ರಚನಾ ಗಣಿತ 9 ಶಿಕ್ಷಕರೇ, ಚಿಂತನೆ ಮಾಡಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಶಿಕ್ಷಕರೇ ಚಿಂತನೆ ಮಾಡಿ

ಗಣಿತದ ಕಲಿವನ್ನು ಅನುಕೂಲಿಸುವ ಮೊದಲು, ಶಿಕ್ಷಕರೇ, ದಯಮಾಡಿ ಈ ಮುಂದಿನ ಕೆಲವು ಅಂಶಗಳ ಬಗ್ಗೆ ಚಿಂತನೆ ಮಾಡಿ.

1. ಬೋಧಿಸಬೇಕಾಗಿರುವ ಘಟಕ, ಅಗತ್ಯಪೂರ್ವಜ್ಞಾನ ಅದರ ವಿಷಯ ವ್ಯಾಪ್ತಿ, ಅದಕ್ಕೆ ಪೂರಕವಾಗಿ ಉದ್ದೇಶಗಳನ್ನು ಪಟ್ಟಿಮಾಡಿಕೊಳ್ಳಿ.

2. ವಿಷಯವನ್ನು ಆರಂಭಿಸುವ ಮುಂದೆ ಅದಕ್ಕೆ ಪೂರಕವಾಗಿ ಯಾವ ರೀತಿಯ ಅಭಿಪ್ರೇರಣಾ ತಂತ್ರಗಳನ್ನು ಬಳಸಿಕೊಳ್ಳಬಹುದು ಎಂಬುದನ್ನು ಆಲೋಚಿಸಿ.

3. ಪಠ್ಯವಿಷಯಕ್ಕೆ ಸಂಬಂಧಿಸಿದಂತೆ ನೀಡಿರುವ ಚಟುವಟಿಕೆಗಳನ್ನು ಗಮನಿಸಿ. ಅವುಗಳನ್ನು ವಿದ್ಯಾರ್ಥಿಗಳು ನಿರ್ವಹಿಸುವಂತೆ ಮಾಡುವ ಕ್ರಮಗಳನ್ನು ಯೋಜಿಸಿಕೊಳ್ಳಿ.

4. ಎಲ್ಲ ವಿಷಯಗಳನ್ನು ಅನುಗಮನದೊಂದಿಗೆ ಆರಂಭಿಸಿ, ಅಂದರೆ ಪ್ರಶ್ನೆಗಳು, ದೃಷ್ಠಾಂತಗಳನ್ನು ನೀಡುವುದು, ಸಮಸ್ಯಾ ಪರಿಹಾರದ ಕ್ರಮಗಳನ್ನು ವಿದ್ಯಾರ್ಥಿಗಳೇ ಗ್ರಹಿಸುವಂತೆ ಮಾಡುವುದು ಇತ್ಯಾದಿಗಳಿಗೆ ಆದ್ಯತೆಯಿರುವಂತೆ ಗಮನಹರಿಸಿ.

5. ಮಾದರಿ ಲೆಕ್ಕಗಳನ್ನು ಪರಿಹರಿಸುವಾಗ ಅವುಗಳನ್ನು ಬಿಡಿಸುವ ಹಂತಗಳು ಮತ್ತು ಅವುಗಳಲ್ಲಿ ಗಮನಿಸಬೇಕಾದ ವಿಶೇಷ ಅಂಶಗಳಿದ್ದಲ್ಲಿ ಅವುಗಳಿಗೆ ಹೆಚ್ಚಿನ ಒತ್ತನ್ನು ನೀಡಿ.

6. ವಿಷಯ ಬೋಧನೆಯಲ್ಲಿ ದೈನಂದಿನ ಜೀವನದಲ್ಲಿನ ಈ ಅಂಶಗಳು ಹೇಗೆ ಉಪಯುಕ್ತ ವಾಗುತ್ತವೆ ಮತ್ತು ಅವುಗಳಿಂದ ಗಳಿಸಬೇಕಾದ ತಿಳಿವಳಿಕೆಯ ಕಡೆಗೆ ಗಮನ ನೀಡಿ. ಕೆಲವು ವಿಷಯಗಳು ನೇರವಾಗಿ ದೈನಂದಿನ ಜೀವನಕ್ಕೆ ಸಂಬಂಧಪಡದಿರಬಹುದು ಆದರೆ ಮುಂದಿನ ವರ್ಷಗಳಲ್ಲಿ ಗಣಿತದ ಕಲಿವಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಮನನ ಮಾಡಿಕೊಡಿ.

7. ವಿವಿಧ ಬೋಧನಾ ಕ್ರಮಗಳಿಗೆ ಯಾವ ಅಂಶಗಳನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ಮೊದಲೇ ಯೋಚಿಸಿ, ಅವುಗಳನ್ನು ತರಗತಿ ಬೋಧನೆಯಲ್ಲಿ ಅಳವಡಿಸಿಕೊಳ್ಳಿ.

8. ರಚನಾತ್ಮಕ ವಿಧಾನಕ್ಕೆ ಎಲ್ಲೆಲ್ಲಿ ಅವಕಾಶಗಳಿವೆಯೋ ಅಲ್ಲಿ ಅದೇ ವಿಧಾನವನ್ನು ಬಳಿಸಿ; ಇದಕ್ಕೆ ಸ್ವಲ್ಪ ಹೆಚ್ಚಿನ ಸಮಯ ಬೇಕಾಗಬಹುದು ಆದರೆ ಅದರಿಂದ ವಿದ್ಯಾರ್ಥಿಗಳು ಗಳಿಸುವ ಜ್ಞಾನ ಮಾತ್ರ ಅತೀ ಹೆಚ್ಚಿನದು ಮತ್ತು ಶಾಶ್ವತ ಕಲಿಕೆಗೆ ಪೂರಕ.

9. ಪ್ರಕಲ್ಪಗಳು / ಯೋಜನೆಗಳು ಇವುಗಳಿಗೆ ಪೂರಕವಾದ ಫಲಿತಾಂಶಗಳನ್ನು ಗುರ್ತಿಸಿಕೊಳ್ಳಿ ಅದರಂತೆ ವಿದ್ಯಾರ್ಥಿಗಳಿಂದಲೇ ಅವುಗಳನ್ನು ಮೂಡಿಸುವುದಕ್ಕೆ ಪ್ರಾಧಾನ್ಯತೆ ನೀಡಿ.

10. ಪಠ್ಯಪುಸ್ತಕದ ಅಭ್ಯಾಸಗಳಲ್ಲಿರುವ ಪ್ರತಿ ಸಮಸ್ಯೆಯನ್ನೂ ಶಿಕ್ಷಕರೇ ತರಗತಿಯಲ್ಲಿ ಪರಿಹರಿಸ ಬೇಕು ಎಂಬುದೇನೂ ಇಲ್ಲ. ಅವುಗಳನ್ನು ಪರಿಹರಿಸುವ ಬಗ್ಗೆ ತಿಳಿವಳಿಕೆ ನೀಡಿ, ಸಾಧ್ಯ ವಾದಷ್ಟೂ ವಿದ್ಯಾರ್ಥಿಗಳೇ ಸ್ವತಃ ಪರಿಹರಿಸಲು ಅವಕಾಶವನ್ನು ನೀಡಿ.