ವೇದಿಕೆಯ ವಿಶೇಷ ಹಂಚಿಕೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಏನು ಕಲಿತೆ ನೀನಿಂದು ಶಾಲೆಯಲ್ಲಿ ಕಂದ

ಏನು ಕಲಿತೆ ನೀನಿಂದು ಶಾಲೆಯಲ್ಲಿ ಕಂದ?
ಏನು ಕಲಿತೆ ನೀನಿಂದು ಶಾಲೆಯಲ್ಲಿ ಕಂದ?
ಏನು ಕಲಿತೆ ನೀನಿಂದು ಹೇಳು ನನ್ನ ಕಂದ?

ಗಾಂಧಿ ಎಂದೂ ಸುಳ್ಳು ಹೇಳಲಿಲ್ಲವೆಂಬುದ ಕಲಿತೆ
ವೀರಯೋಧರು ಹುತಾತ್ಮರೆಂಬುದ ಕಲಿತೆ
ನಾಡಿನ ಜನರೆಲ್ಲ ಸ್ವತಂತ್ರರೆಂಬುದ ಕಲಿತೆ
ಇಷ್ಟನ್ನೇ ನಾನಿಂದು ಶಾಲೆಯಲ್ಲಿ ಕಲಿತೆನಮ್ಮ
ಇದನ್ನೇ ನಾನಿಂದು ಶಾಲೆಯಲ್ಲಿ ಕಲಿತೆನಮ್ಮ

ಪೊಲೀಸರು ಗೆಳೆಯರೆಂಬುದ ಕಲಿತೆ
ಸತ್ಯಕ್ಕೆ ಸಾವಿಲ್ಲ,ನ್ಯಾಯಕ್ಕೆ ಕಣ್ಣಿಲ್ಲ ಎಂಬುದ ಕಲಿತೆ
ಕೆಲವೊಮ್ಮೆ ತಪ್ಪು ಮಾಡಬಹುದು ನಾವು,
ಹಾಗಂತ ಕೊಲೆಗಡುಕರಿಗೆ ತಪ್ಪದು ಸಾವು

ಬಲಿಷ್ಠವಾಗಿರಬೇಕು ಸರಕಾರ ಎಂಬುದ ಕಲಿತೆ
ಸರಕಾರ ಮಾಡಿದ್ದೇ ಸರಿ,ತಪ್ಪೇ ಮಾಡದು
ಅದೆಂದೂ ಎಂಬುದ ಕಲಿತೆನು ನಾನು
ನಮ್ಮ ನಾಯಕ ಮಣಿಗಳು ಮರ್ಯಾದಾ ಪುರುಷೋತ್ತಮರು
ಹಾಗೆಂದೇ ನಾವು ಮರಳಿ ಮರಳಿ
ಅವರನ್ನೇ ಆರಿಸಿ ಕಳುಹಿಸುವೆವು.

ಕೆಟ್ಟದ್ದೇನಲ್ಲ ಯುದ್ಧ ಎಂಬುದ ಕಲಿತೆನು ನಾನು
ಮಾಡಿದ್ದೇವಲ್ಲ ನಾವೂ ಚೀನಾ-ಪಾಕ್ ವಿರುದ್ಧ ಯುದ್ಧ
ಅಂಥ ಮಹಾ ಸಂಗ್ರಾಮಗಳ ಬಗ್ಗೆ ಕಲಿತೆನು ನಾನು
ಒಂದಲ್ಲ ಒಂದು ದಿನ ನನಗೂ ಸಿಕ್ಕೇ ಸಿಗುವುದೊಂದು ಅವಕಾಶ ಎಂಬುದನು ಕಲಿತೆ ನಾನು
ಇದನ್ನೇ ನಾನಿಂದು ಶಾಲೆಯಲ್ಲಿ ಕಲಿತೆನಮ್ಮ
ಇಷ್ಟನ್ನೇ ನಾನಿಂದು ಶಾಲೆಯಲ್ಲಿ ಕಲಿತೆನಮ್ಮ

ಬರೆದವರು ಡಾ.ಮಹಾಬಲೇಶ್ವರ ರಾವ್(ಅಮೆರಿಕಾದ ಟಾಮ್ ಫ್ಯಾಕ್ಟ್ಸನ್ ನ ವಾಟ್ ಡಿಡ್ ಯು ಲರ್ನ್ ಇನ ಸ್ಕೂಲ್ ಟುಡೇ'(1962) ಎಂಬ ಹಾಡಿನ ಆಧಾರ)ಜೂನ್ 12ರ ತರಂಗ ವಾರ ಪತ್ರಿಕೆಯಲ್ಲಿ ಪ್ರಕಟಿತ ಕವನ