ಸಮಾನ ಸಮಾಜ ನಿರ್ಮಾಣದೆಡೆಗೆ ಕಿಶೋರಿ ಸಬಲೀಕರಣ ರಾಜ್ಯಮಟ್ಟದ ಕೋರ್ಸ್‌

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೬:೨೭, ೯ ಜೂನ್ ೨೦೨೨ ರಂತೆ Karthik (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: === ಹಿನ್ನಲೆ : === ಕಿಶೋರಾವಸ್ಥೆ ಮಕ್ಕಳ ಬೆಳವಣಿಗೆಯಲ್ಲಿ ಮಹತ್ತರ ಘಟ್ಟವಾಗಿದ್ದ...)
Jump to navigation Jump to search

ಹಿನ್ನಲೆ :

ಕಿಶೋರಾವಸ್ಥೆ ಮಕ್ಕಳ ಬೆಳವಣಿಗೆಯಲ್ಲಿ ಮಹತ್ತರ ಘಟ್ಟವಾಗಿದ್ದರೂ, ಇದು ಸಾಮಾನ್ಯವಾಗಿ ಭಾರತದಲ್ಲಿ ಗುರುತಿಸ್ಪಟ್ಟ ಹಾಗು ಅರ್ಥಮಾಡಿಕೊಂಡಿರುವ ಹಂತವಾಗಿಲ್ಲ. ಬಾಲ್ಯಾವಸ್ಥೆಯಿಂದ ಬಂದಿರುವ ಮಕ್ಕಳು ಪ್ರೌಢರಾಗುವ ಮುಂಚಿನ ಈ ಹಂತ ಬಹಳಷ್ಟು ಗೊಂದಲಗಳಿಂದ ಹಾಗು ಸವಾಲುಗಳಿಂದ ಕೂಡಿರುತ್ತದೆ. ತಮ್ಮನ್ನು ತಾವು ಅರ್ಥಮಾಡಿಕೊಳ್ಳುತ್ತಲೇ ತಮ್ಮ ಮುಂದಿನ ಬದುಕು ಹೇಗಿರಬೇಕೆಂದು ಕನಸುಗಳನ್ನು ಕಟ್ಟಿಕೊಳ್ಳುವ ಈ ಸ್ತರದಲ್ಲಿ ಅವರಿಗೆ ಇರುವ ಪ್ರಶ್ನೆಗಳು, ಗೊಂದಲಗಳನ್ನು ನಿವಾರಿಸಲು ಅವರಿಗೇ ಮೀಸಲಾದ ಒಂದು ಸಧೃಢ ವ್ಯವಸ್ಥೆಯ ಅಗತ್ಯವಿದೆ. ಮನೆಯಲ್ಲಿ, ಶಾಲೆಯಲ್ಲಿ ಹಾಗು ಹೊರಗಿನ ಅವರ ದೈನಂದಿನ ಪರಿಸರದಿಂದಲೇ ಈ ವ್ಯವಸ್ಥೆಯ ನಿರ್ಮಾಣವಾಗುವುದು ಅತ್ಯವಶ್ಯಕ.

ಇದರಿಂದಾಗಿ ಅವರು ಮುಂದಿನ ತಮ್ಮ ಜೀವನವನ್ನು ಧೈರ್ಯದಿಂದ ಎದುರಿಸಲು, ಪ್ರಜ್ಞಾಪೂರ್ವಕರಾಗಿ ತಮ್ಮ ಓದನ್ನು ಮುಂದುವರೆಸಿ ಅವರಿಗೆ ಇಷ್ಟವಾದ ಕೆಲಸಗಳನ್ನು ಮಾಡಲು ಹಾಗು ಆಂತರಿಕವಾಗಿ ತಮ್ಮ ವ್ಯಕ್ತಿತ್ವವನ್ನು ಸಧೃಡರಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕೋವಿಡ್‌-19ರಿಂದಾಗಿ ಕಳೆದ ವರ್ಷದಿಂದ ಶಾಲಾ ಶಿಕ್ಷಣದಲ್ಲಿ ಬಹಳಷ್ಟು ಏರುಪೇರುಗಳಾಗಿದ್ದು, ಇದರ ನೇರ ಪರಿಣಾಮ ಹೆಣ್ಣುಮಕ್ಕಳ ಶಿಕ್ಷಣದ ಮೇಲಾಗಿದೆ. ಹಲವು ಹೆಣ್ಣುಮಕ್ಕಳು ಬಾಲ್ಯ ವಿವಾಹಕ್ಕೆ ಬಲಿಯಾಗುತ್ತಿರುವುದು ಅವರ ಓದಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕರ್ನಾಟಕ ರಾಜ್ಯ ಕಳೆದ ವರ್ಷದಿಂದ ಇಡೀ ದೇಶದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹಗಳನ್ನು ಕಂಡ ರಾಜ್ಯವಾಗಿರುವುದು ನಿಜವಾಗಿಯೂ ದುರಂತ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಶಾಲೆಯನ್ನು ಬಿಡದೆ ತಮ್ಮ ಶಿಕ್ಷಣವನ್ನು ಧೈರ್ಯದಿಂದ ಪೂರೈಸುವಂತೆ ಮಾಡುವುದು ತುರ್ತಿನ ಕೆಲಸವಾಗಬೇಕಿದೆ.

ಶಾಲೆಗಳಲ್ಲಿ ಶಿಕ್ಷಕರು ಕಿಶೋರಿಯರ ಸಶಕ್ತೀಕರಣದ ತರಗತಿಗಳನ್ನು ನಡೆಸುವುದರಿಂದ ಅವರಿಗೆ ಬೇಕಿರುವ ಮಾರ್ಗದರ್ಶನವನ್ನು ನೀಡಲು ಸಹಾಯವಾಗುತ್ತದೆ. ಶಿಕ್ಷಕರು ತಮ್ಮ ಬೆಂಬಲ ವ್ಯವಸ್ಥೆಯ ಪ್ರಮುಖ ಭಾಗ ಎಂದು ಕಿಶೋರಿಯರಿಗೆ ತಿಳಿಯುತ್ತದೆ. ಈ ಕೋರ್ಸಿನಲ್ಲಿ ಭಾಗವಹಿಸುವ ಪ್ರತೀ ಶಿಕ್ಷಕರೂ ತಂತಮ್ಮ ಶಾಲೆಗಳಲ್ಲಿ ಇದೇ ವಿಷಯಗಳ ಬಗ್ಗೆ ಹಲವು ಸೆಶನ್‌ಗಳನ್ನು ಮಾಡಬೇಕಿದೆ. ತಮ್ಮ  ಅನುಭವಗಳನ್ನು ಮುಂದಿನ ಸೆಶನ್‌ಗಳಲ್ಲಿ ಉಳಿದೆಲ್ಲರೊಂದಿಗೆ ಹಂಚಿಕೊಳ್ಳುವ ಮುಖಾಂತರ ತಮ್ಮ ಕಲಿಕೆಯನ್ನು ಹಿಡಿದಿಡುವ ಜೊತೆಗೆ ಎಲ್ಲರ ಕಲಿಕೆಯನ್ನೂ ಶ್ರೀಮಂತಗೊಳಿಸುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ . ಇದರಿಂದಾಗಿ ಕಿಶೋರಿಯರ ಬಾಲ್ಯ ವಿವಾಹ ಹಾಗು ಅವರು ಶಾಲೆ ಬಿಡುವುದನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಲು ಸಹಾಯವಾಗುತ್ತದೆ ಎಂದು ಆಶಿಸುತ್ತೇವೆ.

ಕೋರ್ಸಿನ ರೂಪುರೇಷೆ ಈ ಕೆಳಗಿನಂತಿದೆ :

  • ಹದಿಹರೆಯದ ವ್ಯಾಖ್ಯಾನ - ದೈಹಿಕ, ಮಾನಸಿಕ ಹಾಗು ಬೌದ್ಧಿಕ ಬದಲಾವಣೆಗಳ ಸ್ವರೂಪ
  • ಸಮಾಜದಲ್ಲಿರುವ ಪಿತೃಪ್ರಧಾನ ವ್ಯವಸ್ಥೆ ಹಾಗು ಹದಿಹರೆಯದ ಮೇಲೆ ಅದರ ಪರಿಣಾಮ
  • ಪಿತೃಪ್ರಧಾನತೆಯನ್ನು ವೈಭವೀಕರಿಸುವ ಮಾಧ್ಯಮಗಳು ಮತ್ತು ಪೂರಕವಾಗಿರುವ ಮಾರುಕಟ್ಟೆ, ವ್ಯವಸ್ಥೆ. ಇವುಗಳಿಂದ ದೇಹದ ಸ್ವಚಿತ್ರಣದ ಮೇಲಾಗುವ ಅಡ್ಡ ಪರಿಣಾಮಗಳು
  • ಆರೋಗ್ಯಕರ ಹದಿಹರೆಯಕ್ಕಾಗಿ ಗೊತ್ತಿರಲೇಬೇಕಾದ ವಿಷಯಗಳು - ರಕ್ತ ಹೀನತೆಯನ್ನು ತಡೆಯುವ ಬಗ್ಗೆ, ಪೌಷ್ಟಿಕತೆಯ ಅಗತ್ಯ, ಮುಟ್ಟು ಮತ್ತು SRHR, ಹದಿಹರೆಯದಲ್ಲಿ ಉಂಟಾಗುವ ಭಾವಾವೇಗಗಳನ್ನು ಅರ್ಥೈಸುವಿಕೆ ಹಾಗೂ ನಿರ್ವಹಣೆ, ಲೈಂಗಿಕ ಆಕರ್ಷಣೆಗಳ ಬಗ್ಗೆ ಅರೋಗ್ಯಕರ ಅರಿವು ಇತ್ಯಾದಿ
  • ಸ್ವತಂತ್ರ ಹಾಗು ಸಶಕ್ತ ಜೀವನವನ್ನು ರೂಪಿಸಿಕೊಳ್ಳುವುದರ ಪ್ರಾಮುಖ್ಯತೆ - ಶಿಕ್ಷಣ ಮತ್ತು ವೃತ್ತಿಗಳ ಬಗ್ಗೆ ಇರುವ ಆಯ್ಕೆಗಳು, ಯುಕ್ತಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಬೆಂಬಲದ ಗುಂಪನ್ನು ಹೊಂದಲು ಇರಬೇಕಾದ ಯೋಜನೆಗಳು  ಇತ್ಯಾದಿ

ಶಿಕ್ಷಕರ ಕೋರ್ಸಿನ ಸ್ವರೂಪ ಹಾಗು ವಿವರಗಳು :

  • ಈ ಕೋರ್ಸುಗಳು ಆಸಕ್ತ ಶಿಕ್ಷಕರಿಗಾಗಿ ರೂಪಿಸ್ಪಟ್ಟಿದ್ದು, ರಾಜ್ಯದ ಯಾವುದೇ ಶಾಲೆಗಳ ವೃತ್ತಿನಿರತ ಶಿಕ್ಷಕರು ಈ ಲಿಂಕಿನ ಮೂಲಕ ನೋಂದಾಯಿಸಬಹುದಾಗಿದೆ. bit.ly/itfctw22
  • ಇದು ಸಂಪೂರ್ಣವಾಗಿ ಆನ್‌ಲೈನ್‌ ಕೋರ್ಸ್‌ ಆಗಿದ್ದು, ಶಾಲೆಯ ನಂತರ ಶಿಕ್ಷಕರು ಒಪ್ಪುವ ನಿಗದಿತ ಸಮಯಕ್ಕೆ ನಡೆಸಲಾಗುವುದು (ಶಾಲೆಯ ಅವಧಿಯ ನಂತರ)
  • ಪ್ರತೀ ಸೆಶನ್‌ಗೆ ಎರೆಡು ಗಂಟೆ ಸಮಯದಂತೆ ಒಟ್ಟು ೪ ಸೆಶನ್‌ಗಳನ್ನು ನಡೆಸಲಾಗುವುದು.
  • ಈ ಸೆಶನ್‌ಗಳ ಮೂಲಕ ಶಿಕ್ಷಕರು ಕಿಶೋರಿಯರ ಶಾಲಾ ಕಲಿಕೆಗೆ ಪೂರಕವಾಗುವಂತಹ, ಹದಿಹರೆಯ ಹಾಗು ಅದಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚಿಸುತ್ತಾರೆ. ನಂತರ ತಮ್ಮ ಶಾಲೆಗಳಲ್ಲಿ ಇವೇ ವಿಷಯಗಳನ್ನು ಆಧರಿಸಿ ಸೆಶನ್‌ಗಳನ್ನು ಮಾಡಿ ಮುಂದಿನ ಭೇಟಿಯಲ್ಲಿ ಅಲ್ಲಿನ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
  • ಕೋರ್ಸಿನ ಭಾಗವಾಗಿ ಶಿಕ್ಷಕರಿಗೆ ಕಲಿಕಾಪಟ್ಟಿಕೆಗಳು, ಅವುಗಳನ್ನು ಬಳಸಲು ಸುಲಭವಾಗುವಂತೆ ಸಹಾಯ ಕೈಪಿಡಿಗಳು ಹಾಗು ಪೂರಕ ಧ್ವನಿ-ದೃಶ್ಯ ಸಂಪನ್ಮೂಲಗಳನ್ನು ನೀಡಲಾಗುವುದು.
  • ಈ ಕೋರ್ಸಿನಲ್ಲಿ ಯಶಸ್ವಿಯಾಗಿ ಭಾಗವಹಿಸುವ ಶಿಕ್ಷಕರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು.

ಈ ಸೆಶನ್‌ಗಳನ್ನು ನಡೆಸಲು ನಾವು ಮೂಡಲ್ (https://moodle.org/) ಹಾಗು ಬಿಗ್ ಬ್ಲೂ ಬಟನ್‌ (https://bigbluebutton.org/) ನಂತಹ ಉಚಿತ ಹಾಗು ಮುಕ್ತ ತಂತ್ರಾಂಶಗಳನ್ನು ಬಳಸುತ್ತೇವೆ. ಇವುಗಳನ್ನು ಎಲ್ಲಾ ಶಿಕ್ಷಕರು ತಂತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಸುಲಭವಾಗಿ ಬಳಸಬಹುದಾಗಿದೆ.

ಘಟಕ ೧ - ಹದಿಹರೆಯದ ವ್ಯಾಖ್ಯಾನ - ಪರಿಚಯ ಮತ್ತು ಸಂಪನ್ಮೂಲಗಳ ಬಳಕೆಯ ಬಗ್ಗೆ ಚರ್ಚೆ

ಘಟಕ ೨ - ಪುರುಷ ಪ್ರಧಾನತೆ ಸಮಾಜದಲ್ಲಿರುವ ಅಸಮಾನತೆಯ ಮೂಲ ಕಾರಣ ಎಂಬ ಚರ್ಚೆ

ಘಟಕ ೩ - ಪುರುಷಪ್ರಧಾನತೆಯನ್ನು ವೈಭವೀಕರಿಸುವಲ್ಲಿ ಮಾಧ್ಯಮಗಳ ಪಾತ್ರ

ಘಟಕ ೪ - ಸ್ವತಂತ್ರ ಹಾಗು ಸಶಕ್ತ ಜೀವನವನ್ನು ರೂಪಿಸಿಕೊಳ್ಳುವುದರ ಪ್ರಾಮುಖ್ಯತೆ