ರಾಮಧಾನ್ಯ ಚರಿತೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಪ್ರತಿಯೊಂದು ಜೀವಿಯ ಬದುಕಿಗೆ ಅತ್ಯಗತ್ಯವಾಗಿರುವ ವಸ್ತುಗಳಲ್ಲಿ ಆಹಾರವೂ ಒಂದು. ಆಹಾರವಿಲ್ಲದೇ ಯಾವುದೇ ಜೀವಿಯು ಬದುಕಿರಲಾರದು. ಇಂಥಹ ಆಹಾರ ಧಾನ್ಯಗಳ ಮಹತ್ವವನ್ನು ತಿಳಿಸುವ ಮೂಲಕ ನಮ್ಮ ಸಾಮಾಜಿಕ ಸಾಂಸ್ಕೃತಿಕ ಪರಂಪರೆಯನ್ನು ಇಲ್ಲಿ ಮಾರ್ಮಿಕವಾಗಿ ಬಿಂಬಿತವಾಗಿದೆ. ರಾಮಧಾನ್ಯ ಚರಿತೆ ನೆರೆದೆಲಗ (ರಾಗಿ) ವ್ರೀಹಿ (ಭತ್ತ) ಯರ ನಡುವಿನ ಜಗಳದ ಕಥೆ ಹಾಗು ಪರಿಹಾರ ಗೊಂಡ ರೀತಿಯ ನಿರೂಪಣೆ ಇದರ ಕಥಾ ವಸ್ತು. ಇದು ಪುರಾಣಗಳಲ್ಲಿ ಮತ್ತು ಸಾಮಾಜಿಕ ವಸ್ತುಗಳ ರೂಪಕ ವಿಧಾನದಲ್ಲಿ ಸಹಜವಾಗಿ ಮಿಳಿತಗೊಂಡಿದೆ. ಇಲ್ಲಿಯ ಪಾತ್ರಗಳು ಮಾನವ-ಪ್ರಾಣಿಗಳಲ್ಲ ಇಲ್ಲಿ ಧಾನ್ಯ ಜೀವ ಬೀಜಗಳಾಗಿದೆ.

ಪ್ರಕೃತ "ರಾಮಧಾನ್ಯ ಚರಿತ್ರೆ"ಯು ಕನಕದಾಸರಿಂದ ರಚಿತವಾದ ಒಂದು ಪುಟ್ಟ ವಿಡಂಬನ ಕಾವ್ಯ. ಇದೊಂದು ಕಲ್ಪಿತ ಕಥೆ. ರಾಗಿ(ನರೆದಲೆಗ) ಹಾಗೂ ಭತ್ತ(ವ್ರಿಹಿಗ)- ಇವರಿಬ್ಬರ ನಡುವೆ ಯಾರು ಹೆಚ್ಚು ಯಾರು ಕಡಿಮೆ ಎಂಬ ಜಗಳವು ಉದ್ಭವಿಸಲಾಗಿ, ರಾಮನು ಇವರಿಬ್ಬರ ವ್ಯಾಜ್ಯವನ್ನು ಪರಿಹರಿಸಿ ನರೆದಲೆಗವೇ ಉತ್ತಮವೆಂದು ಸಾರಿ ತೀರ್ಪನ್ನು ನೀಡುವುದು ಇಲ್ಲಿನ ಕಥಾಹಂದರ. ಆ ಕಾಲಕ್ಕೆ ಇದ್ದಿರಬಹುದಾದ ವರ್ಗ- ವರ್ಣ ತಾರತಮ್ಯಗಳ ಪ್ರತೀಕವಾಗಿ - ಉಚ್ಛ ವರ್ಗಗಳ ಪ್ರತಿನಿಧಿಯಾಗಿ ನೆಲ್ಲೂ, ಕೆಳವರ್ಗಗಳ ಪ್ರತಿನಿಧಿಯಾಗಿ ರಾಗಿಯೂ ಈ ಕಾವ್ಯದಲ್ಲಿ ಕಂಡುಬರುತ್ತವೆ. ಹೀಗಾಗಿ ’ರಾಮಧಾನ್ಯ ಚರಿತ್ರೆ’ಯನ್ನು ರೂಪಕ ಕಾವ್ಯವೆಂದೂ ಹೇಳಬಹುದು. ರಾವಣನನ್ನು ಸಂಹರಿಸಿದ ನಂತರ ರಾಮನು ಸೀತೆ, ಲಕ್ಷ್ಮಣ, ವಿಭೀಷಣ, ಹನುಮಂತ ಮುಂತಾದವರೊಂದಿಗೆ ಅಯೋಧ್ಯೆಗೆ ಮರಳುತ್ತಿರುವಾಗ, ಮಾರ್ಗಮಧ್ಯದಲ್ಲಿ ಮುನಿಗಳೆಲ್ಲರೂ ಇವರಿಗೆ ವಿವಿಧ ಧಾನ್ಯಗಳಿಂದ ಸಿದ್ಧಪಡಿಸಿದ ಭಕ್ಷ್ಯ- ಭೋಜನಗಳ ಔತಣವೊಂದನ್ನು ಏರ್ಪಡಿಸಿರುತ್ತಾರೆ. ಆಗ ಅವರಲ್ಲಿ ಸಹಜವಾಗಿ ಧಾನ್ಯಗಳಲ್ಲಿ ಯಾವುದು ಶ್ರೇಷ್ಠ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಈ ಪ್ರಶ್ನೆಯೇ ’ರಾಮಧಾನ್ಯ ಚರಿತ್ರೆ’ಯ ಕಥಾಮೂಲ. ಇಲ್ಲಿಂದಲೇ ಭತ್ತ ಹಾಗೂ ರಾಗಿಯ ನಡುವೆ ಜಗಳವೇರ್ಪಡುವುದು. ಅವರಿಬ್ಬರ ನಡುವಿನ ಜಗಳವನ್ನು ನಿವಾರಿಸಿ ನ್ಯಾಯವನ್ನು ಹೇಳಲೆಂದು ರಾಮನು ಅವರಿಬ್ಬರನ್ನೂ ಆರು ತಿಂಗಳುಗಳ ಕಾಲ ಬಂಧನದಲ್ಲಿರಿಸುವಂತೆ ಹೇಳುತ್ತಾನೆ. ಆರು ತಿಂಗಳ ನಂತರ ಇವರಿಬ್ಬರನ್ನೂ ಸಭೆಗೆ ಕರೆಸಲಾಗಿ, ಆ ವೇಳೆಗೆ ಭತ್ತವು ಸೊರಗಿ ಟೊಂಕ ಮುರಿದು ಬಿದ್ದರೆ, ರಾಗಿಯು ಯಾವ ಕ್ಲೇಶಕ್ಕೂ ಒಳಗಾಗದೆ ಗಟ್ಟಿಯಾಗಿ ನಿಲ್ಲುತ್ತದೆ. ಕೊನೆಗೆ, ಆರು ತಿಂಗಳುಗಳ ನಂತರವೂ ಸ್ವಲ್ಪವೂ ಕಾಂತಿಗುಂದದ ರಾಗಿಗೇ ರಾಮನ ಸಭೆಯಲ್ಲಿ ಶ್ರೇಷ್ಠತೆಯ ಪಟ್ಟ ದೊರೆಯುತ್ತದೆ. ಇಡೀ ಸಭೆಯು ರಾಗಿಯನ್ನು ಮೆಚ್ಚಿ ಹಾರೈಸುತ್ತದೆ. ಇದು ಈ ಸಾಂಗತ್ಯ ಕಾವ್ಯದ ಸಾರಾಂಶದ ತಿರುಳಾಗಿದೆ.

ಕಲಿಕೋದ್ದೇಶಗಳು

ಪದ್ಯದ ಉದ್ದೇಶ

  1. ವಚನ ಸಾಹಿತ್ಯವನ್ನು ಅರ್ಥೈಸುವುದು
  2. ವಚನ ಸಾಹಿತ್ಯ ಪರಿಚಯದ ಮೂಲಕ ಜೀವನ ಸತ್ಯದ ಅರ್ಥೈಸುವುದು
  3. ಮಾನವನ ನೈಜ ಜೀವನವನ್ನು ಪರಿಚಯಿಸುವುದು

ಭಾಷಾ ಕಲಿಕಾ ಗುರಿಗಳು

  1. ಚಿತ್ರ ಸಂಪನ್ಮೂಲ ಬಳಸಿ (ಪ್ರಸ್ತುತಿ) ವ್ಯಕ್ತಿ ಪರಿಚಯ ಮತ್ತು ಸಂವಹನ ಮಾಡುವುದು
  2. ಇಂಡಿಕ್‌ ಅನಾಗ್ರಾಮ್ ಅನ್ವಯಕದ ಜೊತೆ ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು.
  3. ಡಿಜಿಡಲ್ ಶಬ್ಧಕೋಶ ಬಳಸಿ ಕಠಿಣ ಪದಕ್ಕೆ ಅರ್ಥ ಹುಡುಕುವುದು
  4. ಧ್ವನಿ (ವಚನ) ಕೇಳುವುದರ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆ
  5. ಪುಸ್ತಕವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
  6. ವಾಕ್ಯ ರಚನೆಯನ್ನು ಶ್ರೀಮಂತಗೊಳಿಸಲು, ಪದ ಸಂಪತ್ತನ್ನು ಹೆಚ್ಚಿಸುವುದು

ಕವಿ ಪರಿಚಯ

ಕನಕದಾಸನ ಮೊದಲ ಹೆಸರು ತಿಮ್ಮಪ್ಪನೆಂದೂ [ಮೂಲ ಹೆಸರು -ತಿಮ್ಮಪ್ಪನಾಯಕ - 1508-1606], ಧಾರವಾಡ ಜಿಲ್ಲೆಯ ಬಾಡ ಗ್ರಾಮ ಆತನ ಹುಟ್ಟೂರೆಂದು ತಿಳಿದು ಬರುತ್ತದೆ. ದಂಡನಾಯಕ ಅಥವಾ ಪಾಳೆಗಾರನೋ ಆಗಿದ್ದ ಕುರುಬಜಾತಿಯ ಬೀರಪ್ಪ ಹಾಗೂ ಆತನ ಮಡದಿ ಬುಚ್ಚಮ್ಮ ತಿರುಪತಿ ತಿಮ್ಮಪ್ಪನಿಗೆ ಹರಿಕೆ ಹೊತ್ತು ಹಡೆದದ್ದರಿಂದ ಆತನಿಗೆ ತಮ್ಮಪ್ಪ ಎಂಬ ಹೆಸರನ್ನು ಇಡಲಾಗಿತ್ತು ಎಂದು ಹೇಳುತ್ತಾರೆ. ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿಯೇ ಬೆಳೆದು, ಶಸ್ತ್ರಾಸ್ತ್ರಗಳ ವಿದ್ಯೆ ಕಲಿತು ತಂದೆಯಂತೆ ಪಾಳೆಯಗಾರನಾದ. ಮೊನೆಗಾರ ಧನಿಯಾಗಿದ್ದ ತಿಮ್ಮಪ್ಪ ಅಸಾಮಾನ್ಯ ಶೂರನಾಗಿದ್ದನೆಂದೂ, ದೊರೆಯಾಗಿದ್ದನೆಂದೂ ತಿಳಿದುಬರುತ್ತದೆ. ಒಂದು ಸಲ ಭೂ ಶೋಧನೆಯಲ್ಲಿದ್ದಾಗ ಚಿನ್ನದ ಕೊಪ್ಪರಿಗೆ ದೊರೆತದ್ದರಿಂದ ಆತನಿಗೆ ಕನಕನೆಂಬ ಹೆಸರು ರೂಢಿಗೆ ಬಂತೆಂದು ಪ್ರತೀತಿ. ದೈವಕೃಪೆಯಿಂದ ದೊರೆತ ಐಶ್ವರ್ಯದಿಂದ ಕಾಗಿನೆಲೆಯಲ್ಲಿ ದೇವಾಲಯವನ್ನು ಕಟ್ಟಿಸಿ, ಜನ್ಮಸ್ಥಳವಾದ ಬಾಡದಲ್ಲಿದ್ದ ಆದಿಕೇಶವಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಉತ್ಸವಗಳು ನಡೆಯುವಂತೆ ಮಾಡಿದ. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.

ಕೇಶವನ ಆರಾಧಕನಾಗಿ, ಧರ್ಮ, ಸಮಾಜ, ಸಂಸ್ಕೃತಿಯ ಹಿತಚಿಂತಕನಾಗಿ ಕಾಣಿಸಿಕೊಂಡ ಕನಕದಾಸ ನಡುಗನ್ನಡ ಕಾಲದ ಮಹತ್ವದ ಕನ್ನಡ ಕವಿಗಳಲ್ಲಿ ಒಬ್ಬ. ತನ್ನ ಅಪಾರವಾದ ಲೋಕಾನುಭವ, ಅಸಾಧಾರಣವಾದ ಪ್ರತಿಭೆ, ಸತ್ವಶೀಲವಾದ ವ್ಯಕ್ತಿತ್ವದಿಂದ - ಅದುವರೆಗೂ ಕೇವಲ ಕೀರ್ತನೆಗಳಿಗೆ ಮಾತ್ರ ಸೀಮಿತವಾಗಿದ್ದ ಹರಿದಾಸರ ಕ್ರಿಯಾಶೀಲತೆಯ ಹರವನ್ನು ಹೆಚ್ಚಿಸಿ ಕನ್ನಡ ಕಾವ್ಯ ಪ್ರಪಂಚದಲ್ಲಿ ದಾಸಸಾಹಿತ್ಯಕ್ಕೆ ಘನತೆಯನ್ನು ತಂದು ಕೊಟ್ಟದ್ದು ಕನಕದಾಸನ ಹಿರಿಮೆ. ಉಳಿದೆಲ್ಲ ದಾಸರು ಕೀರ್ತನೆಗಳ ರಚನೆಯಲ್ಲಿಯೇ ತೊಡಗಿದ್ದ ಕಾಲದಲ್ಲಿ ಕನಕದಾಸ ಉಳಿದವರ ಕೀರ್ತನೆಗಳಿಗಿಂತಲೂ ಸತ್ವಯುತವಾದ ಕೀರ್ತನೆಗಳನ್ನು ರಚಿಸಿಯೂ ಜೊತೆಗೆ

  1. ಮೋಹನತರಂಗಿಣಿ
  2. ರಾಮಧಾನ್ಯ ಚರಿತೆ
  3. ನಳಚರಿತೆ
  4. ಹರಿಭಕ್ತಿಸಾರ ಮತ್ತು
  5. ನೃಸಿಂಹ ಸ್ತವ ಎಂಬ ಛಂದೋವೈವಿಧ್ಯತೆ ಹಾಗೂ ವಸ್ತುವೈವಿಧ್ಯತೆ - ಯಿಂದ ಕೂಡಿದ ಕಾವ್ಯಗಳನ್ನು ರಚಿಸಿ ಕನ್ನಡ ಕವಿಗಳಲ್ಲಿ ಮೊದಲಿಗ ದಾಸರಾಗಿದ್ದಾರೆ. ಸಾಂಗತ್ಯದ ವೈಭವವನ್ನು ಹೆಚ್ಚಿಸಿದ ಕೆಲವೇ ಕವಿಗಳಲ್ಲಿ ಕನಕ ಸಹ ಒಬ್ಬನಾಗಿದ್ದಾನೆ. ಮೋಹನತರಂಗಿಣಿ ಎಂಬ ಬೃಹತ್ಕಾವ್ಯ ಮತ್ತು ನೃಸಿಂಹಸ್ತವ ಎಂಬ ಲಘುಕಾವ್ಯ ಸಾಂಗತ್ಯದಲ್ಲಿ ರಚಿತವಾಗಿವೆ. ಆತ “ ಕವಿಗಳಲ್ಲಿ ದಾಸ, ದಾಸರಲ್ಲಿ ಕವಿ “ ಎಂಬ ಅಭಿದಾನಕ್ಕೆ ಪಾತ್ರನಾಗಿದ್ದಾನೆ.

ಸಾಧನೆ

ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ.

ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡತೊಡಗಿದರಂತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಆಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಿ ಅದನ್ನು 'ಕನಕನ ಕಿಂಡಿ' ಎಂದು ಕರೆಯಲಾಗಿದೆ).

ಶಿಕ್ಷಕರಿಗೆ ಟಿಪ್ಪಣಿ

ಮೋಹನತರಂಗಿಣಿ

ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2700 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.

ಸೋಮಸೂರಿಯ ವೀಥಿಯ ಇಕ್ಕೆಗಳಲಿ
ಹೇಮ ನಿರ್ಮಿತ ಸೌಧದೋಳಿ
ರಮಣೀಯತೆವೆತ್ತ ಕಳಸದಂಗಡಿಯಿರ್ದುಂ
ವಾ ಮಹಾ ದ್ವಾರಕಾಪುರದೇ
ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕೊಡುವರು

ನಳಚರಿತ್ರೆ

ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ. ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕುರಿತು ನಳ:

ಲಲಿತ ಹೇಮದ ತೂಗಮಂಚದ
ಹೊಳೆವ ಮೇಲ್ವಾಸಿನಲಿ ಮಲಗು
ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨)
ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.

ರಾಮಧಾನ್ಯಚರಿತೆ

ರಾಮಧಾನ್ಯಚರಿತ್ರೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ.

ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ?
ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ
ಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು..

ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು.

ಹರಿಭಕ್ತಿಸಾರ

ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಕೀರ್ತನೆಗಳು

ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ.

ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.

'ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಂಕಿಸಿ ಕೇಳುವ ಹಾಗಾದರು.

ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.

ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ .
ತೀರ್ಥವನು ಪಿಡಿದವರು ತಿರುನಾಮಧಾರಿಗಳೇ
ಜನ್ಮ ಸಾರ್ಥಕವಿರದವರು ಭಾಗವತರಹುದೇ
ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ .

ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೂ
ಬಯಲು ಆಲಯದೊಳಗೊ, ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ

ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ

ಒಡಲು ಹಸಿಯಲು ಅನ್ನವಿಲ್ಲದಲೇ ಇರಬಹುದು

ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು

ಮಡದಿ ಮಕ್ಕಳನೆಲ್ಲಾ ತೊಲಗಿಸಿ ಬಿಡಬಹುದು

ಕಡಲೊಡೆಯ ನಿನ್ನ ಅರೆಘಳಿಗೆ ಬಿಡಲಾಗದು /೧/

ತಾಯಿ ತಂದೆಯ ಬಿಟ್ಟು ತಪವ ಮಾಡಲೂ ಬಹುದು

ದಾಯಾದಿ ಬಂಧುಗಳ ಬಿಡಲೂ ಬಹುದು

ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು

ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು /೨/

ಪ್ರಾಣವ ಪರರು ಬೇಡಿದರೆತ್ತಿ ಕೊಡಬಹುದು

ಮಾನದಲಿ ಮನವ ತಗ್ಗಿಸಬಹುದು

ಜಾಣ ನಾಯಕನಾದ ಆದಿಕೇಶವರಾಯ

ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು /೩/

ಹೆಚ್ಚುವರಿ ಸಂಪನ್ಮೂಲ

ಸಾರಾಂಶ

ಪದ್ಯಭಾಗದ ಪದಶಃ ಅರ್ಥ ಮತ್ತು ಭಾವಾರ್ಥ (ಕನ್ನಡ ದೀವಿಗೆ ಸಹಾಯವನ್ನು ಪಡೆಯಲಾಗಿದೆ)

ಕೆಲರು ಗೋದಿಯ ಸಾಮೆಯನು ಕೆಲ

ಕೆಲರು ನವಣೆಯ ಕಂಬು ಜೋಳವ

ಕೆಲವು ಹಾರಕವೆಂದು ಕೆಲವರು ನೆಲ್ಲನತಿಶಯವ

ಕೆಲರು ನರೆದಲೆಗನನು ಪತಿಕರಿ

ಸಲದ ನೋಡಿದ ನೃಪತಿಯದರೊಳು

ಹಲವು ಮತವೇಕೊಂದನೇ ಪೇಳೆನಲು ಗೌತಮನು.    || ೧ ||

ಪದವಿಭಾಗ ಮತ್ತು ಪದಶಃ ಅರ್ಥ:-  ಕೆಲರು (ಕೆಲವರು) ಗೋದಿಯ(ಗೋಧಿಯನ್ನು) ಸಾಮೆಯನು (ಸಾಮೆ ಅಕ್ಕಿ) ಕೆಲ ಕೆಲರು ನವಣೆಯ (ನವಣೆ ಅಕ್ಕಿ) ಕಂಬು (ಸಜ್ಜೆ) ಜೋಳವ ಕೆಲವು ಹಾರಕ (ಹಾರಕ ಅಕ್ಕಿ) + ಎಂದು ಕೆಲವರು ನೆಲ್ಲನು(ಭತ್ತ/ಅಕ್ಕಿ)+ ಅತಿಶಯವ (ಶ್ರೇಷ್ಠ/ಉತ್ಕೃಷ್ಠ) ಕೆಲವರು ನರೆದಲಗನನು(ರಾಗಿಯನ್ನು) ಪತಿಕರಿಸಲು (ಅಂಗೀಕರಿಸಲು/ಒಪ್ಪಲು) + ಅದ ನೋಡಿದ ನೃಪತಿಯು(ರಾಜನು) + ಅದರೊಳು (ಅದರಲ್ಲಿ) ಹಲವು ಮತವು + ಏಕೆ + ಒಂದನೇ ಪೇಳು(ಹೇಳು) + ಎನಲು(ಎನ್ನಲು) ಗೌತಮನು.

ಭಾವಾರ್ಥ:- ಕೆಲವರು ಗೋದಿಯನ್ನು, ಕೆಲವರು ಸಾಮೆಯನ್ನು, ಕೆಲವರು ನವಣೆಯನ್ನು, ಕೆಲವರು ಕಂಬು, ಜೋಳವನ್ನು ಉತ್ತಮವೆಂದು ಹೇಳಿದರೆ ಕೆಲವರು ಭತ್ತವನ್ನು ಶ್ರೇಷ್ಠವೆಂದರೆ ಕೆಲವರು ರಾಗಿಯನ್ನು ಶ್ರೇಷ್ಠವೆಂದು ಹೇಳುವುದನ್ನು ನೋಡಿದ ಮಹಾರಾಜನು(ರಾಮನು) “ಅವುಗಳ ಶ್ರೇಷ್ಠತೆಯ ಬಗ್ಗೆ ಹಲವು ಅಭಿಪ್ರಾಯಗಳೇಕೆ? ಯಾವುದಾದರು ಒಂದನ್ನು ಹೇಳಿ” ಎಂದಾಗ ಗೌತಮನು ಹೀಗೆ ಹೇಳುತ್ತಾನೆ.....ಕ್ಕಿ

ದಾಶರಥಿ ಚಿತ್ತೈಸು ನಮ್ಮಯ

ದೇಶಕತಿಶಯ ನರೆದಲೆಗನೇ

ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು

ಲೇಸನಾಡಿದೆ ಮುನಿಪ ಗೌತಮ

ದೋಷರಹಿತನು ಪಕ್ಷಪಾತವ

ನೀಸು ಪರಿಯಲಿ ಮಾಡುವರೆ ಶಿವಯೆಂದನಾವ್ರಿಹಿಗ     || ೨ ||

ಪದವಿಭಾಗ ಮತ್ತು ಪದಶಃ ಅರ್ಥ:-  ದಾಶರಥಿ ಚಿತ್ತೈಸು(ಮನಸ್ಸುಮಾಡು) ನಮ್ಮಯ ದೇಶಕೆ + ಅತಿಶಯ(ಶ್ರೇಷ್ಠ) ನರೆದಲಗನೇ(ರಾಗಿಯೇ) ವಾಸಿ (ಶಕ್ತಿ/ಸತ್ವ) + ಉಳ್ಳವನು + ಈತ ಮಿಕ್ಕಿನ (ಉಳಿದ) ಧಾನ್ಯವು + ಏಕೆ + ಎನಲು ಲೇಸನು(ಒಳ್ಳೆಯದನ್ನು) + ಆಡಿದೆ ಮುನಿಪ ಗೌತಮ ದೋಷರಹಿತನು ಪಕ್ಷಪಾತವನು + ಈಸು(ಇಷ್ಟ) ಪರಿಯಲಿ(ರೀತಿಯಲ್ಲಿ) ಮಾಡುವರೆ ಶಿವ + ಎಂದನು ಆ ವ್ರೀಹಿಗ(ಭತ್ತ).

ಭಾವಾರ್ಥ:- “ದಶರಥ ಪುತ್ರನಾದ ಶ್ರೀರಾಮನೇ ಕೇಳು. ನಮ್ಮ ದೇಶದಲ್ಲಿ ಶ್ರೇಷ್ಠವೆಂದರೆ ರಾಗಿಯೇ ಸರಿ. ಇವನು ಶಕ್ತಿ(ಸತ್ವ) ಹೊಂದಿರುವವನು. ಉಳಿದ ಧಾನ್ಯಗಳೇಕೆ?” ಎಂಬ ಮಾತನ್ನು ಕೇಳಿದ ವ್ರಿಹಿಗ(ಭತ್ತ) “ಇದೇನು ಗೌತಮ ಮುನಿಯೇ ನೀನು ಒಳ್ಳೆಯ ಮಾತನಾಡಿದೆಯಲ್ಲ ! ದೋಷರಹಿತನಾದ ನೀನು ಈ ರೀತಿಯಲ್ಲಿ ಪಕ್ಷಪಾತ ಮಾಡಬಹುದೇ? ಶಿವ ಶಿವಾ! ಎಂದನು.”

ಎಲ್ಲ ಧರ್ಮದ ಸಾರವನು ನೀವ್

ಬಲ್ಲಿರರಿಯಿರೆ ಎಲ್ಲರನು ನೀ

ವಿಲ್ಲಿ ನುಡಿವ ಉಪೇಕ್ಷೆಯುಂಟೇ ಸಾಕದಂತಿರಲಿ

ನೆಲ್ಲು ನಾನಿರೆ ಗೋದಿ ಮೊದಲಾ

ದೆಲ್ಲ ಧಾನ್ಯಗಳಿರಲು ಇದರಲಿ

ಬಲ್ಲಿದನು ನರೆದಲೆಗನೆಂಬುದಿದಾವ ಮತವೆಂದ          || ೩ ||

ಪದವಿಭಾಗ ಮತ್ತು ಪದಶಃ ಅರ್ಥ:- ಎಲ್ಲ ಧರ್ಮದ ಸಾರವನು ನೀವ್ ಬಲ್ಲಿರಿ ಅರಿಯಿರೆ(ತಿಳಿದಿರುವಿರೆ) ಎಲ್ಲರನು ನೀವು + ಇಲ್ಲಿ ನುಡಿವ ಉಪೇಕ್ಷೆ(ಕಡೆಗಣನೆ) + ಉಂಟೇ ಸಾಕು + ಅದಂತಿರಲಿ (ಅದು ಹಾಗಿರಲಿ) ನೆಲ್ಲು (ಭತ್ತ) ನಾನು + ಇರೆ ಗೋದಿ ಮೊದಲಾದ + ಎಲ್ಲ ಧಾನ್ಯಗಳು + ಇರಲು ಇದರಲಿ ಬಲ್ಲಿದನು (ಶ್ರೀಮಂತ) ನರೆದಲಗನು (ರಾಗಿಯು) + ಎಂಬುದು + ಇದು + ಆವ ಮತ (ನ್ಯಾಯ) + ಎಂದ.

ಭಾವಾರ್ಥ:- ಮುಂದುವರೆದು ಮಾತನಾಡುತ್ತಾ ಭತ್ತ ಗೌತಮ ಮುನಿಗೆ ಹೀಗೆ ಹೇಳುತ್ತದೆ: “ಎಲ್ಲಾ ಧರ್ಮಗಳ ಸಾರ ನಿಮಗೆ ತಿಳಿದಿದೆ. ನಿಮಗೆ ಎಲ್ಲರ ಬಗ್ಗೆ ತಿಳಿದಿಲ್ಲವೇ? ಹೀಗಿದ್ದೂ ಇಲ್ಲಿ ಈ ರೀತಿ ಕಡೆಗಣಿಸಿ ಮಾತನಾಡುವುದು ಸರಿಯೇ? ಸಾಕು. ಅದು ಹಾಗಿರಲಿ, ಭತ್ತ ನಾನಿರುವಾಗ; ಗೋದಿ ಮೊದಲಾದ ಧಾನ್ಯಗಳೆಲ್ಲಾ ಇಲ್ಲಿರುವಾಗ ಇವರಲ್ಲಿ ರಾಗಿಯೇ ಶ್ರೀಮಂತ(ಶ್ರೇಷ್ಠ/ಬಲ್ಲಿದ) ಎಂದು ಹೇಳುವುದು ಇದು ಯಾವ ನ್ಯಾಯ? ಎಂದಿತು.

ಏನೆಲವೊ ನರೆದಲಗ ನೀನು ಸ

ಮಾನನೇ ಎನಗಿಲ್ಲಿ ನಮ್ಮನು

ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ

ಜಾನಕೀ ಪತಿ ಸನಿಹದಲಿ ಕುಲ

ಹೀನ ನೀನು ಪ್ರತಿಷ್ಠ ಸುಡು ಮತಿ

ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ       || ೪ ||

ಪದವಿಭಾಗ ಮತ್ತು ಪದಶಃ ಅರ್ಥ:- ಏನು + ಎಲವೊ ನರೆದಲಗ(ರಾಗಿ) ನೀನು ಸಮಾನನೇ ಎನಗೆ + ಇಲ್ಲಿ ನಮ್ಮನು ದಾನವಾಂತಕ (ವಿಷ್ಣು) ಬಲ್ಲನು + ಇಬ್ಬರ ಹೆಚ್ಚು ಕುಂದುಗಳ(ಕಡಿಮೆ/ಕೊರತೆಗಳು) ಜಾನಕೀ ಪತಿ ಸನಿಹದಲಿ (ಹತ್ತಿರದಲ್ಲಿ) ಕುಲಹೀನ ನೀನು ಪ್ರತಿಷ್ಠ (ಅಹಂಕಾರಿ) ಸುಡು ಮತಿಹೀನ (ಬುದ್ಧಿಗೇಡಿ) ನೀನು + ಎಂದು + ಎನುತ ಖತಿಯಲಿ (ಕೋಪದಿಂದ) ಬೈದು ಭಂಗಿಸಿದ (ಜರೆದನು).

ಭಾವಾರ್ಥ:- ನಂತರ ರಾಗಿಯನ್ನು ಕುರಿತು ವ್ರೀಹಿಗನು(ಭತ್ತ) ಈ ರೀತಿ ಹೇಳುತ್ತಾನೆ: “ಎಲವೋ ನರೆದಲಗ, ಇಲ್ಲಿ ನೀನು ನನಗೆ ಸಮಾನನೇ? ದಾನವಾಂತಕನಾದ ಭಗವಂತನೇ ನಮ್ಮಿಬ್ಬರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂಬುದನ್ನು. ಜಾನಕಿಯ ಪತಿಯಾದ ಶ್ರೀ ರಾಮನ ಸನಿಹದಲ್ಲಿ ನೀನು ಕುಲಹೀನ, ಅಹಂಕಾರಿ, ಬುದ್ಧಿಗೇಡಿಯಾದ ಹೀನ.” ಎಂದು ಕೋಪದಿಂದ ಬೈದು ಜರೆದನು.

ಕ್ಷಿತಿಯಮರರುಪನಯನದಲಿ ಸು

ವ್ರತ ಸುಭೋಜನ ಪರಮ ಮಂತ್ರಾ

ಕ್ಷತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲಿ

ಕ್ರತುಗಳೆಡೆಯೊಳಗರಮನೆಯಲಿ

ಪ್ರತಿದಿನವು ರಂಜಿಸುತ ದೇವರಿ

ಗತಿಶಯದ ನೈವೇದ್ಯ ತಾನಿಹೆನೆಂದನಾ ವ್ರಿಹಿಗ          || ೫ ||

ಪದವಿಭಾಗ ಮತ್ತು ಪದಶಃ ಅರ್ಥ:- ಕ್ಷಿತಿಯ (ಭೂಮಿಯ) + ಅಮರರ (ದೇವತೆಗಳ) [ಕ್ಷಿತಿಯಮರರ= ಬ್ರಾಹ್ಮಣರ] + ಉಪನಯನದಲಿ ಸುವ್ರತ (ಒಳ್ಳೆಯ ವ್ರತ) ಸುಭೋಜನ (ಒಳ್ಳೆಯ ಊಟ) ಪರಮ (ಶ್ರೇಷ್ಠ) ಮಂತ್ರಾಕ್ಷತೆಗಳಲಿ ಶುಭ ಶೋಭನದಲಿ (ಸಮಾರಂಭಗಳಲ್ಲಿ) + ಆರತಿಗೆ ಹಿರಿಯರಲಿ ಕ್ರತುಗಳ + ಎಡೆಯ + ಒಳಗೆ + ಅರಮನೆಯಲಿ ಪ್ರತಿ ದಿನವು ರಂಜಿಸುತ ದೇವರಿಗೆ + ಅತಿಶಯದ (ಮಿಗಿಲು/ಶ್ರೇಷ್ಠ) ನೈವೇದ್ಯ ತಾನು + ಇಹೆನು + ಎಂದನು + ಆ ವ್ರಿಹಿಗ.

ಭಾವಾರ್ಥ:- “ಬ್ರಾಹ್ಮಣರ(ಕ್ಷಿತಿಯ=ಭೂಮಿಯ; ಅಮರರು=ದೇವತೆಗಳು) ಉಪನಯನದಲ್ಲಿ, ವ್ರತಾಚರಣೆಯಲ್ಲಿ, ಒಳ್ಳೆಯ ಭೋಜನದಲ್ಲಿ, ಶ್ರೇಷ್ಠವಾದ ಮಂತ್ರಾಕ್ಷತೆಯಲ್ಲಿ, ಶುಭ ಸಮಾರಂಭಗಳಲ್ಲಿ, ಆರತಿಗೆ ಹಿರಿಯರಲ್ಲಿ, ಯಜ್ಞಯಾಗಾದಿಗಳಲ್ಲಿ(ಕ್ರತು), ಅರಮನೆಯಲ್ಲಿ – ಹೀಗೆ ಪ್ರತಿದಿನವು ಎಲ್ಲೆಂದರಲ್ಲಿ ರಂಜಿಸುತ್ತ ದೇವರಿಗೆ ಅತಿಶಯವಾದ ನೈವೇದ್ಯದಲ್ಲಿ ತಾನಿರುವೆನು” ಎಂದು ವ್ರಿಹಿಗನು(ಭತ್ತ) ತನ್ನ ಶ್ರೇಷ್ಠತೆಯನ್ನು ಹೇಳಿಕೊಂಡನು.

ಸತ್ಯಹೀನನು ಬಡವರನು ಕ

ಣ್ಣೆತ್ತಿನೋಡೆ ಧನಾಢ್ಯರನು ಬೆಂ

ಬತ್ತಿ ನಡೆವ ಅಪೇಕ್ಷೆ ನಿನ್ನದು ಹೇಳಲೇನದನು

ಹೆತ್ತ ಬಾಣಂತಿಯರು ರೋಗಿಗೆ

ಪತ್ಯ ನೀನಹೆ ಹೆಣದ ಬಾಯಿಗೆ

ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕರವೆಂದ   || ೬ ||

ಪದವಿಭಾಗ ಮತ್ತು ಪದಶಃ ಅರ್ಥ:- ಸತ್ಯಹೀನನು ಬಡವರನು ಕಣ್ಣೆತ್ತಿ ನೋಡೆ ಧನಾಡ್ಯರನು(ಧನವಂತರನ್ನು) ಬೆಂಬತ್ತಿ (ಹಿಂಬಾಲಿಸಿ) ನಡೆವ ಅಪೇಕ್ಷೆ ನಿನ್ನದು ಹೇಳಲು + ಏನು + ಅದನು ಹೆತ್ತ ಬಾಣಂತಿಯರು ರೋಗಿಗೆ ಪತ್ಯ ನೀನು + ಇಹೆ (ಇರುವೆ) ಹೆಣದ ಬಾಯಿಗೆ ತುತ್ತು ನೀನು + ಇಹೆ (ಇರುವೆ) ನಿನ್ನ ಜನ್ಮ ನಿರರ್ಥಕರವು + ಎಂದ.

ಭಾವಾರ್ಥ:- ವ್ರಿಹಿಗನ(ಭತ್ತದ) ಮಾತನ್ನು ಕೇಳಿದ ರಾಗಿ ಸುಮ್ಮನಿರದೆ ಅದಕ್ಕೆ ಹೀಗೆ ಪ್ರತ್ಯುತ್ತರ ನೀಡುತ್ತದೆ: “ನೀನು ಸತ್ಯಹೀನನಾಗಿರುವೆ, ಬಡವರನ್ನು ಕಣ್ಣೆತ್ತಿ ನೋಡುವುದಿಲ್ಲ, ಶ್ರೀಮಂತರನ್ನು ಮಾತ್ರ ಹಿಂಬಾಲಿಸಿ ಹೋಗುವ ಅಪೇಕ್ಷೆ ನಿನ್ನದು. ಹೆತ್ತ ಬಾನಂತಿಯರು ಹಾಗೂ ರೋಗಿಗಳಿಗೆ ನೀನು ಪತ್ಯವಾಗಿರುವೆ ಅಲ್ಲದೆ ಹೆಣದ ಬಾಯಿಗೆ ತುತ್ತಾಗುವೆ. ನಿನ್ನ ಜನ್ಮ ವ್ಯರ್ಥವಾದುದು.” ಎಂದು ರಾಗಿ ಭತ್ತವನ್ನು ಜರೆಯಿತು. 

ಮಳೆದೆಗೆದು ಬೆಳೆಯಡಗಿ ಕ್ಷಾಮದ

ವಿಲಯಕಾಲದೊಳನ್ನವಿಲ್ಲದೆ

ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ

ಎಲವೊ ನೀನೆಲ್ಲಿಹೆಯೊ ನಿನ್ನಯ

ಬಳಗವದು ತಾನೆಲ್ಲಿಹುದು ಈ

ಹಲವು ಹುಲು ಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ  || ೭ ||

ಪದವಿಭಾಗ ಮತ್ತು ಪದಶಃ ಅರ್ಥ:- ಮಳೆ + ತೆಗೆದು(ಹೋಗಿ/ಇಲ್ಲದಾಗಿ) ಬೆಳೆಯು + ಅಡಗಿ ಕ್ಷಾಮದ ವಿಲಯ ಕಾಲದೊಳ್(ವಿನಾಶ ಕಾಲದಲ್ಲಿ) + ಅನ್ನ + ಇಲ್ಲದೆ ಅಳಿವ ಪ್ರಾಣಿಗಳ + ಆದರಿಸಿ ಸಲಹುವೆನು ಜಗವು + ಅರಿಯೆ (ತಿಳಿಯಲು) ಎಲವೊ ನೀನು + ಎಲ್ಲಿ + ಇಹೆಯೊ (ಇರುವೆಯೊ) ನಿನ್ನಯ ಬಳಗವದು ತಾನು + ಎಲ್ಲಿ + ಇಹುದು (ಇರುವುದು) ಈ ಹಲವು ಹುಲು(ಹೀನ/ಅಲ್ಪ) ಧಾನ್ಯಗಳು + ಎನಗೆ ಸರಿದೊರೆಯೆ (ಸರಿಸಮಾನವೇ) ಕೇಳು + ಎಂದ.

ಸಾರಾಂಶ:- ರಾಗಿಯು ಮುಂದುವರೆದು ವ್ರಿಹಿಗನನ್ನು ಕುರಿತು “ಈ ಜಗತ್ತಿಗೆಲ್ಲ ತಿಳಿದಿರುವಂತೆ; ಮಳೆ ಹೋಗಿ, ಬೆಳೆ ಇಲ್ಲದಂತಾಗಿ, ಘೋರ ಬರಗಾಲದಲ್ಲಿ ಅನ್ನವಿಲ್ಲದೆ ನಾಶವಾಗುವ ಪ್ರಾಣಿಗಳನ್ನು ನಾನು ಆದರಿಸಿ ಕಾಪಾಡುತ್ತೇನೆ. ಎಲವೋ ಆಗ ನೀನೆಲ್ಲಿರುವೆಯೋ ನಿನ್ನ ಬಳಗ ಎಲ್ಲಿರುವುದೋ. ಈ ಹಲವು ಹುಲು ಧಾನ್ಯಗಳು ನನಗೆ ಸರಿಸಮಾನವೇ? ಕೇಳು.” ಎಂದು ಹೇಳುತ್ತದೆ.

ಮಸೆದುದಿತ್ತಂಡಕ್ಕೆ ಮತ್ಸರ

ಪಿಸುಣ ಬಲರತಿ ನಿಷ್ಠುರರು ವಾ

ದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ

ಹಿಸುಣರಿವದಿರ ಮತ್ಸರವ ಮಾ

ಣಿಸುವ ಹದನೇನೆನುತ ಯೋಚಿಸಿ

ದ ಸುರ ಮುನಿಪರ ನೋಡೆ ಗೌತಮ ಮುನಿಪನಿಂತೆಂದ || ೮ ||

ಪದವಿಭಾಗ ಮತ್ತು ಪದಶಃ ಅರ್ಥ:- ೧. ಮಸೆದುದು (ತಿಕ್ಕಾಟವಾಯಿತು) + ಇತ್ತಂಡಕ್ಕೆ(ಎರಡು ತಂಡಕ್ಕೆ/ಗುಂಪಿಗೆ) ಮತ್ಸರ ಪಿಸುಣ(ಚಾಡಿಕೋರ) ಬಲರು + ಅತಿ ನಿಷ್ಠುರರು ವಾದಿಸಲು ಕಂಡನು ನೃಪತಿ ಮನದಲಿ ನೋಡಿ ನಸು ನಗುತ ಹಿಸುಣರ್ + ಇವದಿರ (ಇವರ) ಮತ್ಸರವ ಮಾಣಿಸುವ (ಕೊನೆಯಾಗಿಸುವ/ನಾಶಮಾಡುವ) ಹದನ(ರೀತಿ) + ಏನು + ಎನುತ ಯೋಚಿಸಿದ ಸುರ ಮುನಿಪರ(ದೇವತೆಗಳ ಮುನಿ/ಗೌತಮ) ನೋಡೆ ಗೌತಮ ಮುನಿಪನು + ಇಂತು + ಎಂದ.

ಸಾರಾಂಶ:- ಚಾಡಿಕೋರರು, ಬಹಳ ನಿಷ್ಠುರ ಮನೋಭಾವದವರಾಗಿದ್ದ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ತಿಕ್ಕಾಟವಾಯಿತು. ಅದನನ್ನು ನೋಡಿದ ರಾಜನು ನಸುನಗುತ್ತಾ “ಇವರೆಲ್ಲಾ ಪಿಸುಣರು(ಚಾಡಿಕೋರರು). ಇವರೆಲ್ಲರ ಮತ್ಸರವನ್ನು ಕೊನೆಯಾಗಿಸುವುದು ಹೇಗೆ?” ಎಂದು ಯೋಚಿಸುತ್ತಾ ಗೌತಮ ಮುನಿಗಳ ಕಡೆ ನೋಡುತ್ತಾನೆ. ರಾಮನ ಪ್ರಶ್ನಾರ್ಥಕ ನೋಟವನ್ನು ನೋಡಿದ ಗೌತಮ ಮುನಿಯು ಈ ಮುಂದಿನಂತೆ ಹೇಳುತ್ತಾನೆ.

ಅರಸುಗಳು ನಾವೆಲ್ಲ ಭೂಮೀ

ಸುರರುನೆರೆದಿಹ ದಾನವರು ವಾ

ನರರು ನಮಗೀ ನ್ಯಾಯವನು ಪರಿಹರಿಸಲಳವಲ್ಲ

ಕರಸುವೆವು ಹರಿಹರವಿರಂಚಾ

ದ್ಯರನಯೋಧ್ಯೆಗೆ ಅವರ ಗುಣವಾ

ಧರಿಸಿ ಪೇಳ್ವರು ನಯದೊಳೆಂದನುರಾಮ ನಸುನಗುತ            || ೯ ||

ಪದವಿಭಾಗ ಮತ್ತು ಪದಶಃ ಅರ್ಥ :- ಅರಸುಗಳು ನಾವೆಲ್ಲ ಭೂಮೀಸುರರು(ಬ್ರಾಹ್ಮಣರು) ನೆರೆದಿಹ ದಾನವರು (ರಾಕ್ಷಸರು) ವಾನರರು ನಮಗೆ + ಈ ನ್ಯಾಯವನು ಪರಿಹರಿಸಲು(ಬಗೆಹರಿಸಲು) + ಅಳವಲ್ಲ(ಸಾಧ್ಯವಿಲ್ಲ) ಕರಸುವೆವು ಹರಿ(ವಿಷ್ಣು) ಹರ (ಈಶ್ವರ) ವಿರಂಚಿ (ಬ್ರಹ್ಮ) + ಆದ್ಯರನು (ಮೊದಲಾದವರನ್ನು) + ಅಯೋಧ್ಯೆಗೆ ಅವರ ಗುಣವ + ಆಧರಿಸಿ ಪೇಳ್ವರು (ಹೇಳುವರು) ನಯದೊಳ್ (ವಿವೇಕದಿಂದ/ನ್ಯಾಯವಾಗಿ) + ಎಂದನು ರಾಮ ನಸು ನಗುತ.

ಭಾವಾರ್ಥ: “ನಿಮ್ಮ ನ್ಯಾಯ ತೀರ್ಮಾನ ಮಾಡಲು, ಅರಸರಾದ ನಾವಾಗಲೀ ಭೂಸುರರು ಎನಿಸಿದ ಬ್ರಾಹ್ಮಣರಿಂದಾಗಲೀ ರಾಕ್ಷಸರಿಗಾಗಲೀ ವಾನರರಿಗಾಗಲೀ ಸಾಧ್ಯವಿಲ್ಲ. ಆದ್ದರಿಂದ ಬ್ರಹ್ಮ-ವಿಷ್ಣು-ಮಹೇಶ್ವರರೇ ಮೊದಲಾದವರನ್ನು ಕರೆಸುತ್ತೇವೆ. ಅವರಾದರೆ ಗುಣವನ್ನು ಆಧರಿಸಿ ವಿವೇಕದಿಂದ ನಿಮ್ಮ ನ್ಯಾಯ ತೀರ್ಮಾನ ಮಾಡುತ್ತಾರೆ” ಎಂದು ರಾಮನು ನಸುನಗುತ್ತ ಹೇಳಿದನು.(ವ್ಯಂಗವಾಗಿ)

ಪರಮ ಧಾನ್ಯದೊಳಿಬ್ಬರೇ ಇವ

ರಿರಲಿ ಸೆರೆಯೊಳಗಾರು ತಿಂಗಳು

ಹಿರಿದು ಕಿರಿದೆಂಬಿವರ ಪೌರುಷವರಿಯಬಹುದಿನ್ನು

ಪುರಕೆ ಗಮನಿಸಿ ನಾವು ನಿಮ್ಮನು

ಕರೆಸುವೆವು ಕೇಳೆನುತಯೋಧ್ಯಾ

ಪುರಿಗೆ ಪಯಣವ ಮಾಡಹೇಳಿದನಾವಿಭೀಷಣಗೆ          || ೧೦ ||

ಪದವಿಭಾಗ ಮತ್ತು ಪದಶಃ ಅರ್ಥ :- ಪರಮ(ಶ್ರೇಷ್ಠ) ಧಾನ್ಯದೊಳ್ (ಧಾನ್ಯದಲ್ಲಿ) + ಇಬ್ಬರೇ ಇವರು + ಇರಲಿ ಸೆರೆಯೊಳಗೆ + ಆರು ತಿಂಗಳು ಹಿರಿದು ಕಿರಿದು + ಎಂಬ + ಇವರ ಪೌರುಷವ + ಅರಿಯಬಹುದು + ಇನ್ನು ಪುರಕೆ ಗಮನಿಸಿ ನಾವು ನಿಮ್ಮನು ಕರೆಸುವೆವು ಕೇಳು + ಎನುತ + ಅಯೋಧ್ಯಾ ಪುರಿಗೆ (ಪಟ್ಟಣಕ್ಕೆ) ಪಯಣವ (ಪ್ರಯಾಣವ) ಮಾಡ (ಮಾಡಲು) ಹೇಳಿದನು + ಆ + ವಿಭೀಷಣಗೆ.

ಭಾವಾರ್ಥ: ಶ್ರೀರಾಮನು ಅಲ್ಲಿ ನೆರೆದಿದ್ದ ಧಾನ್ಯಗಳ ವಾದವಿವಾದಗಳನ್ನು ಗಮನಿಸಿದ ಮೇಲೆ ಹೀಗೆ ತೀರ್ಪು ನೀಡಿದನು. “ಕೇಳಿ, ಶ್ರೇಷ್ಠವಾದ ಧಾನ್ಯಗಳಲ್ಲಿ ಇವರಿಬ್ಬರೇ ಇರಲಿ. ಆರು ತಿಂಗಳು ಸೆರೆಯಲ್ಲಿ ಹಾಕಿದರೆ; ಹಿರಿದು ಕಿರಿದೆಂದು ವಾದಿಸುವ ಇವರ ಪೌರುಷವನ್ನು ತಿಳಿಯಬಹುದು. ಇನ್ನು ನಾವು ಅಯೋಧ್ಯಾ ಪಟ್ಟಣಕ್ಕೆ ಹೋಗುತ್ತೇವೆ. ಆ ನಂತರ ನಿಮ್ಮ ಸ್ಥಿತಿಯನ್ನು ಗಮನಿಸಿ ಕರೆಸಿಕೊಳ್ಳುತ್ತೇವೆ.” ಎಂದು ಹೇಳಿ ಅಯೋಧ್ಯಾ ಪಟ್ಟಣಕ್ಕೆ ಪ್ರಯಾಣಮಾಡಲು ವಿಭೀಷಣನಿಗೆ ಹೇಳಿದನು.

ಪರಿಕಲ್ಪನೆ ೧

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು


  1. ಹಂತಗಳು
  2. ಚರ್ಚಾ ಪ್ರಶ್ನೆಗಳು

ಚಟುವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ