ಮಕ್ಕಳೆಂಬ ನಿರ್ಧಾರಕ್ಕೆ ಬಂದಿರುತ್ತಾನೆ. ಕೊನೆಗೆ ಕರೀಮನಿಗೆ ರಾಷ್ಟ್ರಮಟ್ಟದ ಬಹುಮಾನ ಬಂದಿರುವುದನ್ನು ಪತ್ರಿಕೆಯಲ್ಲಿ ಗಮನಿಸಿ ಆನಂದದ ಕಣ್ಣೀರನ್ನು ಇಡುತ್ತಾನೆ. ಕರೀಮನ ಸಾಧನೆಯನ್ನು ಕಂಡು ಸಂತೋಷಪಡುತ್ತಾನೆ.

ಚಟುವಟಿಕೆಗಳು

ಚಟುವಟಿಕೆಗಳು ೧
  1. ಚಟುವಟಿಕೆಯ ಹೆಸರು; ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
ಚಟುವಟಿಕೆ ೨
  1. ಚಟುವಟಿಕೆಯ ಹೆಸರು; ಒಂದು ಚಿತ್ರವನ್ನು ನೋಡಿ ಕಥೆಯನ್ನು ಕಟ್ಟಿರಿ ಒಂದು ಚಿತ್ರವನ್ನು ನೋಡಿ ಕತೆ ರಚನೆ ಮಾಡಿ

ಶಬ್ದಕೋಶ/ಪದ ವಿಶೇಷತೆ

ಈ ಪಾಠದಲ್ಲಿ ಕಂಡು ಬಂದಿರುವ ಅನ್ಯ ದೇಶೀಯ ಪದಗಳನ್ನು ಪಟ್ಟಿಮಾಡಿ - ಅವು ಯಾವ ಭಾಷೆಯ ಪದಗಳೆಂದು ತಿಳಿಯಿರಿ

ಉದಾ: ಉರ್ಸ್‌ - ಹೆಡ್‌ ಮಾಸ್ಟರ್‌

ಅಭೀಷ್ಟ - ಆಚ್ಪಾದಿತ - ಆಧಿಪತ್ಯ - ಕಳೇಬರ - ಗೌಪ್ಯ - ಚಿಂದಿ - ಭಿಕಾರಿ - ವಿಲಾಯತಿ

ವ್ಯಾಕರಣಾಂಶ

  • ಅಲ್ಪ ಪ್ರಾಣ ಮತ್ತು ಮಹಾ ಪ್ರಾಣದ ಬಗ್ಗೆ ತಿಳಿಯಿರಿ
  • ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನ ಗಳ ಬಗ್ಗೆ ತಿಳಿಯಿರಿ

ಶಿಕ್ಷಕರಿಗೆ ಟಿಪ್ಪಣಿ

ಜೀವನದ ಗುರಿ ಮತ್ತು ಗುರು ಸರಿಯಾಗಿ ಸಿಕ್ಕರೆ ಯಶಸ್ಸು ಖಂಡಿತ ಎಂದು ತಿಳಿಸಬೇಕು. ಇಲ್ಲಿ ತಂದೆಯ ಮೊಂಡುತನ ಮಗನು ತಪ್ಪುದಾರಿ ಹಿಡಿದ ಎಂಬ ಮುನಿಸೇ ವಿನಹ ಅವನ ಮೇಲಿನ ದ್ವೇಷವಲ್ಲ. ತಾಯಿ ಹೃದಯ ಮತ್ತು ತಂದೆ ಹೃದಯ ನಿಜವಾಗಿ ಹೆತ್ತ ಕರುಳಿಗೆ ಮರುಗುತ್ತವೆ. ಎಂಬ ಅಂಶವನ್ನು ಮಕ್ಕಳಿಗೆ ತಿಳಿಸಿಕೊಡಬಹುದು.

ಘಟಕ-3ರ ಮೌಲ್ಯಮಾಪನ

ಪ್ರಸ್ತುತ ಪಾಠದಲ್ಲಿ ಗಾಂಧಿಜೀಯವರ ಮೂಲ ಶಿಕ್ಷಣವನ್ನು ಪ್ರತಿಬಿಂಬಿಸುವಂತಿದ್ದರೂ ಅನೇಕ ವಿಚಾರಗಳನ್ನು ಇದು ಒಳಗೊಂಡಿದೆ. ಮಕ್ಕಳು ತಮಗೆ ಇಷ್ಟವಾದ ಕ್ಷೇತ್ರದಲ್ಲಿ ವಿದ್ಯೆಯನ್ನು ಕಲಿತರೆ ಅದು ಅವರಿಗೆ ತೃಪ್ತಿಯನ್ನು ಮತ್ತು ಸಾಧನೆಯನ್ನು ಮಾಡಲು ದಾರಿಯನ್ನು ತೋರಿಸುತ್ತದೆ ಎಂಬುದು ಇದರ ಸಾರಾಂಶವಾಗಿದೆ. ಯಾವ ಕೆಲಸವನ್ನೇ ಮಾಡಿದರೂ ಆಸಕ್ತಿಯಿಂದ ಶ್ರದ್ದೆಯಿಂದ ಮಾಡಿದರೆ ಅದು ಪ್ರತಿಫಲವನ್ನು ನೀಡುತ್ತದೆ ಎಂಬುದು ಇಲ್ಲಿನ ತಿರುಳಾಗಿದೆ.

ಇಲ್ಲಿ ಧಾರ್ಮಿಕ ಸಮಾನತೆ ಮತ್ತು ಸಹಿಷ್ಣುತೆ, ಹಳ್ಳಿಯ ಬಡ ಕುಟುಂಬ ಮತ್ತು ಅವರ ಸಾಮಾಜಿಕ ಬದ್ದತೆ, ನಾಗರೀಕರಲ್ಲಿ (ಶಂಕರಪ್ಪ ಮೇಷ್ಟ್ರು) ಪರಸ್ಪರ ಹೊಂದಾಣಿಕೆ ಮೊದಲಾದನ್ನು ಗುರುತಿಸಬಹುದಾಗಿದೆ.

ಹೆಚ್ಚುವರಿ ಸಂಪನ್ಮೂಲ

ಪೂರ್ಣ ಪಾಠದ ಉಪಸಂಹಾರ

ಬಾಗಲೋಡಿಯವರ ಊರಿನಲ್ಲಿ ಹಿಂದು ಮುಸಲ್ಮಾನರು ಅನ್ಯೋನ್ಯತೆಯಿಂದ ಬಾಳುತ್ತಿದ್ದರು. ಪರಸ್ಪರ ಅವರು ತಮ್ಮ ತಮ್ಮ ಹಬ್ಬಗಳಲ್ಲಿ ಭಾಗವಹಿಸಿ ಧಾರ್ಮಿಕ ಸಹಿಷ್ಣತೆಯನ್ನು ಮೆರೆದರು. ಆ ಊರಿನಲ್ಲಿರುವ ರಹೀಮನಿಗೆ ತನ್ನ ಮಗ ಕರೀಮನನ್ನು ಓದಿಸಿ ನೌಕರಿ ಕೊಡಿಸಬೇಕೆಂಬ ಮಹದಾಸೆ ಇತ್ತು. ಆದರೆ ಅವನು ನೌಕರಿ ಹಿಡಿಯದೆ ಮಗ್ಗದ ಬಗ್ಗೆ ಆಸಕ್ತಿ ಹೊಂದಿ ಅದರಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದನು. ಇದರಿಂದ ತಂದೆ ತನ್ನ ಅಂತ್ಯಕಾಲದಲ್ಲಿ ಆನಂದ ಪಟ್ಟನು.

ಪೂರ್ಣ ಪಾಠದ ಮೌಲ್ಯಮಾಪನ

ಇಲ್ಲಿ ಧಾರ್ಮಿಕ ಸಹಿಷ್ಣುವನ್ನು ಸಾರುವ ಕಥೆ ಇದೆ. ಕಥೆಯ ಓಟ ವೇಗವಾಗಿದ್ದರೂ ಸಣ್ಣ ಕಥೆಯಾದ್ದರಿಂದ ಬೇಗ ವಿಷಯವನ್ನು ದಾಟಿಸಿಬಿಡಬಹುದು. ಆದರೂ ಅವನು ಸರವನ್ನು ಏನು ಮಾಡಿದ ಎಂದು ಅಥವ ಅವನು ಕಳ್ಳ ಅಲ್ಲೆ ಎಂದು ಮಕ್ಕಳು ಕೇಳಬಹುದು. ಶಿಕ್ಷಕರು ಆಲೋಚಿಸಿ ಧನಾತ್ಮಕವಾಗಿ ಉತ್ತರಿಸಬೇಕು. ಇದರಲ್ಲಿ ಲೇಖಕರು ಅನೇಕ ಆಶಯವನ್ನು ತಿಳಿಸಿದ್ದಾರೆ. ಪಕೃತ ಗದ್ಯಭಾಗವು ಧಾರ್ಮಿಕ ಸಹಿಷ್ಣತೆ, ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶಗಳು, ಶಾಲೆಗಳಲ್ಲಿ ಔದ್ಯೋಗಿಕ ಶಿಕ್ಷಣ, ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಮೊದಲಾದ ಅಂಶಗಳನ್ನು ಒಳಗೊಂಡಿದೆ. ಈ ಎಲ್ಲಾ ಅಂಶಗಳು ಪ್ರೌಢಾವಸ್ಥೆಗೆ ಬಂದ ಮಕ್ಕಳಿಗೆ ಹೊಸ ಹೊಸ ಕಲ್ಪನೆಯನ್ನು ಮೂಡಿಸುತ್ತದೆ.

ಮಕ್ಕಳ ಚಟುವಟಿಕೆ

೧. ನಿಮ್ಮ ಕುಟುಂಬದಲ್ಲಿ ಪೂರ್ವಜರು ನಿರ್ವಹಿಸುತ್ತಿದ್ದ ವೃತ್ತಿ ಮತ್ತು ಅದರ ಮಹತ್ವವನ್ನು ಕುರಿತು ಮಾಹಿತಿ ಸಂಗ್ರಹಿಸಿ

೨. ಸ್ವಂತ ಉದ್ಯೋಗ ಮತ್ತು ಕಚೇರಿಯಲ್ಲಿ ಮಾಸಿಕ ಸಂಬಳಕ್ಕೆ ಕೆಲಸಮಾಡುವುದು ಈ ಎರಡರಲ್ಲಿ ಯಾವುದು ಉತ್ತಮವೆನಿಸುತ್ತದೆ? ಏಕೆ

೩. ನಿಮ್ಮ ಸ್ವಂತ ಕೌಶಲವನ್ನು ಬಳಸಿ ಯಾವುದರೊಂದು ವಸ್ತುವನ್ನು ಸೃಷ್ಟಿಸಿ. ಉದಾ: ಮಡಕೆ, ಬಟ್ಟೆ. ಕಸೂತಿ, ಇತ್ಯಾದಿ