ದೊಡ್ಡವರ ದಾರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಉದ್ದೇಶಗಳು

  1. ವಿದ್ಯಾರ್ಥಿಗಳಲ್ಲಿ ಮಾತನಾಡುವ ಕೌಶಲ್ಯವನ್ನು ಮೂಡಿಸುವುದು : ಮಕ್ಕಳಿಗೆ ತಮ್ಮ ಅನುಭವವನ್ನು ಕುರಿತು ಹಂಚಿಕೊಳ್ಳಲು ಅವಕಾಶ ಮಾಡಿಕೊಡುವುದು. ಬಾಬು ರಾಜೇಂದ್ರ ಪ್ರಸಾದರ ಜಾಗದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರು ಎಂಬುದನ್ನು ಕಲ್ಪಿಸಿಕೊಂಡು ಹೇಳಲು ತಿಳಿಸುವುದು.
  2. ಘಟನೆಗಳ ಕುರಿತು ಮಕ್ಕಳ ಅಭಿಪ್ರಾಯ ಸಂಗ್ರಹಿಸುವುದು : ಪಠ್ಯದಲ್ಲಿ ಬಾಬು ರಾಜೇಂದ್ರ ಪ್ರಸಾದರು ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಿದ ಘಟನೆಯ ಕುರಿತು ಮಕ್ಕಳು ಅಭಿಪ್ರಾಯ ತಿಳಿಸಲು ಅವಕಾಶ ಮಾಡಿಕೊಡುವುದು.
  3. ಸನ್ನಿವೇಶ ಮತ್ತು ಘಟನೆಗಳನ್ನು ಆರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು: ಮಕ್ಕಳಿಗೆ ಪಠ್ಯ ವಿಷಯವನ್ನು ವಿವರಿಸುವ ಮೂಲಕ ಘಟನೆಯನ್ನು ಕಲ್ಪಿಸಿಕೊಂಡು ಅರ್ಥೈಸಿಕೊಳ್ಳುವ ಸಾಮರ್ಥ್ಯ ವೃದ್ಧಿಸುವುದು.

ಸಂಪನ್ಮೂಲಗಳು

  1. ಡಾ// ಬಾಬು ರಾಜೇಂದ್ರ ಪ್ರಸಾದ್ ರವರ ಚಿತ್ರಪಟ.
  2. ಕನ್ನಡ ಪಠ್ಯಪುಸ್ತಕ.
  3. ಸ್ಟೋರಿ ವೀವರ್ ಸ್ಟೋರಿ ಕಥೆ.
  4. ಪಠ್ಯಭಾಗ ಮಾದರಿ ವಾಚನದ ವಿಡಿಯೋ.

ಶಿಕ್ಷಕರಿಗೆ ಟಿಪ್ಪಣಿ

ಪ್ರಸ್ತುತ ಪಠ್ಯಭಾಗದಲ್ಲಿ ಮಕ್ಕಳು ಡಾ// ಬಾಬು ರಾಜೇಂದ್ರ ಪ್ರಸಾದ್ ರವರ ಪುಸ್ತಕವನ್ನು ಹರಿದು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದು ಇದನ್ನು ಕಂಡ ಬಾಬು ರಾಜೇಂದ್ರ ಪ್ರಸಾದರು ಮಕ್ಕಳ ಮೇಲೆ ಕೋಪಗೊಳ್ಳದೇ, ಮಕ್ಕಳನ್ನು ಅಪರಾಧಿ ಸ್ಥಾನದಲ್ಲೂ ನಿಲ್ಲಿಸದೇ ಅವರಿಗೆ ತಮ್ಮ ತಪ್ಪಿನ ಅರಿವುಂಟಾಗಬೇಕೆಂದು ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಅಲ್ಲದೆ ಪಠ್ಯ ಭಾಗದಲ್ಲಿ ಕೋಪ, ಅಸಹನೆ, ತಾಳ್ಮೆಗೆಡುವುದರಿಂದ ದೂರವಿರುವುದೇ ದೊಡ್ಡ ವ್ಯಕ್ತಿಗಳ ಪ್ರಗತಿಯ ಗುಟ್ಟು ಎಂದು ಎಂದು ಹೇಳಲಾಗಿದೆ. ಈ ಕೆಳಗೆ ಸೂಚಿಸಿರುವ "ಸಿಟ್ಟಿನ ಅಕ್ಕು' ಎಂಬ ಕಥೆಯಲ್ಲಿ ಮಕ್ಕಳು ಹೇಗೆ ಕೋಪಿಸಿಕೊಳ್ಳುತ್ತಾರೆ, ಕೋಪಗೊಂಡಾಗ ಮಕ್ಕಳ ನಡವಳಿಕೆಗಳು ಹೇಗಿರುತ್ತವೆ, ಉತ್ತಮ ಹವ್ಯಾಸಗಳು ಕೋಪದ ಭಾವನೆಯಿಂದ ಹೊರಬರಲು ಹೇಗೆ ಸಹಾಯ ಮಾಡುತ್ತವೆ ಹಾಗೂ ಕೋಪ ಬಂದಾಗ ಅದನ್ನು ನಿರ್ವಹಿಸುವ ತಂತ್ರಗಳನ್ನು ಪ್ರಸ್ತಾಪಿಸಲಾಗಿದೆ. ಯಾರಿಗೇ ಆಗಲಿ ಕೋಪ ತರಿಸಬಲ್ಲ ಸನ್ನಿವೇಶವನ್ನು ಪಠ್ಯ ಭಾಗದಲ್ಲಿ ರಾಜೇಂದ್ರ ಪ್ರಸಾದರು ತಾಳ್ಮೆಯಿಂದ ನಿಭಾಯಿಸುತ್ತಾರೆ. ಕೋಪ, ಅಸಹನೆ ತಾಳ್ಮೆಗೆಡುವುದು ದೊಡ್ಡವರಿಂದ ದೂರ ಇದೇ ಪ್ರಗತಿಯ ಗುಟ್ಟು. ಕೋಪ ಬರುವುದು ಸಹಜ ಆದರೆ ಅದನ್ನು ಸರಿಯಾಗಿ ನಿರ್ವಹಿಸುವುದು ಅತ್ಯಗತ್ಯ ಎಂಬುದನ್ನ ಕಥೆಯ ಮೂಲಕ ಅರ್ಥೈಸುವುದರ ಮೂಲಕ ಪಠ್ಯಕ್ಕೆ ಸಂಭಂದ ಕಲ್ಪಿಸಿಕೊಳ್ಳುವುದು.

ಚಟುವಟಿಕೆ-೧

  1. ವಿಧಾನ/ಪ್ರಕ್ರಿಯೆ : ಮಕ್ಕಳನ್ನು ಕಥೆ ಕೇಳಲು ಸಜ್ಜುಗೊಳಿಸಿ ಕಥೆಯ ಕುರಿತಾಗಿ ಚರ್ಚಿಸುವುದು.
  2. ಸಮಯ : ೧೫ ನಿಮಿಷಗಳು.
  3. ಸಾಮಗ್ರಿಗಳು/ಸಂಪನ್ಮೂಲಗಳು : ಸಿಟ್ಟಿನ ಅಕ್ಕು ಕಥೆ.
  4. ಹಂತಗಳು ಮತ್ತು ಚರ್ಚಾ ಪ್ರಶ್ನೆಗಳು :

ಕಥಾ ಪೂರ್ವ ಹಂತ : ೧.ಪ್ರತಿನಿತ್ಯ ನಿಮ್ಮ ಅನುಭವಕ್ಕೆ ಬರುವ ಭಾವನೆಗಳು ಯಾವುವು? ೨.ನಿಮಗೆ ಕೋಪ ಬರುತ್ತದೆಯೇ? ೩.ಕೋಪ ಬಂದಾಗ ನಿಮ್ಮ ನಡವಳಿಕೆಗಳು ಹೇಗಿರುತ್ತವೆ? ೪.ಕೋಪವನ್ನು ನೀಗಿಸಿಕೊಳ್ಳಲು ನೀವೇನು ಮಾಡುತ್ತೀರಿ? ಎಂದೆಲ್ಲಾ ಮಕ್ಕಳೊಡನೆ ಚರ್ಚಿಸುವುದು. ನಂತರ "ಮಕ್ಕಳೇ ನಿಮ್ಮ ಹಾಗೇ ಒಂದು ಮಗು ತನಗೆ ಕೋಪ ಬಂದಾಗ ಹೇಗೆ ವರ್ತಿಸುತ್ತೆ, ಅದರ ಕೋಪ ಹೇಗೆ ಕಡಿಮೆಯಾಯಿತು ಎಂಬುದನ್ನ ಸಿಟ್ಟನ ಅಕ್ಕು ಎಂಬ ಕಥೆಯ ಮೂಲಕ ತಿಳಿದುಕೊಳ್ಳೋಣ' ಎಂದು ಹೇಳಿ ಕಥೆಗೆ ಪ್ರವೇಶಿಸುವುದು. ಕಥಾ ಹಂತ : ಮಕ್ಕಳಿಗೆ ಸಿಟ್ಟಿನ ಅಕ್ಕು ಡಿಜಿಟಲ್ ಆಧಾರಿತ ಕಥೆಯನ್ನು ಪ್ರದರ್ಶಿಸುವುದು. ಕಥಾ ನಂತರದ ಹಂತ: ೧. ಅಕ್ಕುವಿಗೆ ಕೋಪ ಬರಲು ಕಾರಣವೇನು? ೨. ಅಕ್ಕುವಿಗೆ ಕೋಪ ಬಂದಾಗ ಆಕೆಯ ನಡವಳಿಗೆ ಹೇಗಿತ್ತು? ೩. ಅಕ್ಕುವಿನ ಕೋಪ ಹೇಗೆ ಕಡಿಮೆಯಾಯ್ತು? ೪. ಅಕ್ಕು ತನ್ನ ಚಿತ್ರ ಬಿಡಿಸುವ ಹವ್ಯಾಸದಲ್ಲಿ ತೊಡಗಿಸಿಕೊಂಡಾಗ ಕೋಪವನ್ನು ಮರೆತುದರ ಕುರಿತು ಮಕ್ಕಳಿಗೆ ಹೇಳುವುದು. ೫. ಮಕ್ಕಳಿಗೂ ಕೂಡ ಕೋಪ ಬಂದಾಗ ಯಾವುದಾದರೂ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು. ಒಂದು ವೇಳೆ ಯಾರಾದರೂ ನಿಮ್ಮ ಇಷ್ಟವಾದ ಪುಸ್ತಕವನ್ನು ಹರಿದು ಹಾಕಿದ್ದರೆ ನಿಮ್ಮ ವರ್ತನೆ ಹೇಗಿರುತ್ತದೆ? ಅವರು ಮತ್ತೊಮ್ಮೆ ಹಾಗೆ ಮಾಡದಂತೆ ನೀವು ಏನು ಮಾಡುತ್ತೀರಿ?’ ಎಂದು ಮಕ್ಕಳನ್ನು ಕೇಳಿ ಉತ್ತರ ಪಡೆದುಕೊಳ್ಳುವುದು.

ಚಟುವಟಿಕೆ-೨

  1. ವಿಧಾನ/ಪ್ರಕ್ರಿಯೆ : ದೊಡ್ಡವರ ದಾರಿ ಗದ್ಯದಲ್ಲಿನ ಡಾ. ರಾಜೇಂದ್ರ ಪ್ರಸಾದ್ ರವರ ಪಠ್ಯಭಾಗದ ವಾಚನ, ವಿವರಣೆ ಮತ್ತು ಮಕ್ಕಳ ಅಭಿಪ್ರಾಯ ಸಂಗ್ರಹಣೆ.
  2. ಸಮಯ : ೨೦ ನಿಮಿಷಗಳು.
  3. ಸಾಮಗ್ರಿಗಳು/ಸಂಪನ್ಮೂಲಗಳು : ಪಠ್ಯವಾಚನದ ವಿಡಿಯೋ. ರಾಜೇಂದ್ರ ಪ್ರಸಾದರ ಚಿತ್ರಪಟ.
  4. ಚರ್ಚಾ ಪ್ರಶ್ನೆಗಳು : ರಾಜೇಂದ್ರ ಪ್ರಸಾದರ ಜಾಗದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ.